‘ಹಿಂಡಿ, ಪಶು ಆಹಾರ’ಗಳ ಮೇಲಿನ ಜಿಎಸ್ಟಿ ಏಕೆ ರದ್ದು ಮಾಡಿಲ್ಲ?: ಸಿದ್ದರಾಮಯ್ಯ
‘ರೈತರ ಬೆನ್ನೆಲುಬು ಮುರಿಯಲು ಬಿಜೆಪಿ ಪ್ರಯತ್ನ’

ಬೆಂಗಳೂರು, ಎ. 11: ‘ಕೇಂದ್ರ-ರಾಜ್ಯ ಬಿಜೆಪಿ ಸರಕಾರಗಳು ಕೆಲವು ವರ್ಷಗಳಿಂದ ಹಾಲು ಉತ್ಪಾದಕ ರೈತರ ಬೆನ್ನೆಲುಬು ಮುರಿಯಲು ಪ್ರಯತ್ನಿಸುತ್ತಿವೆ. ಸರಕಾರಕ್ಕೆ ಪತ್ರಗಳನ್ನು ಬರೆದು ಎಚ್ಚರಿಸಿದ್ದೇನೆ, ಸದನದಲ್ಲಿ ಪ್ರಸ್ತಾಪಿಸಿದ್ದೇನೆ. ನನ್ನ ಸಲಹೆ, ಎಚ್ಚರಿಕೆಯನ್ನು ಸರಕಾರ ಪರಿಗಣಿಸುವ ಬದಲು ರೈತರನ್ನು ಶತ್ರುಗಳು ಎಂದು ಭಾವಿಸಿ ಅವರ ಆರ್ಥಿಕ ಚೈತನ್ಯವನ್ನು ಮುರಿದು ಹಾಕಲು ಸನ್ನದ್ಧವಾಗಿ ನಿಂತಿದೆ’ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ದೂರಿದ್ದಾರೆ.
ಮಂಗಳವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ‘ಮೋದಿ ಆಪ್ತ ಬಳಗದಲ್ಲಿರುವ ಅಂಬಾನಿಯ ಕಣ್ಣು ದೇಶದ ಹಾಲಿನ ಮೇಲೆ ಬಿದ್ದಿದೆ. ಈಗ ಬೇರೆ ದೇಶಗಳಿಂದ ಆಮದು ಮಾಡಿಕೊಂಡರೂ ಅಂಬಾನಿಯ ಮೂಲಕವೆ ಮಾಡಿಕೊಳ್ಳುತ್ತಾರೆ. ಅದಕ್ಕಾಗಿಯೆ ಅಮುಲ್ನ ಎಂಡಿಯಾಗಿದ್ದ ಆರ್ಎಸ್ ಸೋಧಿಯವರನ್ನು ಆಪರೇಷನ್ ಮಾಡಿ ರಿಲಯನ್ಸ್ ಕಂಪೆನಿಗೆ ಸೇರಿಸಿಕೊಂಡಿದ್ದಾರೆ’ ಎಂದು ಟೀಕಿಸಿದ್ದಾರೆ.
ಬಿಜೆಪಿಯವರು ಗುಜರಾತಿನ ಅದಾನಿ, ಅಂಬಾನಿಗಳ ಹಿತಾಸಕ್ತಿಯ ಪರ ನಿಂತು ರೈತರ ಮೇಲೆ ಯುದ್ಧ ಸಾರಿದ್ದಾರೆ. ಅದಕ್ಕಾಗಿಯೆ ‘ನಂದಿನಿ’ ಉತ್ಪನ್ನಗಳ ಮೇಲೆ ದಾಳಿ ನಡೆಸಲು ತಾವೇ ಅಮುಲ್ ರಾಯಭಾರಿಗಳಾಗಿದ್ದಾರೆ. ಈ ಬಿಜೆಪಿಗರ ರಾಷ್ಟ್ರಪ್ರೇಮವೆಂದರೆ ಅದು ಅದಾನಿ, ಅಂಬಾನಿ ಮತ್ತು ಗುಜರಾತಿನ ಕಾರ್ಪೊರೇಟ್ ಬಂಡವಾಳಿಗರ ಮೇಲಿನ ಪ್ರೇಮ ಮಾತ್ರ. ಹಾಗಾಗಿ ಕರ್ನಾಟಕದ ಅಷ್ಟೂ ಬಿಜೆಪಿಯವರು ನಾಡದ್ರೋಹಿಗಳಾಗಿ ಪರಿವರ್ತನೆಯಾಗಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.
