ಉಡುಪಿಯಲ್ಲಿ ಮಹಾವೀರ ಜಯಂತಿ ಆಚರಣೆ

ಉಡುಪಿ: ಪ್ರಕೃತಿ,ಸಕಲ ಜೀವಿಗಳಿಗೂ ಬದುಕುವ ಹಕ್ಕನ್ನು ನೀಡಿದೆ. ನಾವು ನಮ್ಮ ಜೀವನದಲ್ಲಿ ಮಹಾವೀರರ ಐದು ಪಂಚತತ್ವಗಳಾದ ಸತ್ಯ, ಅಂಸೆ, ಅಪರಿಗ್ರಹ, ಆಚೌರ್ಯ ಮತ್ತು ಬ್ರಹ್ಮಚರ್ಯ ಪಾಲಿಸಿದಾಗ ಪ್ರಕೃತಿಗೆ ಪೂರಕವಾದ ಮಾನವ ಧರ್ಮ ಸಮಾಜದಲ್ಲಿ ನೆಲೆಗೊಳ್ಳುತ್ತದೆ ಎಂದು ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್ ಅಭಿಪ್ರಾಯಪಟ್ಟಿದ್ದಾರೆ.
ಮಂಗಳವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶ್ರೀಭಗವಾನ್ ಮಹಾವೀರ ಜಯಂತಿ ಆಚರಣೆ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿದರು.
ಭಗವಾನ್ ಮಹಾವೀರರು ಶಾಂತಿ ಸೌಹಾರ್ದತೆಯನ್ನು ಬೋಧಿಸುವ ಮೂಲಕ ಮಾನವನ ಜೀವನ ಮೌಲ್ಯಗಳು ಸುಧಾರಿಸಲು ಮಾರ್ಗದರ್ಶನ ವನ್ನು ನೀಡಿದ್ದಾರೆ. ಅವುಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು ಎಂದು ವೀಣಾ ನುಡಿದರು.
ಕಾರ್ಯಕ್ರಮದಲ್ಲಿ ಜೈನ ಮಿಲನ್ನ ವಿನೋದ ಪ್ರಸನ್ನ ಕುಮಾರ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ನ ಜಿಲ್ಲಾ ಅಧ್ಯಕ್ಷ ಸುರೇಂದ್ರ ಅಡಿಗ ಮಹಾವೀರರ ಕುರಿತು ಮಾತನಾಡಿದರು. ಜೈನ ಮಿಲನ್ ಅಧ್ಯಕ್ಷರಾದ ದೀಪ ರಾಜೇಶ್, ಸುಧೀರ್ ಜೈನ್, ಕನ್ನಡ ಸಾಹಿತ್ಯ ಪರಿಷತ್ನ ರವಿರಾಜ್, ನರಸಿಂಹ ಮೂರ್ತಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್, ಸಮುದಾಯದ ಸದಸ್ಯರು ಹಾಗೂ ಜಿಲ್ಲಾಡಳಿತದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಜೈನ್ ಮಿಲನ್ನ ಪ್ರಸನ್ನ ಕುಮಾರ್ ವಂದಿಸಿದರು.