ದರೋಡೆ ಪ್ರಕರಣ: ಕೊಡಗಿನ ವ್ಯಕ್ತಿ ಸೇರಿ ಮೂವರನ್ನು ಬಂಧಿಸಿದ ಗೋವಾ ಪೊಲೀಸರು
ಮಡಿಕೇರಿ ಮಾ.14 : ಗೋವಾದಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲೆಯ ಆರೋಪಿ ಸೇರಿದಂತೆ ಮೂವರನ್ನು ಗೋವಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಿದ್ದಾಪುರ ಹೈಸ್ಕೂಲ್ ಪೈಸಾರಿ ನಿವಾಸಿ ಶಾಜಿ ಸೇರಿದಂತೆ ಕೇರಳ ರಾಜ್ಯದ ಶರೀಫ್ ಹಾಗೂ ಶ್ರೀತು ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.
ಗೋವಾ ರಾಜಧಾನಿ ಪಣಜಿಯ ಪೆರನಮ್ ಸೇರಿದಂತೆ ಸುತ್ತಲಿನ ಪ್ರವಾಸಿತಾಣಗಳಲ್ಲಿ, ಜನನಿಬಿಡ ಪ್ರದೇಶದಲ್ಲಿ ಭಾರತೀಯರು ಹಾಗೂ ವಿದೇಶಿಯರನ್ನು ಗುರಿಯಾಗಿಸಿ ತಂಗುತ್ತಿದ್ದ ಮನೆ, ರೆಸಾರ್ಟ್ ಮತ್ತಿತರೆಡೆ ಬೀಗ ಮುರಿದು ಮತ್ತು ಕಿಟಕಿ ಒಡೆದು ಬೆಲೆಬಾಳುವ ವಸ್ತುಗಳು, ಹಣವನ್ನು ಮೂವರು ದೋಚುತ್ತಿದ್ದರು ಎಂಬ ಆರೋಪದಡಿ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ಕೈಗೊಂಡ ಪೊಲೀಸರು ಆರೋಪಿಗಳ ಪತ್ತೆಗೆ ತಂಡ ರಚಿಸಿದ್ದರು. ಇದೀಗ ಮೂವರನ್ನು ಗೋವಾ ಪೊಲೀಸರು ಬಂಧಿಸಿ ತನಿಖೆಗೆ ಒಳಪಡಿಸಿದ್ದಾರೆ. ಆರೋಪಿಗಳಿಂದ ಅಪಾರ ಪ್ರ ಮಾಣದ ನಗದು, ಬೆಲೆ ಬಾಳುವ ಕ್ಯಾಮರ, ಲೆನ್ಸ್, ಲಕ್ಷಾಂತರ ರೂಪಾಯಮೌಲ್ಯದ ಮೊಬೈಲ್, ಲ್ಯಾಪ್ಟಾಪ್, ಆಭರಣ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಫೋಟೋ ವೈರಲ್
ಕೊಡಗು ಜಿಲ್ಲೆಯ ಸಿದ್ದಾಪುರದ ಆರೋಪಿ ಶಾಜಿ ಬಿಜೆಪಿ ಪಕ್ಷದ ಪರ ಧ್ವಜ ಹಿಡಿದು ಪ್ರಚಾರ ಮಾಡುತ್ತಿರುವ ಫೋಟೋಗಳು ಇದೀಗ ವೈರಲ್ ಆಗಿದೆ.