Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಅಂಧತ್ವಕ್ಕೆ ನಾಂದಿ ಹಾಡುವ ಗ್ಲಾಕೋಮಾ

ಅಂಧತ್ವಕ್ಕೆ ನಾಂದಿ ಹಾಡುವ ಗ್ಲಾಕೋಮಾ

ವಿಶ್ವ ಗ್ಲಾಕೋಮಾ ಸಪ್ತಾಹ ಮಾರ್ಚ್ 12-18

ಡಾ. ಮುರಲೀ ಮೋಹನ್ ಚೂಂತಾರುಡಾ. ಮುರಲೀ ಮೋಹನ್ ಚೂಂತಾರು18 March 2023 12:22 PM IST
share
ಅಂಧತ್ವಕ್ಕೆ ನಾಂದಿ ಹಾಡುವ ಗ್ಲಾಕೋಮಾ
ವಿಶ್ವ ಗ್ಲಾಕೋಮಾ ಸಪ್ತಾಹ ಮಾರ್ಚ್ 12-18

ಕಣ್ಣುಗಳು ನಮ್ಮ ದೇಹದ ಸಂವೇದನೆಯ ಅಂಗಗಳಲ್ಲಿ ಅತ್ಯಮೂಲ್ಯವಾದ ಅಂಗವಾಗಿದೆ. ಕಣ್ಣುಗಳು ನಮಗೆ ಜೀವನದ ಬಾಹ್ಯ ಜಗತ್ತಿನ ವಿವಿಧ ವಿಚಾರಗಳ ಅನುಭವವನ್ನು ಹೊಂದಲು ನೆರವಾಗುತ್ತವೆ. ಭಾವೋದ್ವೇಗಗಳು, ಭಾವನೆಗಳು ಮತ್ತು ನಮ್ಮ ಸುತ್ತ ಮುತ್ತಲಿನ ಪರಿಸರದ ಅದ್ಭುತವಾದ ಬಣ್ಣಬಣ್ಣದ ಜಗತ್ತನ್ನು ಆಸ್ವಾದಿಸಲು ಕಣ್ಣುಗಳು ನಮಗೆ ಅತೀ ಅವಶ್ಯಕ. ದೃಷ್ಟಿ ಇಲ್ಲದ ನಮ್ಮ ಜೀವನ ಬಲು ಕಷ್ಟಕರ. ಈ ನಿಟ್ಟಿನಲ್ಲಿ ನಮ್ಮ ಕಣ್ಣುಗಳ ಸೂಕ್ತ ಆರೈಕೆ ಮತ್ತು ಪೋಷಣೆ ಅತೀ ಅಗತ್ಯ.

ಒಬ್ಬ ವ್ಯಕ್ತಿ ಯಾವುದೇ ವಸ್ತುವನ್ನು ಸ್ಪಷ್ಟವಾಗಿ ಕಾಣಲು ಕಾರ್ನಿಯಾ, ರೆಟಿನಾ ಮತ್ತು ದೃಷ್ಟಿನರ (Optic Nerve)ಗಳ ಕಾರ್ಯಕ್ಷಮತೆ ಅತೀ ಅಗತ್ಯ. ಯಾವುದಾದರೂ ಕಾರಣದಿಂದ ದೃಷ್ಟಿನರಕ್ಕೆ ತೊಂದರೆ ಅಥವಾ ಹಾನಿ ಆದಲ್ಲಿ ವಸ್ತು ಸರಿಯಾಗಿ ಕಾಣಿಸದು.

ಏನಿದು ಗ್ಲಾಕೋಮಾ?

