ವಿಧಾನಸಭಾ ಚುನಾವಣೆ | ರಾಜ್ಯದಲ್ಲಿ ಒಟ್ಟು 47.43 ಕೋಟಿ ರೂ.ಮೌಲ್ಯದ ಸೊತ್ತು ವಶ: ರಾಜ್ಯ ಮುಖ್ಯ ಚುನಾವಣಾಧಿಕಾರಿ

ಬೆಂಗಳೂರು, ಎ.3: ವಿಧಾನಸಭಾ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಾದ ನಂತರ ವಿಚಕ್ಷಣ ದಳ, ಸ್ಥಿರ ಕಣ್ಗಾವಲು ತಂಡಗಳು, ಪೊಲೀಸ್ ಮತ್ತು ಆದಾಯ ತೆರಿಗೆ ಅಧಿಕಾರಿಗಳು ಸೇರಿ ಎಲ್ಲ ತಂಡಗಳು ಒಟ್ಟು 47.43ಕೋಟಿ ರೂ.ಮೌಲ್ಯದ ನಗದು ಸೇರಿದಂತೆ ಮದ್ಯ, ಮಾದಕ ದ್ರವ್ಯ ಇತ್ಯಾದಿ ವಸ್ತುಗಳನ್ನು ವಶಪಡಿಸಿಕೊಂಡಿವೆ ಎಂದು ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ.
12.82 ಕೋಟಿ ರೂ.ನಗದು, 16.02 ಕೋಟಿ ರೂ.ಮೌಲ್ಯದ 2.78 ಲಕ್ಷ ಲೀಟರ್ ಮದ್ಯ, 41.26 ಲಕ್ಷ ರೂ.ಮೌಲ್ಯದ 79.44 ಕೆಜಿ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿದ್ದು, ಅಬಕಾರಿ ಇಲಾಖೆಯು 450 ಗಂಭೀರ ಪ್ರಕರಣಗಳನ್ನು ಹಾಗೂ ಮದ್ಯದ ಪರವಾನಿಗೆ ಉಲ್ಲಂಘಿಸಿದ 305 ಪ್ರಕರಣಗಳು, 16 ಎನ್ಡಿಪಿಎಸ್ ಮತ್ತು ಕರ್ನಾಟಕ ಅಬಕಾರಿ ಕಾಯ್ದೆ 1965ರ ಪರಿಚ್ಚೇದ 15(ಎ) ಅನ್ವಯ ಒಟ್ಟು 1,238 ಪ್ರಕರಣಗಳನ್ನು ದಾಖಲಿಸಿವೆ ಮತ್ತು 270 ವಿವಿಧ ಮಾದರಿಯ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
6.72 ಕೋಟಿ ರೂ.ಮೌಲ್ಯದ 13.575 ಕೆಜಿ ಬಂಗಾರ, 63.98 ಲಕ್ಷ ರೂ.ಮೌಲ್ಯದ 88.763 ಕೆಜಿ ಬೆಳ್ಳಿ, 10.79 ಕೋಟಿ ರೂ.ಮೌಲ್ಯದ ಉಚಿತ ಕೊಡುಗೆ, ಉಡುಗೊರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ನಗದು, ಮದ್ಯ, ಮಾದಕ ದ್ರವ್ಯ, ಅಮೂಲ್ಯ ಲೋಹ ಮತ್ತು ಉಡುಗೊರೆ ವಸ್ತುಗಳನ್ನು ವಶಪಡಿಸಿಕೊಂಡಿರುವ ವಿಚಕ್ಷಣ ದಳ, ಸ್ಥಿರ ಕಣ್ಗಾವಲು ತಂಡಗಳು ಮತ್ತು ಪೊಲೀಸ್ ಅಧಿಕಾರಿಗಳು 316 ಪ್ರಥಮ ತನಿಖಾ ವರದಿ ದಾಖಲಿಸಿದ್ದಾರೆ ಎಂದು ಮನೋಜ್ ಕುಮಾರ್ ಮೀನಾ ಹೇಳಿದ್ದಾರೆ.
ಚುನಾವಣೆ ಘೋಷಣೆಯಾದ ದಿನಾಂಕದಿಂದ ಇಲ್ಲಿಯವರೆಗೆ ಒಟ್ಟು 31,486 ಶಸ್ತ್ರಾಸ್ತ್ರಗಳನ್ನು ಜಮೆ ಮಾಡಿಸಿಕೊಳ್ಳಲಾಗಿದೆ. 10 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 7 ಶಸ್ತ್ರಾಸ್ತ್ರ ಪರವಾನಿಗೆ ರದ್ದುಪಡಿಸಲಾಗಿದೆ. ಸಿಆರ್ಪಿಸಿ ಕಾಯ್ದೆಯಡಿ 1416 ಪ್ರಕರಣಗಳನ್ನು ದಾಖಲಿಸಲಾಗಿದೆ. ಅವುಗಳಲ್ಲಿ 1869 ವ್ಯಕ್ತಿಗಳಿಂದ ಮುಚ್ಚಳಿಕೆ ಪತ್ರ ಪಡೆಯಲಾಗಿದೆ. 3554 ಜಾಮೀನು ರಹಿತ ವಾರೆಂಟ್ಗಳನ್ನು ಜಾರಿಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಸ್ಥಿರ ಕಣ್ಗಾವಲು ತಂಡಗಳು ಬೆಂಗಳೂರು ನಗರದ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 29.94 ಲಕ್ಷ ರೂ. ನಗದು ಮತ್ತು ಆದಾಯ ತೆರಿಗೆ ಇಲಾಖೆಯು ಬೈಲಹೊಂಗಲ ವಿಧಾನಸಭಾ ಕ್ಷೇತ್ರದಲ್ಲಿ 42.95 ಲಕ್ಷ ರೂ. ನಗದು ವಶಪಡಿಸಿಕೊಂಡಿವೆ ಎಂದು ಅವರು ಸೋಮವಾರ ಅಧಿಕೃತ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.







