ವೈಜ್ಞಾನಿಕ ಮನೋಭಾವನೆ ಬೆಳೆಸಲು ಭಾರತದುದ್ದಕ್ಕೂ ಪ್ರವಾಸ: ಹರೀಂದರ್ ಲಾಲಿ

ಮಂಗಳೂರು, ಎ.8: ಪ್ರಸಕ್ತ ಕಾಲಘಟ್ಟದಲ್ಲಿ ನಮ್ಮನ್ನಾಳುವ ಸರಕಾರಗಳು ದೇಶದ ಸಂವಿಧಾನದ ಆಶಯಗಳಲ್ಲೊಂದಾದ ಆರ್ಟಿಕಲ್ 51A(h) ವೈಜ್ಞಾನಿಕ ಮನೋಭಾವನೆ ಬೆಳೆಸುವ ಕಾರ್ಯಕ್ರಮಗಳನ್ನು ಉತ್ತೇಜಿಸುವ ಬದಲಾಗಿ ಮೂಡನಂಬಿಕೆ, ಅನಾಚಾರಗಳನ್ನು ಮಾತ್ರವಲ್ಲ, ಒಟ್ಟು ದೇಶದ ಸಂವಿಧಾನದ ಎಲ್ಲ ಆಶಯಗಳನ್ನೇ ಬುಡಮೇಲು ಮಾಡಲು ಹೊರಟಿದೆ. ಇಂತಹ ಸಂದಿಗ್ಧ ವಿದ್ಯಮಾನದಲ್ಲಿ ದೇಶದ ಜನರನ್ನು ಮೂಡನಂಬಿಕೆಯಿಂದ ಹೊರತರುವ, ವೈಜ್ಞಾನಿಕ ಚಿಂತನೆ ಬೆಳೆಸುವ ನಿಟ್ಟಿನಲ್ಲಿ ನಾವು ದೇಶಾದ್ಯಂತ ಪ್ರವಾಸಕೈಗೊಂಡಿದ್ದೇವೆ ಎಂದು ಖ್ಯಾತ ವಿಚಾರವಾದಿ, ವಕೀಲರು ಆದ ಹರಿಂದರ್ ಲಾಲಿ ಹೇಳಿದ್ದಾರೆ.
ವೈಜ್ಞಾನಿಕ ಚಿಂತನೆಗಳನ್ನು ಹರಡಲು ಭಾರತ, ನೇಪಾಳ, ಭೂತಾನ್ ದೇಶಾದ್ಯಂತ ಪ್ರವಾಸ ಕೈಗೊಂಡಿರುವ ಹರಿಂದರ್ ಲಾಲಿ ಮತ್ತವರ ಬಳಗದ ಡಾ.ರಾಜಾ ರಾಮ್, ಡಾ.ರಾಜೇಶ್ ಶುಕ್ರವಾರ ಮಂಗಳೂರಿಗೆ ಆಗಮಿಸಿದ್ದ ಈ ವೇಳೆ ನಗರದ ವಿಕಾಸದಲ್ಲಿ ಸಮಾನ ಮನಸ್ಕರೊಂದಿಗೆ ನಡೆದ ಸಂವಾದದಲ್ಲಿ ಚರ್ಚಿಸಿದರು.
