ರಾಜಕೀಯ ಮಾಡುವುದರಲ್ಲಿ ಬಿಜೆಪಿ ನಿಪುಣ: ಶಶಿ ತರೂರ್

ಹೊಸದಿಲ್ಲಿ: ರಾಜಕೀಯ ಮಾಡುವುದರಲ್ಲಿ ಬಿಜೆಪಿ ನಿಪುಣವಾಗಿದೆ ಎಂದು ಇಂಡಿಯಾ ಟುಡೆ ಕಾನ್ಕ್ಲೇವ್ ಅನ್ನು ಉದ್ದೇಶಿಸಿ ಮಾತನಾಡುತ್ತಾ ಕಾಂಗ್ರೆಸ್ ಸಂಸದ ಶಶಿ ತರೂರ್(Shashi Tharoor) ಅವರು ಅಭಿಪ್ರಾಯಿಸಿದ್ದಾರೆ.
ಬ್ರಿಟನ್ ನಲ್ಲಿ ತಾವು ನೀಡಿದ ಹೇಳಿಕೆಗಳಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕೇ ಎಂಬ ಪ್ರಶ್ನೆಗೆ ತರೂರ್ ಉತ್ತರಿಸಿದರು. ಈ ವಿಚಾರ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಜಟಾಪಟಿಗೆ ಕಾರಣವಾಗಿದೆ.
ಬಿಜೆಪಿ, ರಾಜಕೀಯದಲ್ಲಿ ನಿಷ್ಣಾತವಾಗಿದೆ ಎಂದು ನಾನು ಹೇಳಲೇಬೇಕು. ಅವರು ಹೇಳದ ವಿಚಾರಕ್ಕೆ ಸಂಬಂಧಿಸಿ ರಾಹುಲ್ ಗಾಂಧಿಯನ್ನು ಬಿಜೆಪಿ ನಾಯಕರು ದೂಷಿಸುತ್ತಿದ್ದಾರೆ”ಎಂದು ಮಾಜಿ ಕೇಂದ್ರ ಸಚಿವರು ಹೇಳಿದರು.
"ರಾಹುಲ್ ಗಾಂಧಿ ಅವರು ಕ್ಷಮೆ ಕೇಳಲು ಹೋಗುವುದಿಲ್ಲ. ರಾಜಕೀಯದ ಬಗ್ಗೆ ಮತನಾಡಿದ್ದಕ್ಕೆ ಯಾರಾದರೂ ಕ್ಷಮೆಯಾಚಿಸಬೇಕಾದರೆ, ವಿದೇಶದಲ್ಲಿ ಈ ರೀತಿ ಮಾತನಾಡುವ ಮೋದಿಯವರೇ ಮೊದಲು ಕ್ಷಮೆಯಾಚಿಸಬೇಕು. ರಾಹುಲ್ ಗಾಂಧಿ ಯಾವ ದೇಶವಿರೋಧಿ ಹೇಳಿಕೆಯನ್ನೂ ನೀಡಿಲ್ಲ'' ಎಂದು ಕಾಂಗ್ರೆಸ್ ಸಂಸದರು ಹೇಳಿದ್ದಾರೆ.
ಭಾರತೀಯ ಪ್ರಜಾಪ್ರಭುತ್ವದ ರಚನೆಗಳು "ಕ್ರೂರ ದಾಳಿ"ಗೆ ಒಳಗಾಗಿವೆ ಹಾಗೂ ದೇಶದ ಸಂಸ್ಥೆಗಳ ಮೇಲೆ ಪೂರ್ಣ ಪ್ರಮಾಣದ ದಾಳಿ ನಡೆಯುತ್ತಿದೆ ಎಂದು ಲಂಡನ್ನಲ್ಲಿ ನೀಡಿದ ಹೇಳಿಕೆಗಾಗಿ ರಾಹುಲ್ ಗಾಂಧಿ ಟೀಕೆಗೆ ಗುರಿಯಾಗಿದ್ದಾರೆ.