‘ಹಿಂಡಿ’ ಮತ್ತಿತರ ಪಶು ಆಹಾರಗಳ ಮೇಲೆ ವಿಧಿಸುತ್ತಿರುವ ಜಿಎಸ್ಟಿ ಯಾಕೆ ರದ್ದು ಮಾಡಿಲ್ಲ?, ರಾಜ್ಯ ಸರಕಾರವೆ ನನಗೆ ನೀಡಿರುವ ಮಾಹಿತಿ ಪ್ರಕಾರ 2019ರಲ್ಲಿ 1 ಕೋಟಿ 29 ಲಕ್ಷ ಇದ್ದ ಜಾನುವಾರುಗಳು 2022ರ ಡಿಸೆಂಬರ್ ವೇಳೆಗೆ 1.15 ಕೋಟಿಗೆ ಇಳಿಕೆಯಾಗಿವೆ. ಹಾಗಿದ್ದರೆ 14 ಲಕ್ಷ ರಾಸುಗಳು ಎಲ್ಲಿ ಹೋದವು? ಜಾನುವಾರು ಹತ್ಯಾ ನಿಷೇಧ ಕಾಯ್ದೆಯ ಕಾರಣಕ್ಕಾಗಿ ನಿಮ್ಮ ಕಿರುಕುಳದಿಂದ ರೈತರು ತಮ್ಮ ಹಸುಗಳನ್ನೆಲ್ಲ ಮಾರಿಬಿಟ್ಟರೆ?’ ಎಂದು ಅವರು ಪ್ರಶ್ನಿಸಿದ್ದಾರೆ.
‘2014ರಲ್ಲಿ 45 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿತ್ತು, 2017ರ ಕೊನೆಯ ವೇಳೆಗೆ 73 ಲಕ್ಷ ಲೀಟರ್ಗೆ ಏರಿಕೆಯಾಗಿತು? ಇದರಿಂದಾಗಿ ಶೇ.61 ರಷ್ಟು ಹಾಲಿನ ಉತ್ಪಾದನೆ ಹೆಚ್ಚಾಗಿತ್ತು. ಆದರೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಈಗ ಯಾಕೆ 71 ಲಕ್ಷ ಲೀಟರ್ಗಳಿಗೆ ಇಳಿಕೆಯಾಗಿದೆ?. ನಮ್ಮ ಸರಕಾರದ ಅವಧಿಯಲ್ಲಿ ಪ್ರತಿ ಲೀ. ಹಾಲಿಗೆ ಕೊಡುವ ಪ್ರೋತ್ಸಾಹಧನವನ್ನು 5 ರೂ.ಗೆ ಏರಿಸಿದ್ದೆವು. ಆದರೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಯಾಕೆ ಒಂದು ರೂ. ಹೆಚ್ಚು ಮಾಡಲಿಲ್ಲ?’ ಎಂದು ಸಿದ್ದರಾಮಯ್ಯ ಕೇಳಿದ್ದಾರೆ.
