ಶೋಭಕ್ಕ, ಮಾಳವಿಕಾ ಮನೆಗಳಲ್ಲಿ ಅಡುಗೆ ಮಾಡಲ್ವಾ?, ದರ ಏರಿಕೆ ಬಗ್ಗೆ ಮಾತಾನಾಡುತ್ತಿಲ್ಲ ಏಕೆ: ಪುಷ್ಪ ಅಮರನಾಥ್ ಪ್ರಶ್ನೆ
''ಬಿಜೆಪಿ ಸರ್ಕಾರ ಕೆಳಗಿಳಿದರೆ ಮಾತ್ರ ಬೆಲೆ ಇಳಿಕೆ''

ಮಡಿಕೇರಿ ಮಾ.15 : ಬಿಜೆಪಿ ಸರ್ಕಾರ ಕೆಳಗಿಳಿದರೆ ಮಾತ್ರ ಗಗನಕ್ಕೇರಿರುವ ಅಗತ್ಯ ವಸ್ತುಗಳ ಬೆಲೆ ಇಳಿಕೆಯಾಗಲು ಸಾಧ್ಯವೆಂದು ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿಯ ರಾಜ್ಯಾಧ್ಯಕ್ಷೆ ಡಾ.ಪುಷ್ಪ ಅಮರನಾಥ್ ಅಭಿಪ್ರಾಯಪಟ್ಟಿದ್ದಾರೆ.
ಮಡಿಕೇರಿಯಲ್ಲಿ ಮಹಿಳಾ ಕಾಂಗ್ರೆಸ್ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದರು.
ಬಿಜೆಪಿ ಸರ್ಕಾರ ಬಂದ ನಂತರ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಬೆಲೆ ಏರಿಕೆಯಾಗುತ್ತಲೇ ಇದೆ. 410 ರೂ. ಇದ್ದ ಗ್ಯಾಸ್ ಬೆಲೆ ಇಂದು 1200 ರೂ.ಗೆ ತಲುಪಿದೆ. ಸಿದ್ದರಾಮಯ್ಯರನ್ನು ಹೊಡೆದು ಹಾಕಿ ಎಂದು ಹೇಳುವ ಬಿಜೆಪಿಗರು ಮೊದಲು ಅಗತ್ಯ ವಸ್ತುಗಳ ಬೆಲೆಯನ್ನು ಇಳಿಕೆ ಮಾಡಿ ಜನಸಾಮಾನ್ಯರ ಪರ ಇದ್ದೇವೆ ಎನ್ನುವುದನ್ನು ಸಾಬೀತು ಪಡಿಸಲಿ ಎಂದು ಸವಾಲು ಹಾಕಿದರು.
ಶೋಭಕ್ಕ, ಮಾಳವಿಕಾ, ಜೊಲ್ಲೆ ಅಕ್ಕ, ತಾರಕ್ಕ ಬಿಜೆಪಿ ಮಹಿಳಾ ಮೋರ್ಚಾದ ಎಲ್ಲಾ ಪದಾಧಿಕಾರಿಗಳೇ ನಿಮ್ಮ ಮನೆಯಲ್ಲಿ ಅಡುಗೆ ಮಾಡಲ್ವಾ, ದರ ಏರಿಕೆ ಬಗ್ಗೆ ನೀವ್ಯಾಕೆ ಮಾತಾನಾಡುತ್ತಿಲ್ಲ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.
