ತ್ಯಾಜ್ಯ ವಿಲೇವಾರಿ ಸಮಸ್ಯೆ ಬಗೆಹರಿಸಲು ಸಾರ್ವಜನಿಕರು ಮನಪಾಗೆ ಸಹಕಾರ ನೀಡುವಂತೆ ಮೇಯರ್ ಮನವಿ
ಮಂಗಳೂರು : ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಹೊರಗುತ್ತಿಗೆ ನೌಕರರ ಪ್ರತಿಭಟನೆಯಿಂದಾಗಿ ನಗರದಲ್ಲಿ ಉಂಟಾಗಿರುವ ತ್ಯಾಜ್ಯ ವಿಲೇವಾರಿ ಸಮಸ್ಯೆಯನ್ನು ಬಗೆಹರಿಸಲು ಸಾರ್ವಜನಿಕರು ಮಹಾನಗರ ಪಾಲಿಕೆಗೆ ಸಹಕಾರ ನೀಡುವಂತೆ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಜಯಾನಂದ ಅಂಚನ್ ಮನವಿ ಮಾಡಿದ್ದಾರೆ.
ತಮ್ಮ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಳೆದ 10 ದಿನಗಳಿಂದ ನಗರದಲ್ಲಿ ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಹದಗೆಟ್ಟಿದೆ. ಇಷ್ಟರ ತನಕ ತೊಂದರೆಯನ್ನು ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಜನರು ಸಹಿಸಿಕೊಂಡಿದ್ದಾರೆ. ಇದೀಗ ಖಾಯಂ ಪೌರ ಕಾರ್ಮಿಕರನ್ನು ಬಳಸಿಕೊಂಡು ಸಮಸ್ಯೆಯ ಪರಿಹಾರಕ್ಕೆ ಪ್ರಯತ್ನ ನಡೆಸಲಾಗಿದೆ. ಸಾರ್ವಜನಿಕರು ಸಮಸ್ಯೆ ಪರಿಹಾರಕ್ಕೆ ಪಾಲಿಕೆಯೊಂದಿಗೆ ಕೈಜೋಡಿಸುವಂತೆ ವಿನಂತಿಸಿದರು.
ಪ್ರತಿಭಟನೆನಿರತ ಸಿಬ್ಬಂದಿಯ ಮನವೊಲಿಸಲು ಪ್ರಯತ್ನ ಮುಂದುವರಿದಿದೆ. ರಾಜ್ಯಾದ್ಯಂತ ಈ ಸಮಸ್ಯೆ ಇರುವುದರಿಂದ ಸರಕಾರವೇ ಅವರ ಬೇಡಿಕೆಗಳನ್ನು ಈಡೇರಿಸಲು ಸೂಕ್ತ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಹೇಳಿದರು.
ನಗರದಲ್ಲಿ ನಾಲ್ಕು ಎಸ್ಟಿಪಿಗಳು ಹಾಗೂ 22 ವೆಲ್ವೆಟ್ಗಳನ್ನು ನಿರ್ಮಿಸಲಾಗಿದೆ ಹಾಗೂ ಒಳಚರಂಡಿ ಸಂಪರ್ಕ ಜಾಲವನ್ನು ದೈನಂದಿನ ನಿರ್ವಹಣೆಗಾಗಿ ಪಾಲಿಕೆಯ ವಾಹನಗಳನ್ನು ಇ- ಟೆಂಡರ್ ಮೂಲಕ ಟೆಂಡರ್ ಮೂಲಕ ಗುತ್ತಿಗೆ ನೀಡಲಾಗಿದೆ.ಗುತ್ತಿಗೆದಾರರು ನಗರಪಾಲಿಕೆ ವಾಹನಗಳನ್ನು ಉಪಯೋಗಿಸಿಕೊಂಡು ಅಗತ್ಯ ಸಿಬ್ಬಂದಿಗಳನ್ನು ನಿಯೋಜಿಸಿಕೊಂಡು ಒಳಚರಂಡಿ ವಿಭಾಗದಲ್ಲಿನ ಒಳಚರಂಡಿ ಜಾಲ ಹಾಗೂ ಮ್ಯಾನ್ಹೋಲ್ ನಿರ್ವಹಣೆಯನ್ನು ನಿರ್ವಹಿಸುವುದು ಗುತ್ತಿಗೆದಾರರ ಜವಾಬ್ದಾರಿಯಾಗಿರುತ್ತದೆ. ಆದರೆ ಅವರು ವಿಫಲರಾಗಿದ್ದಾರೆ ಎಂದರು.
ಒಳಚರಂಡಿ ವೆಟ್ವೆಲ್ಗಳಲ್ಲಿ ಬರುವ ನೀರನ್ನು ಉಪಯೋಗಿಸಿಕೊಳ್ಳುವ ಸಲುವಾಗಿ 14 ವೆಟ್ವೆಲ್ಗಳನ್ನು ಹಾಗೂ ಕಾವೂರು ದ್ರವ್ಯ ತ್ಯಾಜ್ಯ ಘಟಕಗಳ ಸಂಪೂರ್ಣ ನಿರ್ವಹಣೆ ಹಾಗೂ ಚಾಲನೆಗಾಗಿ ಎಮ್ಎಸ್ಇಜೆಡ್ ನೊಂದಿಗೆ ಒಪ್ಪಂದ ಮಾಡಿಕೊಂಡು ಎಮ್ಎಸ್ಇಝೆಡ್ಗೆ ವಹಿಸಿಕೊಡಲಾಗಿದೆ. ಮಂಗಳೂರು ಮಹಾನಗರ ಪಾಲಿಕರು ಒಳಚರಂಡಿಯ ವ್ಯವಸ್ಥೆಯಲ್ಲಿ ಕಳೆದ 10 ದಿನಗಳಿಂದಲೂ ಗುತ್ತಿಗೆದಾರರು ವಾಹನಗಳನ್ನು ಚಾಲನೆ ಮಾಡದೆ ಹಾಗೂ ಎಮ್ಎಸ್ಇಝೆಡ್ಗೆ ವಹಿಸಿಕೊಟ್ಟ, ಎಸ್ಟಿಪಿ ಮತ್ತು ವೆಟ್ವೆಲ್ಗಳನ್ನು ಚಾಲನೆ ಮಾಡದೆ ಒಳಚರಂಡಿ ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಂಡಿದ್ದು, ನಗರದಾದ್ಯಂತ ಒಳಚರಂಡಿ ನೀರು ವೆಟ್ವೆಲ್ಗಳಿಂದ ಪಂಪ್ ಆಗದೆ ಎಸ್ಟಿಪಿಗಳು ಸ್ಥಗಿತಗೊಂಡಿರುವ ಕಾರಣ ಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲಾ ಒಳಚರಂಡಿ, ಜಾಲದಲ್ಲಿ ನೀರು ತುಂಬಿಕೊಂಡು ಅಲ್ಲಲ್ಲಿ ರಸ್ತೆಗಳ ಮಧ್ಯದಲ್ಲಿ ಹರಿಯುತ್ತಿದೆ. ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆ ಯಾಗಿದೆ ಎಂದು ಹೇಳಿದರು.
