ಬಪ್ಪನಾಡು ಜಾತ್ರೆಯಲ್ಲಿ ಮುಸ್ಲಿಮರಿಗೆ ವ್ಯಾಪಾರಕ್ಕೆ ನಿಷೇಧ

ಮಂಗಳೂರು: 800 ವರ್ಷಗಳ ಇತಿಹಾಸವಿರುವ ದಕ್ಷಿಣ ಭಾರತದ ಸೌಹಾರ್ದದ ಕೊಂಡಿ ಎಣಿಸಿಕೊಂಡಿರುವ ಮುಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಈ ಬಾರಿಯೂ ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರ ನಡೆಸಲು ನಿರಾಕರಿಸಲಾಗಿದೆ.
ಎ.5ರಂದು ಬಪ್ಪನಾಡು ಜಾತ್ರಾ ಮಹೋತ್ಸವಕ್ಕೆ ಧ್ವಜಾರೋಹಣ ನಡೆದು ಪೂಜಾ ಕೈಂಕರ್ಯಗಳು ಆರಂಭಗೊಂಡಿದೆ. ಈ ಮಧ್ಯೆ ಮಂಗಳವಾರ ಜಾತ್ರಾ ಮಹೋತ್ಸವದಲ್ಲಿ ವ್ಯಾಪಾರ ನಡೆಸುವ ಉದ್ದೇಶದಿಂದ ಮುಸ್ಲಿಂ ವ್ಯಾಪಾರಿಗಳು ದೇವಸ್ಥಾನಕ್ಕೆ ತೆರಳಿದ್ದಾರೆ. ಆದರೆ, ಇಲ್ಲಿ ವ್ಯಾಪಾರ ನಡೆಸಲು ಅವಕಾಶವಿಲ್ಲ ಎಂದು ನಿರಾಕರಿಸಿ ವ್ಯಾಪಾರಿಗಳನ್ನು ಹಿಂದೆ ಕಳುಹಿಸಲಾಗದೆ ಎಂದು ವ್ಯಾಪಾರಿಗಳು ದೂರಿದ್ದಾರೆ.
ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಸಭೆಯೊಂದನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಹಿಂದುತ್ವ ಸಂಘಟನೆಗೆ ಸೇರಿದವರೆನ್ನಲಾದ ಕೆಲವರು ದೇವಸ್ಥಾನದ ಆಡಳಿತ ಮೊಕ್ತೇಸರರು ಮತ್ತು ಅನುವಂಶಿಕ ಮೊಕ್ತೇಸರರಿಗೆ ಮನವಿಯೊಂದನ್ನು ಸಲ್ಲಿಸಿದ್ದರು.
ಈ ಮನವಿಯಲ್ಲಿ "ಹಿಂದೂ ಧಾರ್ಮಿಕ ದತ್ತಿ ನಿಯಮ 2002ರಂತೆ ದೇವಸ್ಥಾನದ ಆವರಣದಲ್ಲಿ ಇತರ ಮತೀಯರು ವ್ಯಾಪಾರ ಮಾಡುವಂತಿಲ್ಲ. ಇಲಾಖೆಯ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕುʼ ಎಂದು ಮನವಿಯಲ್ಲಿ ತಿಳಿಸಲಾಗಿತ್ತು. ಈ ಮನವಿಯನ್ನು ಮುಂದಿಟ್ಟು ಕೊಂಡು ದಕ್ಷಿಣ ಭಾರತದ ಸೌಹಾರ್ದದ ಕೊಂಡಿ ಎಣಿಸಿಕೊಂಡಿರುವ ಮತ್ತು ಮುಸಲ್ಮಾನರೇ ನಿರ್ಮಿಸಿರುವ ಬಪ್ಪನಾಡು ದೇವಸ್ಥಾನದ ಜಾತ್ರಾಮಹೊತ್ಸವದಲ್ಲಿ ಮುಸ್ಲಿಮರು ವ್ಯಾಪಾರ ನಡೆಸುವುದಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಸಾರ್ವಜನಿಕ ವಲಯದಿಂದ ಆಕ್ರೋಶ ವ್ಯಕ್ತವಾಗುತ್ತಿದೆ.
