ಜಯಲಲಿತಾರಿಂದ ಜಪ್ತಿ ಮಾಡಿದ್ದ ಬೆಲೆಬಾಳುವ ವಸ್ತುಗಳ ವಿಲೇವಾರಿಗೆ ವಿಶೇಷ ಅಭಿಯೋಜಕರನ್ನ ನೇಮಿಸಿದ ಸರಕಾರ

ಬೆಂಗಳೂರು, ಎ.7: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರಿಂದ ಜಪ್ತಿ ಮಾಡಲಾದ ಬೆಲೆ ಬಾಳುವ ವಸ್ತುಗಳನ್ನು ವಿಲೇವಾರಿ ಮಾಡಲು ಹಿರಿಯ ವಕೀಲ ಕಿರಣ್ ಎಸ್ ಜವಳಿ ಅವರನ್ನು ನೇಮಕ ಮಾಡಿ ಸರಕಾರ ಆದೇಶಿಸಿದೆ.
ಜವಳಿ ಅವರನ್ನು ನೇಮಕ ಮಾಡಿ ಸರಕಾರದ ಅಧೀನ ಕಾರ್ಯದರ್ಶಿ ಆದಿನಾರಾಯಣ ಅವರು ಇತ್ತೀಚೆಗೆ ಆದೇಶ ಮಾಡಿದ್ದಾರೆ. ಮುಂದಿನ ಒಂದು ತಿಂಗಳಲ್ಲಿ ಈ ಕುರಿತ ವಿಚಾರಣೆ ಪ್ರಾರಂಭವಾಗಲಿದ್ದು, ಎಲ್ಲ ವಸ್ತುಗಳನ್ನು ಹರಾಜು ಮೂಲಕ ಮಾರಾಟ ಮಾಡಿ ಬಂದ ಹಣವನ್ನು ನ್ಯಾಯಾಲಯವೇ ತಮಿಳುನಾಡು ಸರಕಾರಕ್ಕೆ ಒಪ್ಪಿಸಲಿದೆ ಎಂದು ಕಾನೂನು ತಜ್ಞರು ವಿವರಿಸಿದ್ದಾರೆ.
ಮಾಹಿತಿ ಹಕ್ಕು ಕಾರ್ಯಕರ್ತ(ಆರ್ಟಿಐ) ಟಿ.ನರಸಿಂಹಮೂರ್ತಿ ಸಲ್ಲಿಸಿದ್ದ ಮೇಲ್ಮನವಿ ಕುರಿತು ನಗರದ ಪ್ರಧಾನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ(ಪ್ರಥಮ ಮೇಲ್ಮನವಿ ಪ್ರಾಧಿಕಾರ) ಇತ್ತೀಚೆಗೆ ಈ ಮಾಹಿತಿಯನ್ನು ಒದಗಿಸಿದೆ.
ಜಯಲಲಿತಾಗೆ ಸೇರಿದ ಯಾವ ಯಾವ ವಸ್ತುಗಳಿವೆ?: 7,040 ಗ್ರಾಂ ತೂಕದ 468 ಬಗೆಯ ಚಿನ್ನ ಹಾಗೂ ವಜ್ರಖಚಿತ ಆಭರಣಗಳು, 700 ಕೆ.ಜಿ. ತೂಕದ ಬೆಳ್ಳಿ ಆಭರಣಗಳು, 740 ದುಬಾರಿ ಬೆಲೆಯ ಚಪ್ಪಲಿಗಳು, 11,344 ರೇಷ್ಮೆ ಸೀರೆಗಳು, 250 ಶಾಲು, 12 ರೆಫ್ರಿಜೆರೇಟರ್, 10 ಟಿವಿ ಸೆಟ್, 8 ವಿಸಿಆರ್, 1 ವಿಡಿಯೋ ಕ್ಯಾಮೆರಾ, 4 ಸಿಡಿ ಪ್ಲೇಯರ್, 2 ಆಡಿಯೋ ಡೆಕ್, 24 ಟೂ-ಇನ್ ಒನ್ ಟೇಪ್ ರೇಕಾರ್ಡರ್, 1,040 ವಿಡಿಯೋ ಕ್ಯಾಸೆಟ್, 3 ಐರನ್ ಲಾಕರ್, 1,93,202 ರೂ. ನಗದು ಸೇರಿದಂತೆ ಹಲವು ವಸ್ತುಗಳು ಜಯಲಲಿತಾ ಅವರಿಂದ ಜಪ್ತಿ ಮಾಡಲಾಗಿತ್ತು.







