ಜೂನಿಯರ್ ಎನ್ಟಿಆರ್, ರಾಮ್ ಚರಣ್ ಹೆಸರು ಉಲ್ಲೇಖಿಸದೆ ಟ್ರೋಲಿಗೀಡಾದ ನಾಟು ನಾಟು ಗಾಯಕನಿಂದ ಕ್ಷಮೆಯಾಚನೆ
![ಜೂನಿಯರ್ ಎನ್ಟಿಆರ್, ರಾಮ್ ಚರಣ್ ಹೆಸರು ಉಲ್ಲೇಖಿಸದೆ ಟ್ರೋಲಿಗೀಡಾದ ನಾಟು ನಾಟು ಗಾಯಕನಿಂದ ಕ್ಷಮೆಯಾಚನೆ ಜೂನಿಯರ್ ಎನ್ಟಿಆರ್, ರಾಮ್ ಚರಣ್ ಹೆಸರು ಉಲ್ಲೇಖಿಸದೆ ಟ್ರೋಲಿಗೀಡಾದ ನಾಟು ನಾಟು ಗಾಯಕನಿಂದ ಕ್ಷಮೆಯಾಚನೆ](https://www.varthabharati.in/sites/default/files/images/articles/2023/03/18/371004-1679158822.jpeg)
ಹೊಸದಿಲ್ಲಿ: ಆಸ್ಕರ್ ಪ್ರಶಸ್ತಿ ವಿಜೇತ ಹಾಡು ʻನಾಟು ನಾಟುʼ ಇದರ ಗಾಯಕ ಕಾಲ ಭೈರವ ಅವರು ತಮ್ಮ ಧನ್ಯವಾದ ಸಮರ್ಪಣೆಯಲ್ಲಿ ಹಾಡಿನ ದೃಶ್ಯದಲ್ಲಿ ಕಾಣಿಸಿಕೊಂಡ ನಟರಾದ ಜೂನಿಯರ್ ಎನ್ಟಿಆರ್ ಮತ್ತು ರಾಮ್ ಚರಣ್ ಅವರನ್ನು ಉಲ್ಲೇಖಿಸಿಲ್ಲ ಎಂಬುದು ನಟರ ಅಭಿಮಾನಿಗಳಿಗೆ ಆಕ್ರೋಶಕ್ಕೆ ಕಾರಣವಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ನಟರ ಅಭಿಮಾನಿಗಳು ಕಾಲ ಭೈರವ ಅವರನ್ನು ಟ್ರೋಲ್ ಮಾಡಿದ್ದಾರೆ.
ಮಾರ್ಚ್ 16 ರಂದು ತಮಗೆ ಸಹಾಯ ಮಾಡಿದ್ದ ಎಲ್ಲರಿಗೂ ಧನ್ಯವಾದ ತಿಳಿಸಿದ್ದ ಕಾಲ ಭೈರವ ಈ ಕುರಿತು ಆರ್ಆರ್ಆರ್ ನಿರ್ದೇಶಕ ಮತ್ತು ತಮ್ಮ ಮಾವ ಎಸ್ಎಸ್ ರಾಜಮೌಳಿ, ತಂದೆ ಹಾಗೂ ನಾಟು ನಾಟು ಹಾಡಿನ ಸಂಯೋಜಕ ಎಂ ಎಂ ಕೀರವಾಣಿ, ಕೋರಿಯೋಗ್ರಾಫರ್ ಪ್ರೇಮ್ ರಕ್ಷಿತ್, ರಾಜಮೌಳಿ ಅವರ ಪತ್ರ ಕಾರ್ತಿಕೇಯ, ಪ್ರೊಡಕ್ಷನ್ ಡಿಸೈನರ್ ಶ್ರೀವಳ್ಳಿ, ವಸ್ತ್ರ ವಿನ್ಯಾಸಕಿ ಹಾಗೂ ರಾಜಮೌಳಿ ಅವರ ಪತ್ನಿ ರಮಾ ರಾಜಮೌಳಿ ಮತ್ತಿತರಿಗೆ ಧನ್ಯವಾದ ತಿಳಿಸಿದ್ದರೂ ನಟರಿಬ್ಬರ ಹೆಸರು ಉಲ್ಲೇಖಿಸಿರಲಿಲ್ಲ.
ಇದಕ್ಕೆ ಅವರು ಟ್ರೋಲ್ ಆದ ಬೆನ್ನಿಗೇ ಕ್ಷಮೆಯಾಚಿಸಿದ ಕಾಲ ಭೈರವ ತಾವು ಅಕಾಡೆಮಿ ಪ್ರಶಸ್ತಿ ಪ್ರದಾನ ವೇದಿಕೆಯಲ್ಲಿ ಹಾಡನ್ನು ಹಾಡಲು ಅವಕಾಶ ಕಲ್ಪಿಸಿದವರ ಹೆಸರನ್ನಷ್ಟೇ ಹೇಳಿದ್ದಾಗಿ ತಿಳಿಸಿದ್ದಾರೆ.