ಗ್ಲಾಕೋಮಾ ಎನ್ನುವುದು ಕಣ್ಣುಗಳ ದೃಷ್ಟಿನರಕ್ಕೆ ಸಂಬಂಧಿಸಿದ ರೋಗವಾಗಿದ್ದು, ನಿರಂತರವಾಗಿ ದೃಷ್ಟಿನರದ ಮೇಲೆ ಉಂಟಾಗುವ ಹಾನಿಯಿಂದಾಗಿ ದೃಷ್ಟಿಯ ಮೇಲೆ ಋಣಾತ್ಮಕ ಪರಿಣಾಮ ಉಂಟು ಮಾಡಬಹುದು. ಸಾಮಾನ್ಯವಾಗಿ ಗ್ಲಾಕೋಮಾ ರೋಗದ ಆರಂಭದಲ್ಲಿ ಹೊರಭಾಗದ ದೃಷ್ಟಿ ಕುಂಠಿತವಾಗುತ್ತದೆ. ಕ್ರಮೇಣ, ಯಾವುದೇ ಚಿಕಿತ್ಸೆ ನೀಡದಿದ್ದಲ್ಲಿ ಮಧ್ಯಭಾಗದ ದೃಷ್ಟಿ ಕೂಡಾ ಕುಂಠಿತವಾಗಿ ಕುರುಡುತನ ಉಂಟಾಗಬಹುದು.

ಸಾಮಾನ್ಯವಾಗಿ ಹೆಚ್ಚಿನ ಜನರಲ್ಲಿ ಗ್ಲಾಕೋಮಾ ರೋಗವಿರುವವರಲ್ಲಿ ಕಣ್ಣಿನೊಳಗೆ ದ್ರವ್ಯದ ಒತ್ತಡ ಹೆಚ್ಚಾಗಿರುತ್ತದೆ. ಈ ಹೆಚ್ಚಿದ ಒತ್ತಡದಿಂದಾಗಿ ದೃಷ್ಟಿನರದ ಮೇಲೆ ಹೆಚ್ಚಿನ ಹಾನಿ ಆಗುತ್ತದೆ. ವಿಶೇಷ ಸಂದರ್ಭಗಳಲ್ಲಿ ಕೆಲವೊಮ್ಮೆ ಸಹಜ ಕಣ್ಣಿನ ಒತ್ತಡದಲ್ಲಿಯೂ, ಗ್ಲಾಕೋಮಾ ಕಾಣಿಸಿಕೊಳ್ಳುವ ಸಾಧ್ಯತೆ ಇಲ್ಲವೆಂದಿಲ್ಲ. ಸಹಜ ಕಣ್ಣಿನ ಒತ್ತಡದಲ್ಲಿ ಉಂಟಾಗುವ ಗ್ಲಾಕೋಮಾ ಸಾಮಾನ್ಯವಾಗಿ ಕಣ್ಣಿನ ದೃಷ್ಟಿನರಕ್ಕೆ ರಕ್ತ ಪೂರೈಕೆಯ ಅಭಾವದಿಂದ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಗ್ಲಾಕೋಮಾದಲ್ಲಿ ಎರಡು ಬಿನ್ನರೀತಿಯ ವಿಧಗಳಿವೆ. ತೆರೆದ ಕೋನದ ಗ್ಲಾಕೋಮಾ ಮತ್ತು ಮುಚ್ಚಿದ ಕೋನದ ಗ್ಲಾಕೋಮಾ ತೆರೆದ ಕೋನದ ಗ್ಲಾಕೋಮಾ ದೀರ್ಘಕಾಲದ ಕಾಯಿಲೆಯಾಗಿದ್ದು, ಹಲವಾರು ವರ್ಷಗಳಿಂದ, ಹಲವಾರು ಕಾರಣಗಳು ನಿರಂತರವಾಗಿ ಕಾಡಿಕೊಂಡು ನಿಧಾನವಾಗಿ ಕಾಣಿಸಿಕೊಳ್ಳುತ್ತದೆ. ಆದರೆ ಮುಚ್ಚಿದ ಕೋನದ ಗ್ಲಾಕೋಮಾ ಯಾವುದೇ ಮುನ್ಸೂಚನೆ ಇಲ್ಲದೆ ಕಾಣಿಸಿಕೊಳ್ಳಬಹುದು. ಒಟ್ಟಿನಲ್ಲಿ ಕಣ್ಣಿನೊಳಗಿರುವ ದ್ರವವಾದ ‘ಆಕ್ವಯಸ್ ಹ್ಯೂಮರ್’, ಕಣ್ಣಿನೊಳಗೆ ವಿವಿಧ ಚಾನೆಲ್‌ಗಳ ಮುಖಾಂತರ ಹರಿದು ಕಣ್ಣನ್ನು ಸದಾಕಾಲ ರಕ್ಷಿಸುತ್ತದೆ. ಈ ಚಾನೆಲ್‌ಗಳು, ಮುಚ್ಚಿಕೊಂಡಾಗ ಕಣ್ಣಿನೊಳಗಿನ ಒತ್ತಡ ಜಾಸ್ತಿಯಾಗಿ ಗ್ಲಾಕೋಮಾ ರೋಗಕ್ಕೆ ಕಾರಣವಾಗಬಹುದು. ಯಾವುದೇ ನಿರ್ದಿಷ್ಟ ಕಾರಣಗಳು ಇಲ್ಲದಿದ್ದರೂ ಆನುವಂಶಿಕ ಕಾರಣ ಬಹಳ ಪ್ರಮುಖವಾಗಿದ್ದು ಹೆತ್ತವರಿಂದ ಮಕ್ಕಳಿಗೆ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅದೇ ರೀತಿ ರಾಸಾಯನಿಕದಿಂದಾಗುವ ಗಾಯ ಅಥವಾ ಇನ್ನಿತರ ಗಾಯ ಇಲ್ಲವೇ ಸೋಂಕಿನಿಂದಾಗಿ ಈ ಚಾನೆಲ್‌ಗಳು ಮುಚ್ಚಿಕೊಂಡು ಕಣ್ಣಿನ ಒತ್ತಡ ಹೆಚ್ಚಲು ಕಾರಣವಾಗಬಹುದು.

