ಅಧಿಕ ಲಾಭದಾಸೆ ತೋರಿಸಿ ಹಣ ಪಡೆದು ವಂಚನೆ ಆರೋಪ: ಎನ್ಐಟಿಕೆ ಕಾಲೇಜು ವಿದ್ಯಾರ್ಥಿಯ ವಿರುದ್ಧ ಪ್ರಕರಣ ದಾಖಲು

ಮಂಗಳೂರು, ಮಾ.29: ಅಧಿಕ ಲಾಭ ನೀಡುವುದಾಗಿ ವಿದ್ಯಾರ್ಥಿಗಳಿಂದ ಹಣ ಪಡೆದು ವಂಚಿಸಿರುವ ಬಗ್ಗೆ ಸುರತ್ಕಲ್ ಎನ್ಐಟಿಕೆ ಕಾಲೇಜು ವಿದ್ಯಾರ್ಥಿಯ ವಿರುದ್ಧ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
4ನೇ ವರ್ಷದ ವಿದ್ಯಾರ್ಥಿ ಯಶ್ವರ್ಧನ ಜೈನ್ ಯಾನೆ ವೈವಿಜೆ ಎಂಬಾತ 2022ರ ಮಾರ್ಚ್ನಿಂದ ವಾಟ್ಸಪ್ ಗ್ರೂಪ್ನಲ್ಲಿ ಎನ್ಐಟಿಕೆ ವಿದ್ಯಾರ್ಥಿಗಳಿಗೆ ಒಂದು ವಾರದಲ್ಲಿ ಶೇ.10ರಷ್ಟು ಅಧಿಕ ಲಾಭ ನೀಡುವುದಾಗಿ ಭರವಸೆ ನೀಡಿ ಹಣ ಪಡೆದಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆರೋಪಿಯು ‘ವೈವಿಜೆ ಇನ್ವೆಸ್ಮೆಂಟ್ ಎಂಟರ್ಪ್ರೈಸಸ್’ ಎಂಬ ಹೆಸರಿನ ಟೆಲಿಗ್ರಾಂ ಗ್ರೂಪ್ ಮಾಡಿದ್ದ. ಆ ಗ್ರೂಪ್ ಪ್ರಸ್ತುತ 981 ಮಂದಿ ಸದಸ್ಯರನ್ನು ಹೊಂದಿದೆ. ಅದರಲ್ಲಿ ಹೆಚ್ಚಾಗಿ ಎನ್ಐಟಿಕೆ ವಿದ್ಯಾರ್ಥಿಗಳು ಹಾಗೂ ಇತರ ಕೆಲವು ಕಾಲೇಜಿನ ವಿದ್ಯಾರ್ಥಿಗಳಿದ್ದಾರೆ. ಎನ್ಐಟಿಕೆಯ ವಿದ್ಯಾರ್ಥಿಗಳು 2022ರ ಜೂ.26ರಿಂದ 2023ರ ಜ.3ರವರೆಗೆ ಹಂತ ಹಂತವಾಗಿ 27.96 ಲ.ರೂ.ಗಳನ್ನು ಯಶ್ವರ್ಧನ್ ಜೈನ್ನ ಖಾತೆಗೆ ಪಾವತಿಸಿದ್ದಾರೆ. ಆರಂಭದಲ್ಲಿ ಆರೋಪಿಯು ಹೂಡಿಕೆದಾರರ ವಿಶ್ವಾಸ ಗಳಿಸಲು ಆರೋಪಿ 1 ತಿಂಗಳ ಕಾಲ ಲಾಭಾಂಶ ನೀಡಿದ್ದ. ಬಳಿಕ ಹಣ ನೀಡದೆ ವಂಚಿಸಿದ್ದಾನೆ ಎಂದು ಮಂಗಳೂರಿನ ಸೆನ್ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.