ಎ.11ರ ತನಕ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೆ ಅವಕಾಶ: ಎ.ಸಿ ಗಿರೀಶ್ ನಂದನ್

ಪುತ್ತೂರು: ವಿಧಾನಸಭೆಗೆ ಚುನಾವಣಾ ವೇಳಾಪಟ್ಟಿ ಘೋಷಣೆಯಾಗಿದ್ದರೂ ಏಪ್ರಿಲ್ 11ರವರೆಗೆ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅವಕಾಶ ನೀಡಲಾಗಿದೆ. ಏ.1ಕ್ಕೆ 18 ವರ್ಷ ತುಂಬಿದವರಿಗೆ ಮತಪಟ್ಟಿಯಲ್ಲಿ ಸೇರ್ಪಡೆ ಮಾಡಿಕೊಳ್ಳಲು ಅರ್ಜಿಗಳನ್ನು ಸ್ವೀಕರಿಸಿ ಅವಕಾಶ ಕಲ್ಪಿಸಲಾಗುತ್ತದೆ. ಬಳಿಕ ಅವಕಾಶಗಳಿರುವುದಿಲ್ಲ. ಏ.20 ಕ್ಕೆ ಮತದಾನಕ್ಕೆ ಅವಕಾಶ ಹೊಂದಿದವರ ಅಂತಿಮ ಪೂರ್ಣ ಪಟ್ಟಿ ಬಿಡುಗಡೆಗೊಳ್ಳಲಿದೆ ಎಂದು ಚುನಾವಣಾಧಿ ಕಾರಿಯಾದ ಪುತ್ತೂರು ಉಪವಿಭಾಗದ ಸಹಾಯಕ ಕಮೀಷನರ್ ಗಿರೀಶ್ ನಂದನ್ ತಿಳಿಸಿದ್ದಾರೆ.
ಅವರು ಮಂಗಳವಾರ ಪುತ್ತೂರು ತಹಸೀಲ್ದಾರ್ ಕಚೇರಿಯಲ್ಲಿನ ಸಭಾಂಗಣದಲ್ಲಿ ಮಾದ್ಯಮಗಳಿಗೆ ಮಾಹಿತಿ ನೀಡಿದರು. ಭಾರತ ಚುನಾವಣಾ ಆಯೋಗವು ಮುದ್ರಣ ಮಾಧ್ಯಮಗಳಿಗೆ ಸಾರ್ವತ್ರಿಕ ಚುನಾವಣಾ ಸಂದರ್ಭ ಗಳಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಪೋಸ್ಟರ್, ಬ್ಯಾನರ್, ಪಾಂಪ್ಲೆಟ್ಸ್ ಮತ್ತು ಜಾಹಿರಾತು ಗಳನ್ನು ಮುದ್ರಿಸುವಾಗ, ಟಿವಿ ಮತ್ತು ಕೇಬಲ್ ನೆಟ್ವರ್ಕ್ಗಳಲ್ಲಿ ಚುನಾವಣಾ ಜಾಹಿರಾತುಗಳನ್ನು ಪ್ರಸಾರ ಮಾಡುವಾಗ ಅನುಸರಿಸಬೇಕಾದ ಕ್ರಮಗಳ ಕುರಿತು ಅವರು ಸಮಗ್ರ ಮಾಹಿತಿ ನೀಡಿದರು.