ಹೇಗೆ ಪತ್ತೆ ಹಚ್ಚುವುದು?

ಗ್ಲಾಕೋಮಾ ರೋಗ ಜಾಗತಿಕವಾಗಿ ಬಹಳಷ್ಟು ಸದ್ದು ಮಾಡುತ್ತಿದ್ದು, ಕುರುಡುತನಕ್ಕೆ ಎರಡನೇ ಅತಿ ದೊಡ್ಡ ಕಾರಣವಾಗಿದೆ. ಕುರುಡುತನಕ್ಕೆ ಕಾರಣವಾಗುವ ಮೊದಲ ಸ್ಥಾನ ಕಣ್ಣಿನ ಪೊರೆಗೆ ಸಲ್ಲುತ್ತದೆ. ಗ್ಲಾಕೋಮಾ ರೋಗವನ್ನು ಸದ್ದಿಲ್ಲದ ‘ದೃಷ್ಟಿ ಕಳ್ಳ’ ಎಂದೂ ಕರೆಯಲಾಗುತ್ತದೆ. ಯಾಕೆಂದರೆ ದೃಷ್ಟಿ ಮಾಂದ್ಯತೆ ಬರಲು ಬಹಳ ಸಮಯ ಹಿಡಿಯುತ್ತದೆ ಮತ್ತು ಹಲವಾರು ವರ್ಷಗಳ ಬಳಿಕ ನಿಧಾನವಾಗಿ ಬರುತ್ತದೆ. ಯಾವುದೇ ನೋವಿಲ್ಲದ ಕಾರಣ ಜನರಿಗರಿವಿಲ್ಲದೆ ನಿಧಾನವಾಗಿ ರೋಗದ ತೀವ್ರತೆ ಹೆಚ್ಚುತ್ತದೆ. ಒಮ್ಮೆ ದೃಷ್ಟಿ ಹೀನತೆ ಬಂದ ಬಳಿಕ ಏನೂ ಮಾಡಲಾಗದ ಕಾರಣದಿಂದ ರೋಗವನ್ನು ತಡೆಗಟ್ಟುವ ಪ್ರಕ್ರಿಯೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. 80ವರ್ಷಕ್ಕಿಂತ ಕೆಳಗಿನವರಲ್ಲಿ ಪ್ರತೀ 10ರಲ್ಲಿ ಒಬ್ಬರಿಗೆ ಮತ್ತು 50 ವರ್ಷಕ್ಕಿಂತ ಕೆಳಗಿನವರಲ್ಲಿ ಪ್ರತೀ 200ಕ್ಕೆ ಒಬ್ಬರಲ್ಲಿ ಗ್ಲಾಕೋಮಾ ಬರುವ ಸಾಧ್ಯತೆ ಇರುತ್ತದೆ. ಆರಂಭಿಕ ಹಂತದಲ್ಲಿ ಗುರುತಿಸಿ, ಸೂಕ್ತ ಚಿಕಿತ್ಸೆ ನೀಡಿದಲ್ಲಿ ಅಂಧತ್ವವನ್ನು ತಡೆಯಬಹುದು.

