ವೈಜ್ಞಾನಿಕ ಮನೋಭಾವನೆ ಬೆಳೆಸಲು ದೇಶಾದ್ಯಂತ ಪ್ರವಾಸ: ಹರಿಂದರ್ ಲಾಲಿ

ಮಂಗಳೂರು: ಪ್ರಸಕ್ತ ಕಾಲಘಟ್ಟದಲ್ಲಿ ನಮ್ಮನ್ನಾಳುವ ಸರಕಾರಗಳು ದೇಶದ ಸಂವಿಧಾನದ ಆಶಯಗಳ ಲ್ಲೊಂದಾದ ಆರ್ಟಿಕಲ್ 51ಎ (ಎಚ್) ವೈಜ್ಞಾನಿಕ ಮನೋಭಾವನೆ ಬೆಳೆಸುವ ಕಾರ್ಯಕ್ರಮಗಳನ್ನು ಉತ್ತೇಜಿಸುವ ಬದಲಾಗಿ ಮೂಢನಂಬಿಕೆಗಳನ್ನೇ ದೇಶದ ಸಂವಿಧಾನದ ಎಲ್ಲಾ ಆಶಯಗಳನ್ನೇ ಬುಡಮೇಲು ಮಾಡಲು ಹೊರಟಿವೆ. ಇಂತಹ ಸಂದಿಗ್ಧ ವಿದ್ಯಮಾನದಲ್ಲಿ ದೇಶದ ಜನರನ್ನು ಮೂಢನಂಬಿಕೆಯಿಂದ ಹೊರತರುವ, ವೈಜ್ಞಾನಿಕ ಚಿಂತನೆ ಬೆಳೆಸುವ ನಿಟ್ಟಿನಲ್ಲಿ ದೇಶದಾದ್ಯಂತ ಪ್ರವಾಸಕೈಗೊಂಡಿದ್ದೇವೆ ಎಂದು ವಿಚಾರವಾದಿ, ನ್ಯಾಯವಾದಿ ಹರಿಂದರ್ ಲಾಲಿ ಹೇಳಿದ್ದಾರೆ.
ವೈಜ್ಞಾನಿಕ ಚಿಂತನೆಗಳನ್ನು ಹರಡಲು ಭಾರತ, ನೇಪಾಳ, ಭೂತಾನ್ ದೇಶಾದ್ಯಂತ ಪ್ರವಾಸ ಕೈಗೊಂಡಿರುವ ವಿಚಾರವಾದಿ ಹರಿಂದರ್ ಲಾಲಿ ಮತ್ತವರ ಬಳಗದ ಡಾ. ರಾಜಾರಾಮ್, ಡಾ. ರಾಜೇಶ್ ಅವರೊಂದಿಗೆ ವಿಚಾರವಾದಿ ಪ್ರೊ. ನರೇಂದ್ರ ನಾಯಕ್ ಅವರು ಶುಕ್ರವಾರ ನಗರದ ವಿಕಾಸದಲ್ಲಿ ಸಮಾನ ಮನಸ್ಕರೊಂದಿಗೆ ಆಯೋಜಿಸಿದ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಿಚಾರವಾದಿ ಡಾ. ರಾಜಾರಾಮ್ ಮಾತನಾಡುತ್ತಾ ದೇಶಾದ್ಯಂತ ನಡೆಯುವ ಚುನಾವಣೆಯಲ್ಲಿ ಆಯಾ ರಾಜ್ಯದ ಮಠಾಧೀಶರು, ಸ್ವಾಮೀಜಿಗಳು ಧರ್ಮ ಮತ್ತು ಜಾತಿಯ ಆಧಾರದಲ್ಲಿ ರಾಜಕಾರಣ ನಡೆಸುತ್ತಾರೆ. ಮೂಢನಂಬಿಕೆಗಳನ್ನು ಪೋಷಿಸುತ್ತಾರೆ. ಭ್ರಷ್ಟಾಚಾರ ನಡೆಸುವ ರಾಜಕೀಯ ಪಕ್ಷಗಳು, ರಾಜಕಾರಣಿಗಳನ್ನು ಆಯ್ಕೆ ಮಾಡಿಕೊಳ್ಳಲು ಪ್ರಚೋದಿಸುತ್ತಾರೆ. ದೇವರ ಹೆಸರಲ್ಲಿ ದುಡ್ಡಿನ ದಂಧೆ ನಡೆಸುವ ಇಂತಹ ಕಪಟ ಮಠಾಧೀಶರ ವಿರುದ್ಧ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.
ಧರ್ಮದ ಹೆಸರಲ್ಲಿ ಅನಾಚಾರ, ಅತ್ಯಾಚಾರ ನಡೆಸಿ ಜೈಲು ಪಾಲಾದ ಪಂಜಾಬಿನ ಸಂತ ಎಂದು ಕರೆಸಿಕೊಂಡ ಗುರ್ಮೀತ್ ರಾಮ್ ರಹಿಮ್ ವಿರುದ್ಧ ಹೋರಾಟ ನಡೆಸಿದ ನನ್ನ ಮೇಲೆ ಹಲವು ಬಾರಿ ಕೊಲೆಯತ್ನ ನಡೆದಿದೆ. ಪ್ರಮುಖ ಸಾಕ್ಷಿದಾರನಾಗಿದ್ದ ನನ್ನನ್ನು ಮುಗಿಸಲು ನಡೆಸಿದ ಪ್ರಯತ್ನದಿಂದ ನಾನೇನು ಕಂಗೆಡಲಿಲ್ಲ. ಇಂತಹ ಬಲಾಢ್ಯರನ್ನು ಬಗ್ಗು ಬಡಿಯಲು ಧೈರ್ಯದಿಂದ ಮುನ್ನಡೆಯಬೇಕು ಎಂದು ಡಾ. ರಾಜಾರಾಮ್ ಹೇಳಿದರು.
ಪ್ರೊ.ರಾಜೇಂದ್ರ ಉಡುಪ, ದಲಿತ ಸಂಘಟನೆಯ ಮುಖಂಡ ಎಂ.ದೇವದಾಸ್, ಮಾನವತಾವಾದಿ ಸಂಘಟನೆಯ ಡಾ. ಕೃಷ್ಣಪ್ಪ ಕೊಂಚಾಡಿ, ಲೇಖಕ ಟಿ.ಆರ್. ಭಟ್, ಹಿರಿಯ ಕಲಾವಿದ ಪ್ರಭಾಕರ್ ಕಾಪಿಕಾಡ್, ಡಿವೈಎಫ್ಐ ದ.ಕ. ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಮೈಕಲ್ ಡಿಸೋಜ, ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್, ಸಮುದಾಯದ ವಾಸುದೇವ ಉಚ್ಚಿಲ, ಎಐವೈಎಫ್ ಪುಷ್ಪರಾಜ್ ಬೋಳೂರು, ಕರುಣಾಕರ್, ಜಗತ್ಪಾಲ್, ಎಸ್ಎಫ್ಐ ದ.ಕ. ಜಿಲ್ಲಾ ಕಾರ್ಯದರ್ಶಿ ರೇವಂತ್ ಕದ್ರಿ, ಪ್ರಮೀಳಾ ಶಕ್ತಿನಗರ, ಅಸುಂತ ಡಿಸೋಜ, ಮಯೂರ್ ಶೆಟ್ಟಿ ಉಪಸ್ಥಿತರಿದ್ದರು.







