ಕೋಲಾರ, ಚನ್ನಪಟ್ಟಣಕ್ಕೆ ಘೋಷಣೆಯಾಗದ ಟಿಕೆಟ್: ಎಚ್.ಡಿಕೆ ವಿರುದ್ಧ 'ಕೈ' ಅಭ್ಯರ್ಥಿ ಯಾರು?
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಗೂ ಮುನ್ನ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿ ಬಿಡುಗಡೆ ಮಾಡಿದ್ದ ಕಾಂಗ್ರೆಸ್ ಇಂದು 42 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಮಾತ್ರ ಬಿಡುಗಡೆ ಮಾಡಿದ್ದು, ಟಿಕೆಟ್ ಆಕಾಂಕ್ಷಿಗಳ ತೀವ್ರ ಹಣಾಹಣಿ ಇರುವ 58 ಕ್ಷೇತ್ರಗಳು ಬಾಕಿಯಿವೆ.
ಮೊದಲ ಹಂತದ ಪಟ್ಟಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ವರುಣಾ ಕ್ಷೇತ್ರದಿಂದ ಟಿಕೆಟ್ ಘೋಷಿಸಲಾಗಿದ್ದು, ಆದರೆ ಕೋಲಾರ ಕ್ಷೇತ್ರದ ಅಭ್ಯರ್ಥಿ ಹೆಸರು ಎರಡನೇ ಪಟ್ಟಿಯಲ್ಲೂ ಬಹಿರಂಗವಾಗಿಲ್ಲ.
ವರುಣಾ ಜೊತೆಗೆ ಕೋಲಾರದ ಟಿಕೆಟ್ ಕೂಡ ಕೇಳಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಹಾಗಾಗಿ ಕೋಲಾರದ ಟಿಕೆಟ್ ಯಾರ ಪಾಲಗಲಿದೆ ಎಂಬ ಕುತೂಹಲ ಉಳಿದು ಕೊಂಡಿದೆ.
ಚನ್ನಪಟ್ಟಣದಲ್ಲಿ 'ಕೈ' ಅಭ್ಯರ್ಥಿ ಯಾರು? :
ಚನ್ನಪಟ್ಟಣದಲ್ಲಿ ನಟಿ ರಮ್ಯಾ ಸ್ಪರ್ಧಿಸಲಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಆದರೆ, ಇಲ್ಲಿ ಜೆಡಿಎಸ್ನ ಎಚ್.ಡಿ ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಈ ಪಟ್ಟಿಯಲ್ಲೂ ಉತ್ತರ ಸಿಕ್ಕಿಲ್ಲ. ಕಾಂಗ್ರೆಸ್ ಟಿಕೆಟ್ ಯಾರಿಗೆ ಎಂಬುದು ಇನ್ನಷ್ಟು ಕುತೂಹಲ ಮೂಡಿಸಿದೆ.