ಮೇ, 2014 ರಲ್ಲಿ (ಬಿಜೆಪಿ ಅಧಿಕಾರ ವಹಿಸಿಕೊಂಡಾಗ), ಪೆಟ್ರೋಲ್ ಮೇಲಿನ ಅಬಕಾರಿ ಸುಂಕವು ಲೀಟರ್ಗೆ ರೂ.9.20 ಮತ್ತು ಡೀಸೆಲ್ಗೆ ರೂ.3.46 ಆಗಿತ್ತು. ಕಳೆದ 8.5 ವರ್ಷಗಳಲ್ಲಿ, ಕೇಂದ್ರ ಬಿಜೆಪಿ ಸರ್ಕಾರವು ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್ಗೆ 19.90 ಕ್ಕೆ ಮತ್ತು ಡೀಸೆಲ್ಗೆ ಲೀಟರ್ಗೆ 15.80 ಕ್ಕೆ ಹೆಚ್ಚಿಸಿದೆ. ಇದು ಡೀಸೆಲ್ ಮೇಲಿನ ಅಬಕಾರಿ ಸುಂಕದಲ್ಲಿ ಶೇ.357 ಹೆಚ್ಚಳ ಮತ್ತು ಪೆಟ್ರೋಲ್ ಮೇಲಿನ ಅಬಕಾರಿ ಸುಂಕದಲ್ಲಿ ಶೇ.54 ಹೆಚ್ಚಳವಾಗಿದೆ ಎಂದರು.
ಪೆಟ್ರೋಲಿಯಂ ವಲಯದ ಮೇಲಿನ ತೆರಿಗೆಯನ್ನು ಹೆಚ್ಚಿಸುವ ಮೂಲಕ ಮೋದಿ ಸರ್ಕಾರವು 8.5 ವರ್ಷಗಳಲ್ಲಿ ರೂ.29.24 ಲಕ್ಷ ಕೋಟಿ ಗಳಿಸಿದೆ. 2014ರ ಮೇ 26ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಧಿಕಾರ ಸ್ವೀಕರಿಸಿದಾಗ ಭಾರತೀಯ ತೈಲ ಕಂಪನಿಗಳ ತೈಲ ಬುಟ್ಟಿ ಬೆಲೆ 108 ಅಮೆರಿಕನ್ ಡಾಲರ್ ಆಗಿತ್ತು. ಫೆಬ್ರವರಿ 7, 2023 ರಂದು, ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್ಗೆ 80.84 ಆಗಿದೆ ಎಂದರು.
ಕಾಂಗ್ರೆಸ್-ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ, ಕಚ್ಚಾ ತೈಲದ ಬೆಲೆಯು ಬ್ಯಾರೆಲ್ಗೆ 108 ಆಗಿತ್ತು, ಆದರೆ ಪೆಟ್ರೋಲ್ ಮತ್ತು ಡೀಸೆಲ್ ಪ್ರತಿ ಲೀಟರ್ಗೆ ರೂ 71.41 ಮತ್ತು ರೂ 55.49 ಇತ್ತು, ಇದು ದೆಹಲಿಯಲ್ಲಿ ರೂ.96.72 ಮತ್ತು ರೂ 89.62 ಕ್ಕೆ ಏರಿಕೆಯಾಗಿದೆ, ಇಂದು ಯುಪಿಎ ದರದಂತೆ ಡಾಲರ್ಗಳಲ್ಲಿ ಕಚ್ಚಾ ತೈಲವು ಶೇಕಡಾ 25 ರಷ್ಟು ಕಡಿಮೆಯಾಗಿದೆ, ಆದರೆ ಬಿಜೆಪಿ ಸರ್ಕಾರವು ಪೆಟ್ರೋಲ್-ಡೀಸೆಲ್ ಬೆಲೆಗಳನ್ನು ಕ್ರಮವಾಗಿ 25.31 ಮತ್ತು 34.13 ರೂ.ಗೆ ಹೆಚ್ಚಿಸಿದೆ ಎಂದು ವಿವರಿಸಿದರು.
ನಿತ್ಯ ಬೆಲೆ ಏರಿಕೆ ಮಾಡುತ್ತಿರುವ ಭ್ರಷ್ಟ ಮತ್ತು ಬಡವರ ವಿರೋಧಿ ಬಿಜೆಪಿ ಸರ್ಕಾರದ ವಿರುದ್ಧ ಹೋರಾಟ ತೀವ್ರಗೊಳಿಸುವ ಅಗತ್ಯವಿದೆ ಎಂದರು.
ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್, ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಈ ಸಂದರ್ಭ ಹಾಜರಿದ್ದರು.