1. ತೆರೆದ ಕೋನದ ದೀರ್ಘಕಾಲಿಕ ಗ್ಲಾಕೋಮಾ

(Open angle Chronic Glaucoma)

ಇದು ಹೆಚ್ಚಾಗಿ ನೋವಿರುವುದಿಲ್ಲ. ನಿಧಾನವಾಗಿ ಕಣ್ಣಿನೊಳಗಿನ ಒತ್ತಡ ಜಾಸ್ತಿಯಾದಂತೆ ರೋಗ ಲಕ್ಷಣಗಳು ಒಂದೊಂದಾಗಿ ಕಾಣಿಸಿಕೊಳ್ಳಬಹುದು. ನಿಧಾನವಾಗಿ ಹೊರಭಾಗದ ದೃಷ್ಟಿ (Peripheral Vision) ಕಡಿಮೆಯಾಗುತ್ತಾ ಬರುತ್ತದೆ. ಈ ಕಾಯಿಲೆ ಇರುವವರು ನಡೆಯುವಾಗ ನೇರ ನಡೆಯುತ್ತಾರೆ. ಅಕ್ಕಪಕ್ಕ ಇರುವ ವಸ್ತುಗಳು ಗೋಚರಿಸುವುದಿಲ್ಲ. ಇದರಿಂದ ಅವರು ಢಿಕ್ಕಿ ಹೊಡೆಯುವ ಸಂಭವ ಇರುತ್ತದೆ. ಓದುವಾಗ ಮತ್ತು ಬರೆಯುವಾಗ ಒಂದು ಬದಿಯಲ್ಲಿನ ಅಕ್ಷರ ಗೋಚರಿಸುವುದಿಲ್ಲ. ಕ್ರಮೇಣ ಸುತ್ತಮುತ್ತಲಿನ ದೃಷ್ಟಿ ಮಾಯವಾಗಿ ಕೇವಲ 5ರಿಂದ 10ಶೇ. ನೇರ ದೃಷ್ಟಿ ಉಳಿಯುತ್ತದೆ. ಇದಕ್ಕೆ ಸುರಂಗ ದೃಷ್ಟಿ (Tunnel Vision) ಎನ್ನುತ್ತಾರೆ. ಇದು ಮುಂದುವರಿದರೆ ಪೂರ್ತಿ ಅಂಧತ್ವ ಬರುತ್ತದೆ. ಈ ರೀತಿಯ ಗ್ಲಾಕೋಮಾವನ್ನು ಔಷಧಿಗಳ ಮುಖಾಂತರ ಕಣ್ಣಿನೊಳಗಿನ ಒತ್ತಡ ಕಡಿಮೆ ಮಾಡಿ ಗುಣಪಡಿಸಲಾಗುತ್ತದೆ. ಕೆಲವೊಮ್ಮೆ ಶಸ್ತ್ರಚಿಕಿತ್ಸೆಯ ಮುಖಾಂತರ ಕಣ್ಣಿನ ಒತ್ತಡ ಕಡಿಮೆ ಮಾಡಿ ಗುಣಪಡಿಸಲಾಗುತ್ತದೆ. ಸಾಮಾನ್ಯವಾಗಿ ಕಣ್ಣಿನ ಒತ್ತಡ 21mm Hg or 2.8 ka pa ಇದರ ಒಳಗೆ ಇರುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಈ ಒತ್ತಡ ಜಾಸ್ತಿಯಾಗಿ ಕಣ್ಣಿನ ದೃಷ್ಟಿ ನರಕ್ಕೆ ಹಾನಿಯಾಗಿ ನಿಧಾನವಾಗಿ ಅಂಧತ್ವ ಬರುತ್ತದೆ. ಕೆಲವು ವಿಶೇಷ ಸಂದರ್ಭಗಳಲ್ಲಿ ಕಣ್ಣಿನ ಒತ್ತಡ 20mm Hgಗಿಂತಲೂ ಕಡಿಮೆ ಇದ್ದರೂ ಗ್ಲಾಕೋಮಾ ಬರಬಹುದು. ಇದನ್ನು ಸಹಜ ಒತ್ತಡದ ಗ್ಲಾಕೋಮಾ ಎಂದು ಕರೆಯುತ್ತಾರೆ. ಈ ವಿಶೇಷ ಸಂದರ್ಭಗಳಲ್ಲಿ ಕಣ್ಣಿನ ದೃಷ್ಟಿನರಕ್ಕೆ ರಕ್ತ ಪೂರೈಸುವ ರಕ್ತನಾಳಕ್ಕೆ ಹಾನಿಯಾಗಿ ಕ್ರಮೇಣ ದೃಷ್ಟಿ ನರಕ್ಕೂ ಹಾನಿಯಾಗಿ, ಅಂಧತ್ವ ಬರುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ಕಣ್ಣಿನ ಒತ್ತಡ ಜಾಸ್ತಿ ಇದ್ದರೂ ಗ್ಲಾಕೋಮಾ ಬರದೇ ಇರಲೂಬಹುದು. ಇದನ್ನು ಕಣ್ಣಿನ ರಕ್ತದೊತ್ತಡ (Ocular Hypertensim) ಎಂದು ಕರೆಯುತ್ತಾರೆ. ಒಟ್ಟಿನಲ್ಲಿ ಕಣ್ಣಿನ ದ್ರವ್ಯದ ಒತ್ತಡ ಹತೋಟಿಯಲಿದ್ದಲ್ಲಿ ಗ್ಲಾಕೋಮಾ ರೋಗ ಬರುವ ಸಾಧ್ಯತೆ ಕಡಿಮೆ ಇರುತ್ತದೆ.

