ಬಂಟ್ವಾಳ : ಎ. 9ರಂದು ಐಕ್ಯತಾ ಸಮಾವೇಶ

ಬಂಟ್ವಾಳ : ಪಾಣೆಮಂಗಳೂರು ಮತ್ತು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಘಟಕಗಳ ನೇತೃತ್ವದಲ್ಲಿ ಐಕ್ಯತಾ ಸಮಾವೇಶ ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಎ. 9 ರಂದು ನಡೆಯಲಿದೆ ಎಂದು ಬಂಟ್ವಾಳ ಪುರಸಭಾ ಸದಸ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜನಾರ್ದನ ಚಂಡ್ತಿಮಾರ್ ತಿಳಿಸಿದರು.
ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಿಧಾನ ಪರಿಷತ್ತು ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಉದ್ಘಾಟಿಸಲಿದ್ದು, ಮಾಜಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆ ವಹಿಸುವರು, ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ದಿಕ್ಸೂಚಿ ಭಾಷಣ ಮಾಡಲಿರುವರು ಎಂದರು.
ಭವಿಷ್ಯತ್ತಿನ ಬಂಟ್ವಾಳಕ್ಕಾಗಿ ಈ ಸಮಾವೇಶವನ್ನು ಏರ್ಪಡಿಸಲಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪರಿಶಿಷ್ಟರ ಬದುಕಲ್ಲಿ ಚೆಲ್ಲಾಟವಾಡುತ್ತಿದೆ. ರಾಜ್ಯದ ಬಿಜೆಪಿ ಸರಕಾರದಿಂದ ಪರಿಶಿಷ್ಟ ಸಮುದಾಯದ ಜನ ಸಾಮಾನ್ಯರಿಗೆ, ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ರಾಜ್ಯ ಸರಕಾರ ಜಾರಿಗೆ ಮಾಡಲು ಹೊರಟಿಡುವ ಮೀಸಲಾತಿಯಿಂದ ದ.ಕ.ಜಿಲ್ಲೆಯ ಪ.ಸಮುದಾಯಕ್ಕೆ ಅನ್ಯಾಯವಾಗಿದೆ. ಬಿ.ಸಿ.ರೋಡಿನಲ್ಲಿ ಇದುವರೆಗೂ ಅಂಬೇಡ್ಕರ್ ಭವನ ನಿರ್ಮಾಣ ಮಾಡದೆ ಈಗಿನ ಶಾಸಕರು ಪರಿಶಿಷ್ಟರಿಗೆ ಅನ್ಯಾಯವೆಸಗಿದ್ದಾರೆ ಎಂದು ಆರೋಪಿಸಿದ ಅವರು, ಮೀಸಲಾತಿ ಎಂಬುದು ಪರಿಶಿಷ್ಟರ ಭಿಕ್ಷೆಯಲ್ಲ, ಅದು ಹಕ್ಕು ಎಂಬ ನೆಲೆಯಲ್ಲಿ ಈ ಸಮಾವೇಶ ಮಾಡುತ್ತಿದ್ದೇವೆ ಎಂದ ಚಂಡ್ತಿಮಾರ್, ಕಾಂಗ್ರೆಸ್ ನಿಂದು ಮಾತ್ರ ಪರಿಶಿಷ್ಟರಿಗೆ ನ್ಯಾಯ ದೊರಕಿಸಲು ಸಾಧ್ಯ ಎಂದರು.
ಸುದ್ದಿಗೋಷ್ಠಿಯಲ್ಲಿ ದ.ಕ.ಜಿಲ್ಲಾ ಪ.ಪಂಗಡ ಕಾಂಗ್ರೆಸ್ ವಿಭಾಗದ ಅಧ್ಯಕ್ಷ ನಾರಾಯಣ ನಾಯ್ಕ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗ ಅಧ್ಯಕ್ಷ ಅಣ್ಣು ಖಂಡಿಗ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಪಪಂ ವಿಭಾಗ ಅಧ್ಯಕ್ಷ ಚಂದ್ರಹಾಸ ನಾಯ್ಕ್, ಪಾಣೆಮಂಗಳೂರು ಬ್ಲಾಕ್ ಪ.ಜಾತಿ ವಿಭಾಗದ ಅಧ್ಯಕ್ಷ ಪ್ರೀತಮ್ ರಾಜ್ ದ್ರಾವಿಡ್, ವಿವಿಧ ಸಮಘಟನೆಗಳ ಪ್ರಮುಖರಾದ ಸತೀಶ್ ಅರಳ, ಅಮ್ಮಣ್ಣ, ನಾಗರಾಜ್, ರಾಜ ಚಂಡ್ತಿಮಾರ್, ಮೋಹನ ಚಂಡ್ತಿಮಾರ್, ದಿವಾಕರ ಚಂಡ್ತಿಮಾರ್ ಮತ್ತಿತರರು ಉಪಸ್ಥಿತರಿದ್ದರು.