‘ನಮ್ಮ ಸರಕಾರ ಇದ್ದಾಗ ವರ್ಷಕ್ಕೆ 1,356 ಕೋಟಿ ರೂ.ಗೂ ಹೆಚ್ಚು ಹಣವನ್ನು ಹಾಲಿನ ಪ್ರೋತ್ಸಾಹಧನ ರೈತರಿಗೆ ಕೊಡುತ್ತಿದ್ದೆವು. ಆದರೆ ಬೊಮ್ಮಾಯಿ ಸರಕಾರ 1,200 ಕೋಟಿ ರೂ.ಗಳಷ್ಟನ್ನೂ ಕೊಡುತ್ತಿಲ್ಲ ಯಾಕೆ?. ನಾವು ಶಾಲಾ ಮಕ್ಕಳಿಗೆ ವಾರದಲ್ಲಿ 5 ದಿನ ಕೆನೆಭರಿತ ಹಾಲನ್ನು ನೀಡುತ್ತಿದ್ದೆವು. ಇದರಿಂದಾಗಿ ಮಕ್ಕಳ ಅನಿಮಿಯಾ ಪ್ರಮಾಣ ಕಡಿಮೆಯಾಗಿತ್ತು. ಆದರೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಅನಿಮಿಯಾ ಪ್ರಮಾಣ ಕಡಿಮೆಯಾಗುವ ಬದಲು ಶೇ.65.5ಕ್ಕೆ ಏರಿಕೆಯಾಗಿದೆಯೆಂದು ಮೋದಿ ಸರಕಾರವೆ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ. ಈ ಪ್ರಮಾಣದಲ್ಲಿ ಅನಿಮಿಯಾ ಜಾಸ್ತಿಯಾಗಲು ಕಾರಣ ಏನು? ಬೊಮ್ಮಾಯಿ ಸರಕಾರ ಮಕ್ಕಳಿಗೆ ಹಾಲು ಕೊಡುವುದನ್ನು ನಿಲ್ಲಿಸಿರುವುದು ಏಕೆ? ಮಕ್ಕಳ ಹಾಲಿಗೆ ಬಿಡುಗಡೆ ಮಾಡಬೇಕಾದ ಅನುದಾನವನ್ನು ನಿಲ್ಲಿಸಿರುವುದು ಏಕೆ?’ ಎಂದು ಅವರು ಆಕ್ರೋಶ ಹೊರ ಹಾಕಿದ್ದಾರೆ.
‘ಮಕ್ಕಳು ಕುಡಿಯುವ ಹಾಲಿಗೆ, ರೈತರಿಗೆ ನೀಡುವ ಪ್ರೋತ್ಸಾಹಧನಕ್ಕೆ ಹಣ ಇಲ್ಲ ಎಂದಾದರೆ ಆರೆಸ್ಸೆಸ್ ಅಂಗ ಸಂಸ್ಥೆಗಳಾದ ರಾಷ್ಟ್ರೋತ್ಥಾನ ಪರಿಷತ್, ಜನಸೇವಾ ಟ್ರಸ್ಟ್, ಚಾಣುಕ್ಯ ವಿವಿ ಮುಂತಾದವುಗಳಿಗೆ ಸಾವಿರಾರು ಕೋಟಿ ರೂ.ಬೆಲೆ ಬಾಳುವ ಭೂಮಿಯನ್ನು, ಗೋಮಾಳಗಳನ್ನು ಕೆಲವೇ ಕೆಲವೆ ಕೋಟಿ ರೂ.ಗಳಿಗೆ ನೀಡಿ ರಾಜ್ಯದ ಜನರಿಗೆ ಅನ್ಯಾಯ ಮಾಡಿದ್ದು ಏಕೆ?. ಚಿತ್ರದುರ್ಗ ಮುಂತಾದ ಜಿಲ್ಲೆಗಳಲ್ಲಿರುವ ಅಮೃತ್ ಮಹಲ್ ಕಾವಲುಗಳನ್ನು ಡಿನೋಟಿಫೈ ಮಾಡಿ ಖಾಸಗಿಯವರಿಗೆ ನೀಡಿ ಜಾನುವಾರುಗಳಿಗೆ ಮೇವಿಲ್ಲದಂತೆ ಮಾಡಿದ್ದು ಏಕೆ?’ ಎಂದು ಸಿದ್ದರಾಮಯ್ಯ ಒತ್ತಾಯ ಮಾಡಿದ್ದಾರೆ.