ಹೊರಗುತ್ತಿಗೆಯ ಸಿಬ್ಬಂದಿಗಳು, ಮುಷ್ಕರ ಮಾಡುತ್ತಿರುವ ಹಿನ್ನೆಲೆಯಲ್ಲಿ ಈ ಸಮಸ್ಯೆಗಳು ಉದ್ಭವವಾಗಿದೆ ಎಂದು ಗುತ್ತಿಗೆದಾರರು ತಿಳಿಸಿದ್ದಾರೆ. ಈ ಸಮಸ್ಯೆಯಿಂದಾಗಿ ಸಾರ್ವಜನಿಕರಿಗೆ ತುಂಬಾ ಅನಾನುಕೂಲವಾಗುತ್ತಿದ್ದು, ಇದರ ಬಗ್ಗೆ ಮಾನ್ಯ ಶಾಸಕರ ಅಧ್ಯಕ್ಷತೆಯಲ್ಲಿ ಸ್ಥಾಯಿ ಸಮಿತಿಯ ಅಧ್ಯಕ್ಷರು ಮಾನ್ಯ ಆಯುಕ್ತರು ಹಾಗೂ ಗುತ್ತಿಗೆದಾರರು ಎಮ್ಎಸ್ಇಜೆಡ್ ಅಧಿಕಾರಿಗಳು ಮತ್ತು ಪ್ರತಿಭಟನೆ ಮಾಡುತ್ತಿರುವ ಹೊರಗುತ್ತಿಗೆ ಸಿಬ್ಬಂದಿ ಗಳನ್ನು ಒಳಗೊಂಡಂತೆ ಸಭೆ ನಡೆಸಿ ಅವರ ಮನವೊಲಿಸಿ ಗುತ್ತಿಗೆದಾರರು ಮತ್ತು ಎಮ್ಎಸ್ಇಜೆಡ್ ಅಧಿಕಾರಿಗಳಿಗೆ ಒಳಚರಂಡಿ ವಟೇಲ್ ಮತ್ತು ಎಸ್ಟಿಪಿಗಳನ್ನು ಚಾಲನೆ ಮಾಡಲು ಸೂಚಿಸಲಾಗಿತ್ತು. ಆದರೆ ಪ್ರತಿಭಟನಾ ನಿರತ ಕಾರ್ಮಿಕರು ತಮ್ಮ ಪ್ರತಿಭಟನೆ ಮುಂದುವರಿಸಿದ್ದಾರೆ.
ಮಹಾನಗರ ಪಾಲಿಕೆಯಿಂದ ಎಲ್ಲ ರೀತಿಯ ಪ್ರಯತ್ನಪಟ್ಟರೂ ಹೊರಗುತ್ತಿಗೆ ನೌಕರರು ಸ್ಪಂದಿಸದೇ ಇರುವುದ ರಿಂದ ಗುತ್ತಿಗೆದಾರರು ಇರುವ ಸಿಬ್ಬಂದಿಯನ್ನು ಉಪಯೋಗಿಸಿಕೊಂಡು ತಾತ್ಕಾಲಿಕವಾಗಿಯಾದರೂ ಒಳಚರಂಡಿ ವಾಹನಗಳನ್ನು ಹಾಗೂ ವೆಟ್ವೆಲ್ಗಳನ್ನು ಚಾಲನೆ ಮಾಡಲು ಪ್ರಯತ್ನಿಸುವ ವೇಳೆಯಲ್ಲಿ ಪ್ರತಿಭಟನಾ ನಿರತ ಕೆಲವು ವ್ಯಕ್ತಿಗಳು ಪುನಃ ಚಾಲನೆ ಮಾಡಿದ್ದಲ್ಲಿ ಒಳಚರಂಡಿ ನೀರನ್ನು ಮೈಮೇಲೆ ಸುರಿದುಕೊಳ್ಳುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.
ತುಂಬೆ ವೆಂಟೆಡ್ ಡ್ಯಾಮ್ನಲ್ಲಿ ನೀರಿನ ಮಟ್ಟ ಇಳಿಕೆ: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ನೀರು ಪೂರೈಕೆ ಮಾಡುವ ತುಂಬೆ ವೆಂಟೆಡ್ ಡ್ಯಾಮ್ನಲ್ಲಿ ನೀರು ಇಳಿಕೆಯಾಗಿದ್ದು, ನೀರಿನ ಮಟ್ಟ 4.96ಮೀಟರ್ಗೆ ಇಳಿದಿದೆ. ಎಪ್ರಿಲ್ ಮೊದಲ ವಾರದಲ್ಲಿ ಮಳೆ ಬಾರದಿದ್ದರೆ ವೆಂಟೆಡ್ ಡ್ಯಾಮ್ನಲ್ಲಿ ನೀರಿನ ಮಟ್ಟ ಇನ್ನಷ್ಟು ಕುಸಿಯಲಿದೆ. ಆದ ಕಾರಣ ಎಎಂಆರ್ ಅಣೆಕಟ್ಟಿನಿಂದ ನೀರನ್ನು ಮರುಪೂರಣ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಮಾಜಿ ಮೇಯರ್ಗಳಾದ ಪ್ರೇಮಾನಂದ ಶೆಟ್ಟೆ ಮತ್ತು ದಿವಾಕರ್, ಉಪ ಮೇಯರ್ ಪೂರ್ಣಿಮಾ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.