ಗೋವಾ: ಪ್ರವಾಸಿ ಕುಟುಂಬದ ಮೇಲೆ ಖಡ್ಗ, ಚಾಕುವಿನಿಂದ ದಾಳಿ; ಮೂವರ ಬಂಧನ
ಪಣಜಿ, ಮಾ. 13: ಗೋವಾದ ಅಂಜುನಾ ಪ್ರದೇಶದಲ್ಲಿರುವ ರಿಸೋರ್ಟ್ನಲ್ಲಿ ಪ್ರವಾಸಿ ಕುಟುಂಬವೊಂದರ ಮೇಲೆ ದುಷ್ಕರ್ಮಿಗಳ ಗುಂಪೊಂದು ಖಡ್ಗ ಹಾಗೂ ಚಾಕುವಿನಿಂದ ರವಿವಾರ ದಾಳಿ ನಡೆಸಿದೆ ಎಂದು ಆರೋಪಿಸಲಾಗಿದೆ.
ಈ ಘಟನೆಯ ಫೋಟೊ ಹಾಗೂ ವೀಡಿಯೊಗಳಲ್ಲಿ ಕುಟುಂಬದ ಸದಸ್ಯರಿಗೆ ಗಂಭೀರ ಗಾಯಗಳಾಗಿರುವುದು ಕಂಡು ಬಂದಿದೆ. ಕುಟುಂಬದ ಸದಸ್ಯರಲ್ಲಿ ಒಬ್ಬರಾಗಿರುವ ಜತಿನ್ ಶರ್ಮಾ ವಿವರಗಳನ್ನು ಇನ್ಸ್ಟಾಗ್ರಾಂ ಹ್ಯಾಂಡಲ್ನಲ್ಲಿ ಶೇರ್ ಮಾಡಿಕೊಂಡ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ.
ಈ ಆಘಾತಕಾರಿ ದಾಳಿಯನ್ನು ವಿವರಿಸಿರುವ ಜತಿನ್ ಶರ್ಮಾ, ಘಟನೆಗೆ ಸಂಬಂಧಿಸಿ ತಾನು ಸಿಬ್ಬಂದಿ ಕುರಿತು ಮ್ಯಾನೇಜರ್ಗೆ ದೂರು ನೀಡಿದ್ದೇನೆ. ಅನಂತರ ಅವರು ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಿದ್ದಾರೆ ಎಂದಿದ್ದಾರೆ.
ರೆಸೋರ್ಟ್ನಲ್ಲಿ ಕುಟುಂಬ ಹಾಗೂ ಸಿಬ್ಬಂದಿ ನಡುವೆ ಸಣ್ಣ ವಾಗ್ವಾದ ನಡೆದ ಬಳಿಕ ಐವರಿದ್ದ ತಂಡವೊಂದು ಖಡ್ಗ ಹಾಗೂ ಚಾಕುವಿನಿಂದ ದಾಳಿ ನಡೆಸಿದೆ. ಮಾಹಿತಿ ಸ್ವೀಕರಿಸಿದ ಬಳಿಕ ಅಂಜುನಾ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಅನಂತರ ಅವರನ್ನು ಬಿಡುಗಡೆ ಮಾಡಿದ್ದಾರೆ.
ಅನಂತರ ಸಂಜೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಘಟನೆಯನ್ನು ಖಂಡಿಸಿದ್ದಾರೆ. ಅಲ್ಲದೆ, ಸಮಾಜ ವಿರೋಧಿ ಶಕ್ತಿಗಳು ಇದರ ಹಿಂದಿದ್ದಾರೆ. ಪಿತೂರಿಗಾರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ತಾನು ಪೊಲೀಸರಿಗೆ ನಿರ್ದೇಶಿಸಿದ್ದೇನೆ ಎಂದು ತಿಳಿಸಿದ್ದಾರೆ.
ಅನಂತರ ಪೊಲೀಸರು ಪ್ರಕರಣದ ಆರೋಪಿಗಳಾದ ರೋಯ್ಸ್ಟನ್ ಡಯಾಸ್, ನೈರೋನ್ ಡಯಾಸ್, ಕಾಶಿನಾಥ್ ಅಗರ್ವಾಡೇಕರ್ ಅವರನ್ನು ಬಂಧಿಸಿದ್ದಾರೆ.