ಪಾಂಡವರಕಲ್ಲು: ಬಂಟ್ವಾಳ ಪ್ರಜಾಧ್ವನಿ ಯಾತ್ರೆ

ಬಂಟ್ವಾಳ, ಮಾ.14: ದೇಶದಲ್ಲಿ ಅಭಿವೃದ್ಧಿಯ ಬದಲು ಎಲ್ಲವನ್ನೂ ಖಾಸಗಿಯವರಿಗೆ ಮಾರಾಟ ಮಾಡುತ್ತಿರುವ ಬಿಜೆಪಿಯವರಿಗೆ ಕೋಮು ಭಾವನೆಯನ್ನು ಕೆರಳಿಸುವುವುದೇ ಮುಂದಿನ ಚುನಾವಣೆಗೆ ಪ್ರಧಾನ ಅಸ್ತ್ರವಾಗಲಿದೆ ಎಂದು ಪುತ್ತೂರು ತಾಲೂಕಿನ ಬನ್ನೂರು ರೈತ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಈಶ್ವರ ಭಟ್ ಹೇಳಿದ್ದಾರೆ.
ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ನಡೆಯುತ್ತಿರುವ ಬಂಟ್ವಾಳ ಪ್ರಜಾಧ್ವನಿ ಯಾತ್ರೆಯ ಪ್ರಯುಕ್ತ ಪಾಂಡವರಕಲ್ಲು ಜಂಕ್ಷನ್ ನಲ್ಲಿ ನಡೆದ 3ನೇ ದಿನದ ಸಾರ್ವಜನಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಬಿಜೆಪಿಯ ಆಡಳಿತಾವಧಿಯಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳು ನಡೆಯದ ಕಾರಣ ಅಪಪ್ರಚಾರ, ನಕಲಿ ಹಿಂದುತ್ವ, ಗೋಮಾತೆ, ಶವ ರಾಜಕೀಯ, ಲವ್ ಜಿಹಾದ್ ಇತ್ಯಾದಿಗಳ ಮೂಲಕ ಮುಂಬರುವ ಚುನಾವಣೆಯನ್ನು ಗೆಲ್ಲಲು ಷಡ್ಯಂತ್ರ ರೂಪಿಸಬೇಕಷ್ಟೇ ಎಂದು ವ್ಯಂಗ್ಯವಾಡಿದರು.
ದೇಶದ ಎಲ್ಲ ವರ್ಗದ ಜನರಿಗೂ ಸಮಾನವಾಗಿ ಅವಕಾಶ ಒದಗಿಸಿ, ಎಲ್ಲರ ಶ್ರೇಯೋಭಿವೃದ್ಧಿ ಬಯಸುವ ದೇಶದ ಅತೀ ದೊಡ್ಡ ಏಕೈಕ ಜಾತ್ಯತೀತ ಪಕ್ಷವಿದ್ದರೆ ಅದು ಕಾಂಗ್ರೆಸ್ ಮಾತ್ರ. ಅದೇ ರೀತಿ ಬಂಟ್ವಾಳದ ಸುದೀರ್ಘ ಅವಧಿಯ ಶಾಸಕ, ಮಾಜಿ ಸಚಿವ ಬಿ ರಮಾನಾಥ ರೈ ಎಲ್ಲರನ್ನೂ ಸಮಾನವಾಗಿ ಕಾಣುವ, ಎಲ್ಲ ಧರ್ಮ, ಮತ್ತು ಧರ್ಮದವರನ್ನು ಗೌರವಿಸುವ, ನಿಷ್ಕಳಂಕ ಮನಸ್ಸಿನ ಅತ್ಯಂತ ದೊಡ್ಡ ದೈವಭಕ್ತರಾಗಿದ್ದು, ಅವರನ್ನು ಹಿಂದೂ ವಿರೋಧಿ ಎಂದು ಒಂದು ಬಾರಿ ಅಪಪ್ರಚಾರ ನಡೆಸಿ ಸೋಲಿಸುವಲ್ಲಿ ಬಿಜೆಪಿಗರು ಸಫಲರಾಗಿರಬಹುದು. ಆದರೆ ಮುಂದಿನ ದಿನಗಳಲ್ಲಿ ಅದು ಸಾಧ್ಯವಿಲ್ಲ. ಜನ ಸತ್ಯ ಏನು ಎಂಬುದನ್ನು ಅರಿತು ಕೊಂಡಿದ್ದಾರೆ ಎಂದರು.
ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ವೈಯುಕ್ತಿಕವಾಗಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಸುದೀರ್ಘ ರಾಜಕೀಯ ಮಾಡಿದ್ದೇನೆ. ಪಕ್ಷಕ್ಕೂ ಯಾವುದೇ ಕಳಂಕ ತಂದಿಲ್ಲ. ಕ್ಷೇತ್ರದ ಜನ ಹಾಗೂ ಈ ರಾಜ್ಯದ ಜನರಿಗೆ ಅವಮಾನವಾಗುವ ಯಾವುದೇ ರೀತಿಯ ಕೆಲಸವನ್ನು ನಾನು ಮಾಡಿಲ್ಲ. ಇದನ್ನು ಜನ ಅರ್ಥ ಮಾಡಿಕೊಂಡು ಈ ಬಾರಿಯ ನನ್ನ ಕೊನೆಯ ಚುಣಾವಣೆಯಲ್ಲಿ ಮತ್ತೊಮ್ಮೆ ಆರಿಸಿ ಕಳುಹಿಸದಲ್ಲಿ ಕಳೆದ ಬಾರಿ ಮಾಡಿದ್ದಕ್ಕಿಂತ ದುಪ್ಪಟ್ಟು ಅನುದಾನ ತಂದು ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸುತ್ತೇನೆ. ಚುನಾವಣೆಗೆ ಇರುವ ಕೆಲವು ದಿನ ನೀವೆಲ್ಲರೂ ನನಗಾಗಿ ದಣಿವರಿಯದೆ ಕೆಲಸ ಮಾಡಿ, ಮುಂದಿನ ಐದು ವರ್ಷ ನಾನು ನಿಮಗೆಲ್ಲರಿಗಾಗಿ ದಣಿವರಿಯದೆ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭ ಯಾತ್ರಾ ಸಂಚಾಲಕ ಪಿಯೂಸ್ ಎಲ್. ರೋಡ್ರಿಗಸ್, ಪಕ್ಷ ಪ್ರಮುಖರಾದ ಚಂದ್ರಪ್ರಕಾಶ್ ಶೆಟ್ಟಿ, ಬಿ.ಪದ್ಮಶೇಖರ್ ಜೈನ್, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಸದಾಶಿವ ಬಂಗೇರ, ರಾಜೀವ್ ಶೆಟ್ಟಿ ಎಡ್ತೂರು, ಮಾಯಿಲಪ್ಪ ಸಾಲ್ಯಾನ್, ಬಿ.ಎಂ.ಅಬ್ಬಾಸ್ ಅಲಿ, ಪಿ.ಎ.ರಹೀಂ, ಪ್ರವೀಣ್ ರೋಡ್ರಿಗಸ್, ಸತೀಶ್ಚಂದ್ರ ಹೊಸಮನೆ, ಬಿ.ಅಬ್ದುಲ್ಲ, ಜಯ ಬಂಗೇರ, ಸುಧಾಕರ್ ಶೆಣೈ ಖಂಡಿಗ, ಅಸ್ಮಾ ಅಝೀಝ್, ಡೀಕಯ್ಯ ಬಂಗೇರ, ಬಾಲಾಜಿ ರಾವ್, ಪ್ರಶಾಂತ್ ಜೈನ್, ರಕ್ಷಿತಾ, ಮೋಹಿನಿ, ಜಾನ್ ಸಿಕ್ವೇರ, ವಸಂತ ಮಿತ್ತೋಟು, ಮೋಹನ್ ಸಾಲ್ಯಾನ್, ಸುಧೀರ್ ಶೆಟ್ಟಿ, ಪ್ರಶಾಂತ್ ಕೋಟ್ಯಾನ್, ನೆಲ್ವಿಸ್ಟರ್ ಪಿಂಟೋ, ಸುಚಿತ್ರಾ ಶೆಟ್ಟಿ, ಲವೀನಾ ಮೊರಾಸ್, ಎಸ್.ಪಿ.ಮುಹಮ್ಮದ್ ರಫೀಕ್ ಮೊದಲಾದವರು ಉಪಸ್ಥಿತರಿದ್ದರು.
ಬಡಗಕಜೆಕಾರು ಗ್ರಾಪಂ ಉಪಾಧ್ಯಕ್ಷ ಬಿ.ಕೆ.ಬಂಗೇರ ಪರ್ಲ ಸ್ವಾಗತಿಸಿದರು. ಮಾಣಿ ಗ್ರಾಪಂ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು.