ಕೆಪಿಸಿಸಿ ವಕ್ತಾರ ಲಕ್ಷ್ಮಣ್, ರಮೇಶ್ ಬಾಬು ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು: ಎನ್.ಆರ್.ರಮೇಶ್

ಬೆಂಗಳೂರು, ಎ.2: ‘ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವಕ್ತಾರ ಎಂ.ಲಕ್ಷ್ಮಣ್ ಮತ್ತು ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ನನ್ನ ಬಗ್ಗೆ ಸತ್ಯಕ್ಕೆ ದೂರವಾದ ಆರೋಪಗಳನ್ನು ಮಾಡಿದ್ದು, ಅವರ ವಿರುದ್ಧ ಮಾನನಷ್ಟ ಮೊಕದ್ದಮೆಗಳ ದಾಖಲಿಸಲಾಗುವುದು’ ಎಂದು ಬಿಜೆಪಿ ಮುಖಂಡ ಎನ್.ಆರ್. ರಮೇಶ್ ತಿಳಿಸಿದ್ದಾರೆ.
ರವಿವಾರ ಈ ಸಂಬಂಧ ಪ್ರಕಟಣೆ ಹೊರಡಿಸಿರುವ ಅವರು, ಯಡಿಯೂರು ವಾರ್ಡಿನ ಪಾಲಿಕೆ ಸದಸ್ಯನಾಗಿ ನಾನು ಕಾರ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಮತ್ತು ನನ್ನ ಪತ್ನಿ ಕಾರ್ಯ ನಿರ್ವಹಿಸಿದ್ದ ಅವಧಿಯಲ್ಲಿ ವಾರ್ಡಿಗೆ 250 ಕೋಟಿ ರೂಪಾಯಿಗಳಷ್ಟು ಅನುದಾನ ಮಂಜೂರಾಗಿರುವುದಾಗಿ ಸತ್ಯಕ್ಕೆ ದೂರವಾದ ಸುಳ್ಳು ಮಾಹಿತಿಗಳನ್ನು ನೀಡಿರುತ್ತಾರೆ. ಆದರೆ ವಾಸ್ತವವಾಗಿ 2010-11 ರಿಂದ 14 ವರ್ಷಗಳ ಅವಧಿಯಲ್ಲಿ ಯಡಿಯೂರು ವಾರ್ಡಿಗೆ ಬಿಡುಗಡೆಯಾಗಿರುವ ವಿಧದ ಅನುದಾನಗಳ ಒಟ್ಟು ಮೊತ್ತ 87 ಕೋಟಿ 42 ಲಕ್ಷ ರೂಪಾಯಿಗಳು ಮಾತ್ರ ಆಗಿದೆ ಎಂದರು.
ಯಡಿಯೂರು ವಾರ್ಡ್ ನಲ್ಲಿ ಅನುಷ್ಠಾನಗೊಂಡಿರುವುದು ಕೇವಲ ಐದಾರು ದಶಕಗಳ ಕಾಲ ಶಾಶ್ವತವಾಗಿ ಸಾರ್ವಜನಿಕರ ಸೇವೆಗೆ ನಿಲುಕುವಂತಹ ಯೋಜನೆಗಳು ಮಾತ್ರವೇ ಎಂಬ ದಾಖಲೆಗಳು ಎಂ. ಲಕ್ಷ್ಮಣ್ ಮತ್ತು ರಮೇಶ್ ಬಾಬು ಅವರಿಗೆ ಸಿಕ್ಕಂತಿಲ್ಲ. ಯಡಿಯೂರು ವಾರ್ಡ್ ವ್ಯಾಪ್ತಿಯಲ್ಲಿ 15 ಉದ್ಯಾನವನಗಳು ಮತ್ತು 11 ವಿವಿಧ ಯೊಜನೆಗಳ ಕಟ್ಟಡಗಳು ಮತ್ತು ಬಹು ಉದ್ದೇಶಗಳ ಕಟ್ಟಡಗಳನ್ನು ನಿರ್ಮಿಸಲಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಯಡಿಯೂರು ಕೆರೆ ಅಭಿವೃದ್ಧಿಗೆ 16 ಕೋಟಿ ರೂಪಾಯಿಗಳಷ್ಟು ಹಣ ಬಿಡುಗಡೆಯಾಗಿದೆ ಎಂಬ ಸುಳ್ಳು ಮಾಹಿತಿಯನ್ನು ನೀಡಿರುತ್ತಾರೆ. ಆದರೆ, ಯಡಿಯೂರು ಕೆರೆ ಅಭಿವೃದ್ಧಿಗೆ ಕಳೆದ 14 ವರ್ಷಗಳ ಅವಧಿಯಲ್ಲಿ ಸ್ವಾಮಿ ವಿವೇಕಾನಂದ ಪ್ರತಿಮೆ ನಿರ್ಮಾಣವೂ ಸೇರಿದಂತೆ ಬಿಡುಗಡೆಯಾಗಿರುವುದು ಕೇವಲ 4 ಕೋಟಿ 15 ಲಕ್ಷ ರೂಪಾಯಿಗಳು ಮಾತ್ರ ಎಂದು ಅವರು ಮಾಹಿತಿ ನೀಡಿದ್ದಾರೆ.
14 ವರ್ಷಗಳಿಂದ ನಿರಂತರವಾಗಿ ಕಾಂಗ್ರೆಸ್ ಪಕ್ಷದ ಆಡಳಿತಾವಧಿಯಲ್ಲಿ ನಡೆದಿರುವ 122ಕ್ಕೂ ಹೆಚ್ಚು ಬೃಹತ್ ಹಗರಣಗಳನ್ನು ದಾಖಲೆಗಳ ಸಹಿತ ಬಹಿರಂಗಪಡಿಸಿ ಹಲವಾರು ತನಿಖಾ ಸಂಸ್ಥೆಗಳಲ್ಲಿ ದೂರುಗಳನ್ನು ದಾಖಲಿಸಿರುವ ಹಾಗೂ ಬಯಲು ಮಾಡಿರುವ ಇಂತಹ ಹಗರಣಗಳ ಪೈಕಿ 28 ಪ್ರಕರಣಗಳನ್ನು ಕಾನೂನು ಹೋರಾಟದಲ್ಲಿ ಗೆಲ್ಲುವ ಮೂಲಕ ಸುಮಾರು 8,600 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಸರಕಾರಿ ಆಸ್ತಿ ಪಾಲಿಕೆಗೆ ವಾಪಸ್ಸು ಬರುವಂತೆ ಮಾಡಿರುವ ಹಿನ್ನೆಲೆಯಲ್ಲಿ, ಕಂಗೆಟ್ಟಿರುವ ಭ್ರಷ್ಟ ಕಾಂಗ್ರೆಸ್ಸಿಗರು ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಹಾಗಾಗಿ ನನ್ನ ವಿರುದ್ಧ ಸುಳ್ಳು ಆಪಾಧನೆಯನ್ನು ಮಾಡುವ ಮೂಲಕ ಸಮಾಜದಲ್ಲಿ ನನಗೆ ವೈಯಕ್ತಿಕ ಮಾನ ನಷ್ಟವನ್ನು ಉಂಟು ಮಾಡಲು ಪ್ರಯತ್ನಿಸಿರುವ ಎಂ. ಲಕ್ಷ್ಮಣ್ ಮತ್ತು ರಮೇಶ್ ಬಾಬು ರವರ ವಿರುದ್ಧ ಬೆಂಗಳೂರು, ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿಯ ನ್ಯಾಯಾಲಯಗಳಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ಮಾನ ನಷ್ಟ ಮೊಕದ್ದಮೆಗಳನ್ನು ನನ್ನ ವಕೀಲರ ಮೂಲಕ ಇನ್ನು ನಾಲ್ಕು ದಿನಗಳೊಳಗಾಗಿ ಹೂಡಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.