2. ಮುಚ್ಚಿದ ಕೋನದ ಗ್ಲಾಕೋಮಾ

(Closed Angle Glaucoma)

ಇದು ಒಂದು ವೈದ್ಯಕೀಯ ತುರ್ತು ಚಿಕಿತ್ಸೆಯ ಅಗತ್ಯವಿರುವ ರೋಗವಾಗಿದ್ದು, ತಕ್ಷಣ ಶಸ್ತ್ರ ಚಿಕಿತ್ಸೆಯ ಅಗತ್ಯವಿರುತ್ತದೆ. ಅತಿಯಾದ ಕಣ್ಣು ನೋವು, ತಲೆಸುತ್ತು, ಕಣ್ಣಿನ ಸುತ್ತ ನೋವು, ವಾಕರಿಕೆ, ವಾಂತಿ ಇತ್ಯಾದಿ ಇರಬಹುದು. ಕಣ್ಣು ಕೆಂಪಾಗುವುದು, ಊದಿಕೊಳ್ಳುವುದು ಇರಬಹುದು. ಕಣ್ಣಿನ ಒತ್ತಡ ತೀವ್ರವಾಗಿ ಏರಿಕೆಯಾಗಿರುತ್ತದೆ. ತಕ್ಷಣಕ್ಕೆ ಶಸ್ತ್ರ ಚಿಕಿತ್ಸೆ ಮಾಡದಿದ್ದಲ್ಲಿ ದೃಷ್ಟಿನರಕ್ಕೆ ಹಾನಿಯಾಗಿ, ಶಾಶ್ವತ ಅಂಧತ್ವ ಬರುವ ಸಾಧ್ಯತೆ ಇರುತ್ತದೆ.

ಚಿಕಿತ್ಸೆ ಹೇಗೆ?