ನಮ್ಮ ಸರಕಾರದ ಅವಧಿಯಲ್ಲಿ 30 ಕೆಜಿ ಚೀಲದ ಹಿಂಡಿಗೆ 400 ರೂ.ಬೆಲೆ ಇದ್ದದ್ದು ಈಗ 1,450 ರೂ. ಆಗಿದ್ದು ಏಕೆ? 450ರೂ.ಇದ್ದ ಬೂಸದ ಬೆಲೆ 1,400 ರೂ.ಗೆ ಏರಿಕೆಯಾಗಿದ್ದಕ್ಕೆ ಕಾರಣ ಏನು? 650ರೂ. ಇದ್ದ ಪಶು ಆಹಾರ 1,250ರೂ. ಆಗಲು ಯಾರು ಕಾರಣ?. ಜಾನುವಾರುಗಳಿಗೆ ಚರ್ಮಗಂಟು ಕಾಯಿಲೆ ಬಂದಿದೆ. ಇದರಿಂದಾಗಿ ಪ್ರತಿದಿನ ಸುಮಾರು 10 ಕೋಟಿ ರೂ.ಗಳಷ್ಟು ನಷ್ಟವನ್ನು ಹಾಲು ಕರೆಯುವ ರೈತರು ಅನುಭವಿಸುತ್ತಿದ್ದಾರೆ. ಆದರೂ ಬಿಜೆಪಿ ಸರಕಾರ ಯಾಕೆ ಪರಿಹಾರ ನೀಡಲಿಲ್ಲ?’ ಎಂದು ಅವರು ಕಿಡಿಕಾರಿದ್ದಾರೆ.
ರಾಜ್ಯ ಸರಕಾರ ನನಗೆ ನೀಡಿರುವ ಮಾಹಿತಿ ಪ್ರಕಾರ 157ಕ್ಕೂ ಹೆಚ್ಚು ಗೋಶಾಲೆಗಳು ರಾಜ್ಯದಲ್ಲಿವೆ. ಆದರೆ ಬಹುಪಾಲು ಗೋಶಾಲೆಗಳಲ್ಲಿ 10-20 ಗಂಡು ಕರುಗಳಿದ್ದರೆ 100-200 ಹಸುಗಳಿವೆ. ಹಾಗಿದ್ದರೆ ಹುಟ್ಟಿದ ಗಂಡು ಕರುಗಳೆಲ್ಲ ಎಲ್ಲಿ ಹೋದವು? ಸರಕಾರ ಈ ಗೋಶಾಲೆಗಳಿಗೆ ಕೋಟ್ಯಾಂತರ ರೂ.ಅನುದಾನ ನೀಡುತ್ತಿದೆ. ಆದರೆ, ಅಲ್ಲಿ ಹುಟ್ಟುವ ಕರುಗಳ, ಜಾನುವಾರುಗಳ ಆಡಿಟ್ ಮಾಡದೆ ಇರಲು ಕಾರಣ ಏನು?’ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
‘ಕೆಎಂಎಫ್ನಲ್ಲಿ ನೇಮಕಾತಿಗಳನ್ನು ಮಾಡಲು ರಾಜ್ಯ ಬಿಜೆಪಿ ಸರಕಾರ ಗುಜರಾತ್ ಮೂಲದ ಕಂಪೆನಿಗೆ ನೀಡಿರುವುದೇಕೆ? ಆ ಕಂಪೆನಿಗೆ ನೀಡುವಂತೆ ಒತ್ತಡ ಹೇರಿದ್ದು ಯಾರು?. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಪಶುಪಾಲಕರಿಗೆ ಏಕೆ ಯಾವ ಯೋಜನೆಯನ್ನೂ ನೀಡಲಿಲ್ಲ? ಹಿಂದೆ ಇದ್ದ ಯೋಜನೆಗಳನ್ನೂ ಮುಂದುವರೆಸುತ್ತಿಲ್ಲ. ಹಾಗಿದ್ದರೆ ಗೋವಿನ ಬಗ್ಗೆ ಅವುಗಳನ್ನು ಸಾಕುತ್ತಿರುವ ಶೇ.30ರಷ್ಟಿರುವ ರೈತರ ಬಗ್ಗೆ ನಿಮ್ಮ ಕಾಳಜಿ ಏನು? ಎಂಬ ಪ್ರಶ್ನೆಗಳಿಗೆ ಪ್ರಾಮಾಣಿಕವಾಗಿ ಉತ್ತರ ನೀಡಬೇಕು ಮತ್ತು ತಾವು ಬಾಯಿಮಾತಿನ ಗೋಪ್ರೇಮಿಗಳೆ ಹೊರತು ಪ್ರಾಮಾಣಿಕ ಕಾಳಜಿ ಇರುವವರಲ್ಲ ಎಂದು ಒಪ್ಪಿಕೊಳ್ಳಬೇಕು’
-ಸಿದ್ದರಾಮಯ್ಯ ವಿಪಕ್ಷ ನಾಯಕ