ಈಗಾಗಲೇ ಮಾಲ್, ಜ್ಯುವೆಲ್ಲರಿ ಮಾಲಿಕರು, ಗೃಹೋಪಯೋಗಿ ಉಪಕರಣದ ಮಾರಾಟದ ವ್ಯಾಪಾರಸ್ಥರು, ಪೆಟ್ರೋಲ್ ಪಂಪ್ಗಳ ಮಾಲಕರು, ಬಾರ್ ಮಾಲಕರಿಗೆ ನೀತಿ ಸಂಹಿತೆ ಕುರಿತು ಮಾರ್ಗದರ್ಶನ ನೀಡಲಾಗಿದೆ. ನಮ್ಮಲ್ಲಿ 220 ಮತದಾನ ಕೇಂದ್ರಗಳಿವೆ. ಈಗಾಗಲೇ ಇವತ್ತಿನ ದಿನಕ್ಕೆ ಸಂಬಂಧಿಸಿ 2,10,792 ಮತದಾರರಿದ್ದಾರೆ. 80 ವರ್ಷ ಮೇಲ್ಪಟ್ಟವರು ಮತ್ತು ವಿಕಲಚೇತನರು ಸೇರಿದಂತೆ ಒಟ್ಟು 6,524 ಮಂದಿ ಮತದಾರರಿದ್ದಾರೆ. ಅವರಿಗೆ ಮನೆಯಲ್ಲೇ ಮತದಾನ ಮಾಡುವ ಅವಕಾಶ ಇರುವ ಹಿನ್ನೆಲೆಯಲ್ಲಿ ಈಗಾಗಲೇ ಅವರಿಂದ ಒಪ್ಪಿಗೆ ಪತ್ರ ವಿತರಣೆಯು ನಮ್ಮ ಬಿಎಲ್ಒಗಳು ಮಾಡುತ್ತಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಕರ್ತವ್ಯದಲ್ಲಿರುವ ಮಾಧ್ಯಮ ಸಹಿತ ವಿವಿಧ ಇಲಾಖೆಗಳ ಸಿಬ್ಬಂದಿಗಳಿಗೆ ಅಂಚೆ ಮತದಾನ ವ್ಯವಸ್ಥೆ ಇದೆ. ಚುನಾವಣೆಯ ಮೂರು ದಿನ ಮುಂದೆ ಈ ಮತದಾನ ನಡೆಯಲಿದೆ. ಅದಕ್ಕೆ ಆಯಾ ಇಲಾಖೆಯಿಂದ ನೊಡೇಲ್ ಅಧಿಕಾರಿಯೊಬ್ಬರು ಅವರ ಇಲಾಖೆಯಿಂದ ಚುನಾವಣಾ ಕರ್ತವ್ಯದಲ್ಲಿರುವ ಪ್ರತಿನಿಧಿಗಳ ಪಟ್ಟಿ ನೀಡುತ್ತಾರೆ. ಈ ಆಧಾರದಲ್ಲಿ ಮತದಾನ ನಡೆಯಲಿದೆ ಎಂದರು.
ಮತದಾನಕ್ಕೆ ಸಂಬಂಧಿಸಿ ಎ.5ಕ್ಕೆ ಜಿಲ್ಲಾಧಿಕಾರಿಯವರು ವಿದ್ಯುನ್ಮಾನ ಮತ ಯಂತ್ರವನ್ನು ತಾಲೂಕುಗಳಿಗೆ ನೀಡಲಿದ್ದಾರೆ. ಎ.6ಕ್ಕೆ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ವಿದ್ಯುನ್ಮಾನ ಮತ ಯಂತ್ರ ನೀಡಲಿದ್ದಾರೆ. ಅದನ್ನು ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯಲ್ಲಿ ಭದ್ರತೆಯೊಂದಿಗೆ ಇರಿಸಲಾಗುವುದು ಅಲ್ಲಿಯೇ ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ತರಬೇತಿ ನಡೆಯಲಿದೆ. ಎ.9ಕ್ಕೆ ಅಲ್ಲಿ ತರಬೇತಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಟಿವಿ, ಪತ್ರಿಕಾ ಮಾಧ್ಯಮಗಳು ಸಹಿತ ಇತರ ವಿದ್ಯುನ್ಮಾನ ಮಾದ್ಯಗಳಲ್ಲಿ ಚುನಾವಣೆ ಸಂಬಂಧಿಸಿ ಬರುವ ಜಾಹಿರಾತಿಗೆ ಜಿಲ್ಲಾಧಿಕಾರಿ ಅನುಮತಿ ಬೇಕು. ಜಾಹಿರಾತಿಗೆ ಸಂಬಂಧಿಸಿ ಅರ್ಜಿ ನಮೂನೆ ಭರ್ತಿ ಮಾಡಬೇಕು. ಈ ಎಲ್ಲಾ ವಿಚಾರಗಳಿಗೆ ಸಂಬಂಧಿಸಿ ಜಿಲ್ಲಾ ವಾರ್ತಾಧಿಕಾರಿ ನೋಡೆಲ್ ಅಧಿಕಾರಿಯಾಗಿರುತ್ತಾರೆ. ವಿವಿಧ ಟಿವಿ, ಪತ್ರಿಕೆಗಳಲ್ಲಿ ಪ್ರಕಟವಾಗುವ ಸುದ್ದಿಗಳ ಮೇಲೆ ನಿಗಾ ವಹಿಸಲಾಗುತ್ತದೆ. ವಿದ್ಯುನ್ಮಾನ ಮಾಧ್ಯಮ ಹಾಗೂ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುವ ದೃಶ್ಯಗಳ ಕುರಿತು, ಸ್ಕ್ರೋಲಿಂಗ್ ಜಾಹಿರಾತು ಕುರಿತು ನಿಗಾ ವಹಿಸಿ ಪರಿಶೀಲನೆ ನಡೆಸಲಾಗುತ್ತದೆ. ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ವಿದ್ಯುನ್ಮಾನ ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ಪ್ರಚುರಪಡಿಸುವ ಮುನ್ನ ಮತ್ತು ಪತ್ರಿಕಾಗೊಷ್ಠಿ ನಡೆಸುವ ಮುಂದೆ ಜಿಲ್ಲಾ ಮಟ್ಟದ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿ ಪೂರ್ವಾನುಮತಿ ಪಡೆಯುವುದು ಕಡ್ಡಾಯ. ಜಿಲ್ಲೆಯಲ್ಲೂ ಮತ್ತು ತಾಲೂಕಿನಲ್ಲೂ ಒಂದು ಕಣ್ಗಾವಲು ಟೀಮ್ ಇದೆ ಎಂದು ಚುನಾವಣಾಧಿಕಾರಿ ಗಿರೀಶ್ನಂದನ್ ಹೇಳಿದರು.
ಈ ಭಾಗದಲ್ಲಿ ಪುತ್ತೂರು ತಾಲೂಕು ಮತ್ತು ಬಂಟ್ವಾಳ ತಾಲೂಕಿನ 4 ಕಡೆ ಚೆಕ್ ಪೋಸ್ಟ್ ಗಳಿವೆ. ಬಂಟ್ವಾಳದ ಸಾರಡ್ಕ ಮತ್ತು ಉಕ್ಕುಡ ಪುತ್ತೂರಿನ ಪಾಣಾಜೆ ಮತ್ತು ಮೇನಾಲದಲ್ಲಿ ಚೆಕ್ ಪೋಸ್ಟ್ ಮಾಡಲಾ ಗಿದೆ. ಅಲ್ಲಿ ನಮ್ಮ ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ. ಜೊತೆಗೆ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಪ್ರತಿ ದಿನ ವರದಿ ಅಲ್ಲಿಂದ ಬರುತ್ತದೆ. 3 ಪ್ಲೈಯಿಂಗ್ ಸ್ಕಾಡ್ ಮಾಡಲಾಗಿದೆ. ಒಟ್ಟು ವಿಚಾರದಲ್ಲಿ ಇಲ್ಲಿನ ತನಕ ಯಾವುದೇ ದೂರು, ಘಟನೆ ಇದುವರೆಗೆ ನಡೆದಿಲ್ಲ ಎಂದು ಚುನಾವಣಾಧಿಕಾರಿ ಗಿರೀಶ್ ನಂದನ್ ಹೇಳಿದರು.
ಸಹಾಯಕ ಚುನಾವಣಾಧಿಕಾರಿಯಾದ ಪುತ್ತೂರು ತಹಸೀಲ್ದಾರ್ ಜಿ.ಶಿವಶಂಕರ್, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ, ಡಿವೈಎಸ್ಪಿ ಡಾ. ವೀರಯ್ಯ ಹಿರೇಮಠ್ ಮತ್ತು ಉಪತಹಸೀಲ್ದಾರ್ ಸುಲೋಚನಾ ಪಿ.ಕೆ ಉಪಸ್ಥಿತರಿದ್ದರು.