ನಿಮ್ಮ ದೇಹ ಸ್ಥಿತಿ, ರೋಗದ ಲಕ್ಷಣ ಮತ್ತು ತೀವ್ರತೆಯನ್ನು ಕೂಲಂಕುಷವಾಗಿ ಅಭ್ಯಸಿಸಿ ನಿಮಗೆ ನೀಡಬೇಕಾದ ಔಷಧಿ ಮತ್ತು ಶಸ್ತ್ರ ಚಿಕಿತ್ಸೆಯ ನಿರ್ಧಾರವನ್ನು ವೈದ್ಯರೇ ತೆಗೆದುಕೊಳ್ಳುತ್ತಾರೆ. ಆರಂಭಿಕ ಹಂತದಲ್ಲಿ ಗುರುತಿಸಿ ಪರಿಣಾಮಕಾರಿ ಚಿಕಿತ್ಸೆ ನೀಡಿದ್ದಲ್ಲಿ ಗ್ಲಾಕೋಮಾ ರೋಗವನ್ನು ಖಂಡಿತವಾಗಿಯೂ ಗುಣಪಡಿಸಬಹುದು. ಆದರೆ ಒಮ್ಮೆ ಗ್ಲಾಕೋಮಾ ರೋಗದಿಂದ ದೃಷ್ಟಿನರ ಹಾನಿಯಾಗಿ, ಅಂಧತ್ವ ಬಂದ ಬಳಿಕ ಯಾವುದೇ ಚಿಕಿತ್ಸೆಗೂ ಸ್ಪಂದಿಸಲ್ಲಿಕ್ಕಿಲ್ಲ. ಒಟ್ಟಿನಲ್ಲಿ ರೋಗದ ಲಕ್ಷಣಗಳು ಕಾಣಿಸಿದ ಕೂಡಲೇ ವೈದ್ಯರ ಬಳಿ ತೋರಿಸಿ ಚಿಕಿತ್ಸೆ ತೆಗೆದುಕೊಳ್ಳುವುದರಲ್ಲಿಯೇ ಜಾಣತನ ಅಡಗಿದೆ.

► ಯಾವಾಗ ಕಣ್ಣಿನ ವೈದ್ಯರನ್ನು ಕಾಣಬೇಕು?

1. ಹತ್ತಿರದ ಮತ್ತು ದೂರದ ವಸ್ತುಗಳನ್ನು ನೋಡಲು ಕಷ್ಟವಾಗುವುದು.
2. ಕತ್ತಲೆ ಕೋಣೆಗೆ ಹೋದಾಗ ದೃಷ್ಟಿ ಹೊಂದಾಣಿಕೆ ಕಷ್ಟವಾಗುವುದು.
3. ಕಣ್ಣಿನ ಸುತ್ತ ಪದೇ ಪದೇ ನೋವು.
4. ಎಲ್ಲವೂ ಎರಡೆರಡಾಗಿ ಗೋಚರಿಸುವುದು.
5. ಪದೇ ಪದೇ ಕಣ್ಣು ಒದ್ದೆಯಾಗಿ, ಹೆಚ್ಚು ಕಣ್ಣೀರು ಕಾರಣವಿಲ್ಲದೆ ಒಸರುವುದು.
6. ವಸ್ತುಗಳಲ್ಲಿ ಮಂದತ್ವ ಮತ್ತು ಭೂತಾಕಾರದ ಪ್ರತಿಬಿಂಬ ಗೋಚರಿಸುವುದು.
7. ಕಣ್ಣು ತುರಿಕೆ ಅಥವಾ ಕಣ್ಣು ಉರಿಯುವುದು, ಶುಷ್ಕ ಕಣ್ಣು.
8. ತನ್ನಿಂತಾನೇ ವಸ್ತುಗಳು ಅಸ್ಪಷ್ಟವಾಗಿ ಗೋಚರಿಸುವುದು.
9. ವಸ್ತುವಿನ ಅಥವಾ ಬೆಳಕಿನ ಸುತ್ತ ಗೋಲಾಕಾರ ಅಥವಾ ಕಾಮನಬಿಲ್ಲಿನ ರೀತಿ ಬಣ್ಣಗಳು ಕಾಣಿಸಿಕೊಳ್ಳುವುದು.
10. ಎಲ್ಲವೂ ಸರಿಯಾಗಿದ್ದು, ಕಾರಣವಿಲ್ಲದೆ ಒಂದು ಕಣ್ಣುಗಳಲ್ಲಿ ಏನೂ ಕಾಣಿಸದಿರುವುದು.

share
ಡಾ. ಮುರಲೀ ಮೋಹನ್ ಚೂಂತಾರು
ಡಾ. ಮುರಲೀ ಮೋಹನ್ ಚೂಂತಾರು
Next Story
X