ವಿಚಾರವಾದಿ ಡಾ.ರಾಜಾರಾಮ್ ಮಾತನಾಡುತ್ತಾ, ದೇಶದ ಯಾವುದೇ ರಾಜ್ಯಗಳಲ್ಲಿ ಪ್ರತೀ ಬಾರಿಯು ನಡೆಯುವ ಚುನಾವಣೆಯಲ್ಲಿ ಆಯಾ ರಾಜ್ಯದ ಮಠಾಧೀಶರುಗಳು, ಸ್ವಾಮೀಜಿಗಳು ಧರ್ಮ ಮತ್ತು ಜಾತಿಯ ಆಧಾರದಲ್ಲಿ ಯಾರಿಗೆ ಮತ ನೀಡಬೇಕೆಂದು ತೀರ್ಮಾನಿಸುತ್ತಾರೆ. ಧರ್ಮದ ಆಧಾರದಲ್ಲಿ ಮತೀಯ ರಾಜಕಾರಣ ನಡೆಸುವ, ಮೂಡನಂಬಿಕೆಗಳನ್ನು ಪೋಷಿಸುವ, ಭ್ರಷ್ಟಾಚಾರ ನಡೆಸುವಂತಹ ರಾಜಕೀಯ ಪಕ್ಷಗಳನ್ನು, ರಾಜಕಾರಣಿಗಳನ್ನು ಆಯ್ಕೆಮಾಡಿಕೊಳ್ಳಲು ಪ್ರಚೋದಿಸುತ್ತಾರೆ. ದೇವರ ಹೆಸರಲ್ಲಿ ದುಡ್ಡಿನ ದಂಧೆ ನಡೆಸುವ ಇಂತಹ ಕಪಟ ಮಠಾಧೀಶರುಗಳ ವಿರುದ್ಧ ಹೋರಾಟ ನಡೆಸಬೇಕು ಅವರ ಕಪಟತನವನ್ನು ಬಯಲುಗೊಳಿಸಬೇಕು ಎಂದು ಅಭಿಪ್ರಾಯಿಸಿದರು.
ಧರ್ಮದ ಹೆಸರಲ್ಲಿ ಅನಾಚಾರ, ಅತ್ಯಾಚಾರ ನಡೆಸಿ ಜೈಲು ಪಾಲಾದ ಪಂಜಾಬಿನ ಸಂತ ಎಂದು ಕರೆಸಿಕೊಂಡ ಗುರ್ಮೀತ್ ರಾಮ್ ರಹೀಮ್ ವಿರುದ್ಧ ಹೋರಾಟ ನಡೆಸಿದ ತನ್ನ ಮೇಲೆ ಹಲವು ಬಾರಿ ಕೊಲೆ ಯತ್ನ ನಡೆದಿದೆ. ಪ್ರಮುಖ ಸಾಕ್ಷಿದಾರನಾಗಿದ್ದ ತನ್ನನ್ನು ಮುಗಿಸಲು ನಡೆಸಿದ ಪ್ರಯತ್ನದಿಂದ ನಾನೇನು ಕಂಗೆಡಲಿಲ್ಲ. ಇಂತಹ ಬಲಾಡ್ಯನನ್ನು ಬಗ್ಗುಬಡಿಯಲು ಧೈರ್ಯದಿಂದ ಮುನ್ನಡೆಯಬೇಕಿದೆ ಎಂದರು.
ಈ ವೇಳೆ ಮತ್ತೋರ್ವ ವಿಚಾರವಾದಿ ಡಾ ರಾಜೇಶ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಡಿವೈಎಫ್ಐ ದ.ಕ. ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಚಾರವಾದಿ ಪ್ರೊ.ನರೇಂದ್ರ ನಾಯಕ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಪ್ರೊ.ರಾಜೇಂದ್ರ ಉಡುಪ, ದಲಿತ ಸಂಘಟನೆಯ ಹಿರಿಯ ಮುಖಂಡರಾದ ಎಂ.ದೇವದಾಸ್, ಮಾನವತಾವಾದಿ ಸಂಘಟನೆಯ ಡಾ.ಕೃಷ್ಣಪ್ಪ ಕೊಂಚಾಡಿ, ಬರಹಗಾರರಾದ ಟಿ.ಆರ್.ಭಟ್, ಹಿರಿಯ ಕಲಾವಿದ ಪ್ರಭಾಕರ್ ಕಾಪಿಕಾಡ್, ಮೈಕಲ್ ಡಿಸೋಜ, ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್, ಸಮುದಾಯದ ವಾಸುದೇವ ಉಚ್ಚಿಲ, ಎಐವೈಎಫ್ ಪುಷ್ಪರಾಜ್ ಬೋಳೂರು, ಕರುಣಾಕರ್, ಜಗತ್ಪಾಲ್, ಎಸ್ಎಫ್ಐನ ಜಿಲ್ಲಾ ಕಾರ್ಯದರ್ಶಿ ರೇವಂತ್ ಕದ್ರಿ, ಪ್ರಮೀಳಾ ಶಕ್ತಿನಗರ, ಅಸುಂತ ಡಿಸೋಜ, ಮಯೂರ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.






.jpeg)
.jpeg)
.jpeg)

