ವಿಚಾರವಾದಿ ನರೇಂದ್ರ ನಾಯಕ್ಗೆ ಪೊಲೀಸ್ ಭದ್ರತೆ ಮುಂದುವರಿಸಲು ಆಗ್ರಹ

ಮಂಗಳೂರು: ಅಖಿಲ ಭಾರತ ವಿಚಾರವಾದಿ ವೇದಿಕೆಯ ರಾಷ್ಟ್ರೀಯ ಅಧ್ಯಕ್ಷ, ವಿಚಾರವಾದಿ ಪ್ರೊ.ನರೇಂದ್ರ ನಾಯಕ್ಗೆ ಪೊಲೀಸ್ ಭದ್ರತೆ ಮುಂದುವರಿಸಲು ಆಗ್ರಹಿಸಿ ಸಮಾನ ಮನಸ್ಕ ಸಂಘಟನೆಗಳ ಪ್ರಮುಖರು ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಅವರನ್ನು ಸೋಮವಾರ ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
ನರೇಂದ್ರ ನಾಯಕ್ ಅವರು ಮೌಢ್ಯಾಚರಣೆಗಳನ್ನು ಬಯಲಿಗೆಳೆಯುವುದು, ವೈಜ್ಞಾನಿಕ ಮನೋಭಾವ ಮೂಡಿಸುವುದರಲ್ಲಿ ಕಳೆದ ಐವತ್ತು ವರ್ಷಗಳಿಂದ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ವೈಜ್ಞಾನಿಕ ಮನೋಭಾವ, ಜಾತ್ಯತೀತ ತಿಳುವಳಿಕೆಗಳನ್ನು ಸಮಾಜದಲ್ಲಿ ಮೂಡಿಸುವ ಕಾರಣಕ್ಕೆ ಪ್ರತಿಗಾಮಿ ಶಕ್ತಿಗಳಿಂದ ಹಲವು ಬಾರಿ ಅವರು ದಾಳಿಗಳಿಗೆ ಗುರಿಯಾಗಿದ್ದಾರೆ. ಸಮಾಜದಲ್ಲಿ ವೈಜ್ಞಾನಿಕ ಮನೋಭಾವನೆ ಮೂಡಿಸುವ ಕಾರಣಕ್ಕೆ ಬಲಪಂಥೀಯ ಶಕ್ತಿಗಳಿಂದ ಕೊಲೆಗೀಡಾದ ನರೇಂದ್ರ ದಾಬೋಳ್ಕರ್, ಗೋವಿಂದ ಪನ್ಸಾರೆ ಪ್ರೊ. ನರೇಂದ್ರ ನಾಯಕ್ರ ಸಹವರ್ತಿಗಳಾಗಿದ್ದರು. ರಾಜ್ಯದಲ್ಲಿ ಪ್ರೊ.ಕಲ್ಬುರ್ಗಿ, ಗೌರಿ ಲಂಕೇಶ್ ಕೊಲೆಯ ನಂತರ ಪ್ರೊ.ನರೇಂದ್ರ ನಾಯಕ್ರ ಜೀವಕ್ಕೆ ಅಪಾಯ ಇರುವುದು ಸರಕಾರದ ಗಮನಕ್ಕೆ ಬಂದು ಅವರಿಗೆ ಸರಕಾರದ ವತಿಯಿಂದ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಈಗ ಏಕಾಏಕಿ ಭದ್ರತೆಯನ್ನು ಹಿಂಪಡೆದ ಸುದ್ದಿ ಕೇಳಿ ಸಮಾನ ಮನಸ್ಕ, ಪ್ರಗತಿಪರರಿಗೆ ನಮಗೆ ಆತಂಕವಾಗಿದೆ. ಪ್ರೊ. ನರೇಂದ್ರ ನಾಯಕ್ ಈಗಲೂ ವೈಜ್ಞಾನಿಕ ಮನೋಭಾವ ಮೂಡಿಸುವ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ. ಅದಲ್ಲದೆ ಸ್ಥಳೀಯವಾಗಿ ಹಲವು ಸ್ಥಾಪಿತ ಹಿತಾಸಕ್ತಿಗಳ ವಿರುದ್ದದ ಹೋರಾಟದಲ್ಲಿ ತೊಡಗಿಸಿಕೊಂಡಿರುತ್ತಾರೆ. ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಬಾಳಿಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆತನ ಅಸಹಾಯಕ ಕುಟುಂಬಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಆ ಕಾರಣಕ್ಕೂ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅವರಿಗೆ ನೀಡಿದ್ದ ಪೊಲೀಸ್ ಭದ್ರತೆ ವಾಪಸ್ ಪಡೆದಿರುವುದು ಸರಿಯಾದ ನಿರ್ಧಾರ ಅಲ್ಲ. ಇದರಿಂದ ಅವರ ಪ್ರಾಣವನ್ನು ಅಪಾಯಕ್ಕೆ ಒಡ್ಡಿದಂತಾಗಿದೆ. ಹಣ ಪಾವತಿಸಿ ರಕ್ಷಣೆ ಪಡೆದುಕೊಳ್ಳುವುದು ಅವರಿಂದ ಸಾಧ್ಯವಿಲ್ಲ. ಹಾಗಾಗಿ ಸರಕಾರ ಅವರಿಗೆ ಈ ಹಿಂದಿನಂತೆ ಪೊಲೀಸ್ ಭದ್ರತೆಯನ್ನು ಒದಗಿಸಬೇಕು ಎಂದು ಒತ್ತಾಯಿಸಲಾಗಿದೆ.
ನಿಯೋಗದಲ್ಲಿ ಡಿವೈಎಫ್ಐ ರಾಜ್ಯ ಅಧ್ಯಕ್ಷ ಮುನೀರ್ ಕಾಟಿಪಳ್ಳ, ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಎಂ. ದೇವದಾಸ್, ರಘು ಎಕ್ಕಾರ್, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಿ. ಶೇಖರ್, ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್, ಸಾಮರಸ್ಯ ಬಳಗದ ಮಂಜುಳಾ ನಾಯಕ್, ವಿನಾಯಕ ಬಾಳಿಗ ಸಹೋದರಿ ಅನುರಾಧ ಬಾಳಿಗಾ, ಸಮುದಾಯ ಸಂಘಟನೆಯ ವಾಸುದೇವ ಉಚ್ಚಿಲ, ಸಮರ್ಥ್ ಭಟ್, ಎಸ್ಎಫ್ಐ ಜಿಲ್ಲಾ ಕಾರ್ಯದರ್ಶಿ ರೇವಂತ್ ಕದ್ರಿ, ಶಾಹಿದ್ ಅಫ್ರೀದ್, ಪ್ರಮಿಳಾ ದೇವಾಡಿಗ, ಅಸುಂತ ಡಿಸೋಜ, ಎಐವೈಎಫ್ ಸಂಘಟನೆಯ ಸುರೇಶ್, ಪ್ರಥಮ್ ಬಜಾಲ್ ಉಪಸ್ಥಿತರಿದ್ದರು.