ಕಳೆದ 800 ವರ್ಷಗಳಿಂದಲೂ ಇಲ್ಲಿ ಹೆಚ್ಚಾಗಿ ಮುಸ್ಲಿಂ ವ್ಯಾಪಾರಿಗಳು ದೇವರಿಗೆ ಪ್ರಿಯವಾದ ಮಲ್ಲಿಗೆ ಹೂವು ಮಾರಾಟದ ಮಳಿಗೆ, ಮಕ್ಕಳ ಆಟಿಕೆಗಳ ಮಳಿಗೆಗಳನ್ನು ಇಡುತ್ತಿದ್ದರು. ಅದೂ 800ವರ್ಷಗಳಿಂದ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ಆದರೆ, ಇತ್ತೀಚೆಗೆ ಎರಡು ವರ್ಷಗಳಿಂದ ಮುಸ್ಲಿಂ ವ್ಯಾಪಾರಿಗಳಿಗೆ ನಿರಾಕರಿಸುತ್ತಿರುವ ಕುರಿತು ಸಾರ್ವಜನಿಕರೇ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಈ ಕುರಿತು ʼವಾರ್ತಾಭಾರತಿʼ ಜೊತೆ ಮಾತನಾಡಿದ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದ ಮೊಕ್ತೇಸರರಾದ ಮುಲ್ಕಿ ಸೀಮೆಯ ಅರಸು ದುಗದಗಣ್ಣ ಸಾವಂತರು, ಈ ಬಾರಿ ದೇವಸ್ಥಾನದ ಜಾಗದಲ್ಲಿ ವ್ಯಾಪಾರ ವಹಿವಾಟಿಗೆ ಯಾರಿಗೂ ಅವಕಲಾಶ ನೀಡಿಲ್ಲ. ಎಲ್ಲರಿಗೂ ಖಾಸಗಿಯವರ ಜಾಗದಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡಲಾಗಿದೆ. ಜೊತೆಗೆ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದೆ. ಹಾಗಾಗಿ ಈ ಕುರಿತು ಎಸಿ ಕಚೇರಿಗೆ ಮಾಹಿತಿ ನೀಡಲಾಗಿತ್ತು. ದೇವಸ್ಥಾನದ ಜಾಗವನ್ನು ಹಿಂದೂಯೇತರರಿಗೆ ಅವಕಾಶ ನೀಡಬಾರದು ಎಂಬ ಸೂಚನೆ ಬಂದಿದೆ. ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದ್ದಾಗಿರುವುದರಿಂದ ಇದು ಅವರ ನಿರ್ಧಾರ. ನಮಗೆ ಏನು ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಸುಮಾರು 800 ವರ್ಷಗಳ ಹಿಂದೆ ಬಪ್ಪಬ್ಯಾರಿ ಎಂಬ ಮುಸ್ಲಿಂ ಸಮುದಾಯದ ವ್ಯಕ್ತಿಗೆ ಶ್ರೀ ದುರ್ಗಾಪರಮೇಶ್ವರಿ ದೇವಿ ಒಲಿದಿದ್ದರು. ಆ ಬಳಿಕ ದೇವಿಯ ಸೂಚನೆಯಂತೆ ಬಪ್ಪಬ್ಯಾರಿ ಮುಲ್ಕಿಯಲ್ಲಿ ದುರ್ಗಾಪರಮೇಶ್ವರಿ ಅಮ್ಮನವರಿಗೆ ದೇವಸ್ಥಾನವನ್ನು ನಿರ್ಮಿಸಿದರು ಎಂಬುದು ಮುಲ್ಕಿ ಬಪ್ಪನಾಡು ದೇವಸ್ಥಾನದ ಇತಿಹಾಸ ಹೇಳುತ್ತದೆ. ಅಲ್ಲದೆ, ಇದೇ ಬಪ್ಪನಾಡು ದೇವಸ್ಥಾನದ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಬಪ್ಪಬ್ಯಾರಿ ಅವರ ಕುಂಬಸ್ಥರಿಗೆ ಪ್ರಥಮವಾಗಿ ದೇವರ ಪ್ರಸಾದವನ್ನು ನೀಡಿದ ಬಳಿಕವೇ ಜಾತ್ರಾಮಹೋತ್ಸವಕ್ಕೆ ಧ್ವಜಾರೋಹಣ ನಡೆಯುವುದು ಇಲ್ಲಿನ ಪದ್ದತಿ.
ಅಲ್ಲದೆ, ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ಜಾತ್ರಾಮಹೋತ್ಸವದ ಸಂದರ್ಭ ಸಸಿಹಿತ್ಲುವಿನ ಭಗವತಿ ದೇವಸ್ಥಾನದ ಶ್ರೀ ಭಗವತಿ ಅಮ್ಮನವರು ಸಹೋದರಿಯಾದ ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರಿಯನ್ನು ಭೇಟಿಯಾಗಲು ಬರುವ ಸಂಪ್ರದಾಯವೂ ಇದೆ.
ಭಗವತಿ ದೇವಿ ಸಸಿಹಿತ್ಲುವಿನಿಂದ ಕಾಲ್ನಡಿಗೆಯ ಮೂಲಕ ಬಪ್ಪನಾಡಿಗೆ ಬರುವ ವೇಳೆ ಹಳೆಯಂಗಡಿ ಕದಿಕೆ ಕೇಂದ್ರ ಜುಮಾ ಮಸೀದಿಗೆ ಒಳಪಡುವ ಪುರಾತನ ಕೆಳಗಿನ ಮಸೀದಿಯ ಎದುರು ಪ್ರಸಾದ ಇಟ್ಟು ಬಳಿಕ ಬಪ್ಪನಾಡಿಗೆ ಪ್ರಯಾಣ ಬೆಳೆಸುವುದು ಇಲ್ಲಿನ ಸಂಪ್ರದಾಯ.