ಉಡುಪಿ: ಚುನಾವಣಾ ಅಕ್ರಮಗಳ ವಿರುದ್ಧ ‘ಸಿ ವಿಜಿಲ್’ ಹದ್ದಿನ ಕಣ್ಣು

ಉಡುಪಿ: ಮುಕ್ತ, ಪಾರದರ್ಶಕ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಸುವುದು ಚುನಾವಣಾ ಆಯೋಗದ ಮುಖ್ಯ ಉದ್ದೇಶ ವಾಗಿದ್ದು, ಈ ಉದ್ದೇಶ ಈಡೇರಿಕೆಗೆ ಚುನಾವಣಾ ಸಮಯದಲ್ಲಿ ನಡೆಯುವ ಹಲವು ಅಕ್ರಮಗಳು ಅಡ್ಡಿಯಾಗಲಿದ್ದು, ಇಂತಹ ಅಕ್ರಮಗಳನ್ನು ತಡೆಯಲು ಹಾಗು ಇವುಗಳ ವಿರುದ್ದ ತ್ವರಿತಗತಿಯಲ್ಲಿ, ಕಾಲಮಿತಿಯೊಳಗೆ ಕ್ರಮ ಕೈಗೊಳ್ಳಲು ಸಿ ವಿಜಿಲ್ (cVIGIL) ಆ್ಯಪ್ನ್ನು ಚುನಾವಣಾ ಆಯೋಗ ಬಿಡುಗಡೆ ಮಾಡಿದೆ.
ಚುನಾವಣಾ ಸಮಯದಲ್ಲಿ ಮತದಾರರಿಗೆ ನಿರ್ದಿಷ್ಟ ವ್ಯಕ್ತಿ ಅಥವಾ ಪಕ್ಷಕ್ಕೆ ಮತ ಹಾಕುವಂತೆ ವಿವಿಧ ರೀತಿಯ ಅಮಿಷ ನೀಡಬಹುದಾದ, ಹಣ ವಿತರಣೆ, ಉಡುಗೊರೆಗಳು ಹಾಗೂ ಕೂಪನ್ ವಿತರಣೆ, ಮದ್ಯ ವಿತರಣೆ, ಅನುಮತಿಯಿಲ್ಲದ ಪೋಸ್ಟರ್ಗಳು ಮತ್ತು ಬ್ಯಾನರ್ಗಳು, ಬಂದೂಕುಗಳ ಪ್ರದರ್ಶನ ಹಾಗೂ ಬೆದರಿಕೆ, ಆಸ್ತಿ ವಿರೂಪ, ಧಾರ್ಮಿಕ ಅಥವಾ ಕೋಮು ಭಾಷಣಗಳು/ಸಂದೇಶಗಳು, ಮತಗಟ್ಟೆಯ 200 ಮೀ.ಪ್ರದೇಶದಲ್ಲಿ ಪ್ರಚಾರ, ನಿಷೇಧದ ಅವಧಿಯಲ್ಲಿ ಪ್ರಚಾರ, ಮತದಾನ ದಿನದಂದು ವಾಹನಗಳಲ್ಲಿ ಮತದಾರರ ಸಾಗಣೆ ಮುಂತಾದ ಯಾವುದೇ ರೀತಿಯ ಪ್ರಲೋಭನೆ ಹಾಗೂ ಬೆದರಿಕೆ ಹಾಗೂ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಕಂಡುಬಂದಲ್ಲಿ ಸಾರ್ವಜನಿಕರೇ ನೇರವಾಗಿ ಸಿ ವಿಜಿಲ್ ಆ್ಯಪ್ ನಲ್ಲಿ ಅದರ ಬಗ್ಗೆ ದೂರು ದಾಖಲು ಮಾಡಬಹುದಾಗಿದೆ.
ಸಿ ವಿಜಿಲ್ ಮೂಲಕ ಸಲ್ಲಿಸುವ ದೂರುಗಳು ಸ್ವಯಂ ಸ್ಥಳವನ್ನು ತೋರಿಸುವ ಸೌಲಭ್ಯದೊಂದಿಗೆ ಪ್ರಕರಣ ನಡೆದ ನಿರ್ದಿಷ್ಟ ಸ್ಥಳ ಮತ್ತು ಸಮಯದಲ್ಲಿ ಮಾಹಿತಿಯನ್ನು ಸ್ಪಷ್ಟವಾಗಿ ತಿಳಿಸಲಿವೆ.
