ನರಸಿಂಹರಾಜ ಕ್ಷೇತ್ರ | ಜೆಡಿಎಸ್ ನಿಂದ ಸ್ಪರ್ಧಿಸುವುದಿಲ್ಲ: ಅಬ್ದುಲ್ ಅಝೀಝ್
ಕಾಂಗ್ರೆಸ್ ಸೇರ್ಪಡೆ ಕುರಿತು ಬೆಂಬಲಿಗರ ಸಭೆ ನಡೆಸಿದ JDS ಮುಖಂಡ

ಮೈಸೂರು,ಎ.3: ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಗೂ ಮೈಸೂರು ನರಸಿಂಹರಾಜ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಅಬ್ದುಲ್ ಅಝೀಝ್ (ಮೈಸೂರು ಬಾವಾ), 'ಈ ಬಾರಿಯ ಜೆಡಿಎಸ್ನಿಂದ ಸ್ಪರ್ಧಿಸುವುದಿಲ್ಲ' ಎಂದು ಹೇಳುವ ಮೂಲಕ ಟಿಕೆಟ್ ಘೋಷಣೆಗೂ ಮುನ್ನ ಜೆಡಿಎಸ್ ತೊರೆಯುವ ಸುಳಿವು ನೀಡಿದ್ದಾರೆ.
ರಾಜೀವ್ ನಗರದ ನಿವಾಸದಲ್ಲಿ ಸೋಮವಾರ ತಮ್ಮ ಬೆಂಬಲಿಗರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದರು. ಈ ವೇಳೆ ಅಬ್ದುಲ್ಲಾ ಅವರ ಬಹುತೇಕ ಬೆಂಬಲಿಗರು ಅಬ್ದುಲ್ ಅಝೀಝ್ ಅವರು ಯಾವುದೇ ನಿರ್ಧಾರ ತೆಗೆದುಕೊಂಡರೂ ಅದನ್ನು ಸ್ವಾಗತಿಸುವುದಾಗಿ ಭರವಸೆ ನೀಡಿದರು.
ಟಿಕೆಟ್ ಘೋಷಣೆಯಲ್ಲಿ ಜೆಡಿಎಸ್ ಪಕ್ಷದ ವಿಳಂಬ ನೀತಿಯೇ ನಮಗೆ ಬೇಸರ ತರಿಸಿದೆ. ಈ ಹಿಂದೆ ಪಕ್ಷದ ವರಿಷ್ಠರು ಎನ್.ಆರ್.ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಸಂಘಟಿಸುವಂತೆ ಸೂಚಿಸಿದ್ದರು. ಅದರಂತೆ ನಾನು ಕೆಲಸ ಮಾಡಿದ್ದರೂ ವರಿಷ್ಠರು ನನ್ನನ್ನು ನಿರ್ಲಕ್ಷ್ಯ ಮಾಡಿದರು. ಅದಕ್ಕಾಗಿಯೇ ನಾನು ಪಂಚರತ್ನ ಯಾತ್ರೆಗೆ ಹೋಗಲಿಲ್ಲ ಎಂದು ಮಾಧ್ಯಮದರಿಗೆ ತಿಳಿಸಿದರು.
ಕಾಂಗ್ರೆಸ್ ಸೇರ್ಪಡೆಗೂ ಮುನ್ನ ಅಬ್ದುಲ್ಲಾ ಮಾಜಿ ಸಚಿವರೂ ಹಾಗೂ ತಮ್ಮ ಆಪ್ತರಾದ ಯು.ಟಿ.ಖಾದರ್ ಜತೆ ಮಾತುಕತೆ ನಡೆಸಿದ್ದಾರೆ. ಬಳಿಕ ಯು.ಟಿ.ಖಾದರ್ ಶಾಸಕ ತನ್ವೀರ್ ಸೇಠ್ ಜತೆ ಚರ್ಚಿಸಿ ಅಬ್ದುಲ್ ಅಝೀಝ್ ಕಾಂಗ್ರೆಸ್ ಸೇರ್ಪಡೆ ಕುರಿತು ಹಸಿರು ನಿಶಾನೆ ತೋರಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಕೆಲವು ದಿನಗಳಿಂದಲೂ ಮಾತುಕತೆ ನಡೆದಿದೆ. ಶಾಸಕ ತನ್ವೀರ್ ಸೇಠ್ ಕೂಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರೂ ಹಾಗೂ ಮುಖಂಡರ ಸಭೆ ನಡೆಸಿ ಅಬ್ದುಲ್ ಅಝೀಝ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸ್ವಾಗತಿಸುವ ಬಗ್ಗೆ ತೀರ್ಮಾನ ಕೈಗೊಂಡಿದ್ದಾರೆ.
ಅಬ್ದುಲ್ ಅಝೀಝ್ ಈ ಹಿಂದೆ 2018 ರ ವಿಧಾನ ಸಭಾ ಚುನಾವಣೆಯಲ್ಲಿ ನರಸಿಂಹರಾಜ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ 14,709 ಮತಗಳನ್ನು ಪಡೆದಿದ್ದರು. ಅಬ್ದುಲ್ಲಾ ಕಾಂಗ್ರೆಸ್ ಸೇರ್ಪಡೆಯಿಂದ ಎನ್ಆರ್ ಕ್ಷೇತ್ರದಲ್ಲಿ ಜೆಡಿಎಸ್ ಗೆ ಹಿನ್ನಡೆಯಾಗಲಿದ್ದು, ಅಬ್ದುಲ್ ಅಝೀಝ್ ಅವರು ಕ್ಷೇತ್ರದಲ್ಲಿ ಈಗಾಗಲೇ ಜೆಡಿಎಸ್ ಕಾರ್ಯಕ್ರಮದಿಂದ ದೂರ ಉಳಿದಿದ್ದರು.
ಕಾಂಗ್ರೆಸ್ ಶಕ್ತಿ ವೃದ್ಧಿ: ಅಬ್ದುಲ್ ಅಝೀಝ್ ಸೇರ್ಪಡೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ಬಂದಂತಾಗಿದೆ. ಈ ಭಾಗದಲ್ಲಿ ಅವರು ಪ್ರಮುಖ ನಾಯಕರಾಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ತಿಳಿಸಿದರು.