ಸಾರ್ವಜನಿಕರು ಆಂಡ್ರಾಯ್ಡ್ ಮೊಬೈಲ್ನಲ್ಲಿ ಪ್ಲೇಸ್ಟೋರ್ನಿಂದ ಸಿವಿಜಿಲ್ ಆ್ಯಪ್ನ್ನು ಡೌನ್ಲೋಡ್ ಮಾಡಿಕೊಂಡು ಅತ್ಯಂತ ಸುಲಭ ರೀತಿಯಲ್ಲಿ ಇದನ್ನು ಬಳಸಬಹುದಾಗಿದೆ. ಅಕ್ರಮದ ಕುರಿತ ಛಾಯಾಚಿತ್ರ ಹಾಗೂ ವೀಡಿಯೋಗಳನ್ನು ಸಹ ಇದರಲ್ಲಿ ಅಪ್ಲೋಡ್ ಮಾಡಬಹು ದಾಗಿದೆ. ದೂರು ನೀಡುವ ಸಾರ್ವಜನಿಕರ ಹೆಸರುಗಳನ್ನು ಅತ್ಯಂತ ಗೌಪ್ಯವಾಗಿಡಲಾಗುವುದು.
ಸಿ ವಿಜಿಲ್ನಲ್ಲಿ ದಾಖಲಾಗುವ ದೂರುಗಳನ್ನು ನಿರ್ವಹಿಸಲು ಉಡುಪಿ ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಪ್ರತ್ಯೇಕ ಸಿಬ್ಬಂದಿಗಳನ್ನು ನಿಯೋಜಿಸ ಲಾಗಿದೆ. ಇವರು ಮತದಾನ ಮುಕ್ತಾಯವಾಗುವರೆಗೂ 3 ಪಾಳಿಯಲ್ಲಿ ದಿನದ 24ಗಂಟೆಯೂ ಕಾರ್ಯ ನಿರ್ವಹಿಸಲಿದ್ದಾರೆ. ದೂರುಗಳು ಬಂದ ಕೂಡಲೇ ಅವುಗಳನ್ನು ಪರಿಶೀಲಿಸಿ, ಸದ್ರಿ ಸ್ಥಳದಲ್ಲಿ ಕಾರ್ಯ ನಿರ್ವಹಿಸು ತ್ತಿರುವ ವ್ಯಾಪ್ತಿಯ ಪ್ಲೈಯಿಂಗ್ ಸ್ಕ್ವಾಡ್ ತಂಡಕ್ಕೆ ಪ್ರಕರಣದ ಸಂಪೂರ್ಣ ವಿವರ ಹಾಗೂ ಮಾಹಿತಿಗಳನ್ನು ರವಾನಿಸಲಾಗುತ್ತದೆ. ಈ ಮಾಹಿತಿಗಳ ಆಧಾರದಲ್ಲಿ ಸ್ಥಳಕ್ಕೆ ತಕ್ಷಣದಲ್ಲಿ ಭೇಟಿ ನೀಡುವ ಪ್ಲೈಯಿಂಗ್ ಸ್ಕ್ವಾಡ್ ತಂಡದ ಸಿಬ್ಬಂದಿ ದೂರು ಕುರಿತಂತೆ ಅಗತ್ಯ ಕ್ರಮ ಕೈಗೊಳ್ಳಲಿದ್ದು, ಗರಿಷ್ಠ 100 ನಿಮಿಷಗಳ ಒಳಗೆ ಆ ದೂರುಗಳನ್ನು ಸಂಪೂರ್ಣ ಇತ್ಯರ್ಥ ಪಡಿಸಲಾಗುತ್ತದೆ.
ಸಾರ್ವಜನಿಕರು ಸಿ ವಿಜಿಲ್ ಆ್ಯಪ್ ಮಾತ್ರವಲ್ಲದೇ ಉಚಿತ ಸಹಾಯವಾಣಿ ಸಂಖ್ಯೆ 1950ಕ್ಕೆ ಸಹ ಚುನಾವಣಾ ಅಕ್ರಮಗಳ ಬಗ್ಗೆ ದೂರು ನೀಡಬಹುದಾಗಿದೆ. ಈ ಮೂಲಕ ಮುಕ್ತ, ಪಾರದರ್ಶಕ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಯಲು ಚುನಾವಣಾ ಆಯೋಗದೊಂದಿಗೆ ತಾವೂ ಸಹ ಕೈ ಜೋಡಿಸಬಹುದಾಗಿದೆ ಎಂದು ಜಿಲ್ಲಾ ಚುನಾವಣಾ ಘಟಕ ತಿಳಿಸಿದೆ.