ರಾಜ್ಯ ವಿಧಾನಸಭಾ ಚುನಾವಣೆ: ದ.ಕ.ಜಿಲ್ಲಾ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ
► ಐವರು ಹಾಲಿ ಶಾಸಕರಿಗೆ ಮತ್ತೆ ಟಿಕೆಟ್ ►ಇಬ್ಬರು ಮಹಿಳೆಯರ ಸಹಿತ ಮೂರು ಹೊಸ ಮುಖಕ್ಕೆ ಅವಕಾಶ

ಮಂಗಳೂರು, ಎ.11: ರಾಜ್ಯ ವಿಧಾನಸಭೆಗೆ ಮೇ 10ರಂದು ನಡೆಯುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಮಂಗಳವಾರ ಪ್ರಕಟಿಸಿದ್ದು, ದ.ಕ. ಜಿಲ್ಲೆಯ 8 ಕ್ಷೇತ್ರಗಳ ಪೈಕಿ ಹಾಲಿ ಐವರು ಶಾಸಕರಿಗೆ ಮತ್ತೆ ಟಿಕೆಟ್ ನೀಡಿವೆ. ಹಾಲಿ ಸಚಿವ ಎಸ್. ಅಂಗಾರ ಮತ್ತು ಶಾಸಕ ಸಂಜೀವ ಮಠಂದೂರು ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಅವರ ಬದಲು ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಿಸಿವೆ. ಈ ಇಬ್ಬರು ಮಹಿಳೆಯರ ಸಹಿತ ಮೂರು ಹೊಸ ಮುಖಗಳಿಗೆ ಪಕ್ಷ ಟಿಕೆಟ್ ನೀಡಿವೆ.
ಮಂಗಳೂರು: ಈ ಕ್ಷೇತ್ರಕ್ಕೆ ಬಿಲ್ಲವ ಸಮುದಾಯದ ಯುವ ನಾಯಕ ಸತೀಶ್ ಕುಂಪಲ ಅವರಿಗೆ ಟಿಕೆಟ್ ನೀಡಲಾಗಿದೆ. ದ.ಕ.ಜಿಲ್ಲಾ ಪಂಚಾಯತ್ನ ಮಾಜಿ ಉಪಾಧ್ಯಕ್ಷರಾಗಿದ್ದ ಇವರು 2018ರಲ್ಲೇ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅವರ ಬದಲು ಬಂಟ ಸಮುದಾಯದ ಸಂತೋಷ್ ಕುಮಾರ್ ಬೋಳಿಯಾರ್ಗೆ ಪಕ್ಷ ಟಿಕೆಟ್ ನೀಡಿತ್ತು. ಆದರೆ ಅವರು ಕಾಂಗ್ರೆಸ್ನ ಯು.ಟಿ.ಖಾದರ್ ಮುಂದೆ ಸೋಲನುಭವಿಸಿದ್ದರು. ಕಳೆದ ಬಾರಿ ಟಿಕೆಟ್ ಕೈ ತಪ್ಪಿದ್ದರೂ ಈ ಬಾರಿಯ ಟಿಕೆಟ್ಗಾಗಿ ತೆರೆಮರೆಯ ಪ್ರಯತ್ನ ಸಾಗಿಸಿದ್ದ ಸತೀಶ್ ಕುಂಪಲ ಪಕ್ಷದಲ್ಲೂ ಸಕ್ರಿಯರಾಗಿದ್ದರು. ಬಿಜೆಪಿ ದ.ಕ. ಜಿಲ್ಲಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು ಈ ಬಾರಿ ನಿರೀಕ್ಷೆಯಂತೆಯೇ ಟಿಕೆಟ್ ದಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಗಳೂರು ನಗರ ದಕ್ಷಿಣ: ಈ ಕ್ಷೇತ್ರಕ್ಕೆ ನಿರೀಕ್ಷೆಯಂತೆಯೇ ಹಾಲಿ ಶಾಸಕ ವೇದವ್ಯಾಸ ಕಾಮತ್ ಅವರಿಗೆ ಮತ್ತೆ ಟಿಕೆಟ್ ನೀಡಲಾಗಿದೆ. ಕುಂದಾಪುರದ ದಕ್ಕೇರಬಾಳು ಮೂಲದ ವೇದವ್ಯಾಸ್ ಕಾಮತ್ 2018ರಲ್ಲಿ ಕಾಂಗ್ರೆಸ್ನ ಜೆ.ಆರ್. ಲೋಬೊ ಅವರನ್ನು ಮಣಿಸಿ ಮೊದಲ ಬಾರಿ ವಿಧಾನ ಸಭೆ ಪ್ರವೇಶಿಸಿದ್ದರು. 46ರ ಹರೆಯದ ಕಾಮತ್ ಉದ್ಯಮಿಯಾಗಿದ್ದು, ಮಂಗಳೂರಿನ ಕೆನರಾ ವಿದ್ಯಾಸಂಸ್ಥೆಯಲ್ಲಿ ಪ್ರಾಥಮಿಕ ತರಗತಿಯಿಂದ ಪದವಿ ತನಕ ಶಿಕ್ಷಣ ಪಡೆದಿದ್ದರು. ಬಿಕಾಂ ಪದವೀಧರರಾದ ಕಾಮತ್ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಬಿಜೆಪಿಯಲ್ಲೂ ಗುರುತಿಸಿಕೊಂಡಿದ್ದರು. ಮಂಗಳೂರು ನಗರ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಶಾಸಕರಾದ ಬಳಿಕ ಗ್ರೀನ್ ಮಂಗಳೂರು, ಪ್ಲಾಸ್ಟಿಕ್ ಮುಕ್ತ ಮಂಗಳೂರು, ನೋ ವಾರ್ನ್ ಡೇ ಮುಂತಾದ ಹಲವು ಅಭಿಯಾನಗಳನ್ನು ಹಮ್ಮಿಕೊಂಡು ಸ್ವಚ್ಛ-ಸ್ವಸ್ಥ ಮಂಗಳೂರಿಗಾಗಿ ಶ್ರಮಿಸಿದ್ದರು.
ಮಂಗಳೂರು ನಗರ ಉತ್ತರ: ಈ ಕ್ಷೇತ್ರದಲ್ಲೂ ನಿರೀಕ್ಷೆಯಂತೆ ಹಾಲಿ ಶಾಸಕ ಡಾ.ಭರತ್ ಶೆಟ್ಟಿ ಅವರಿಗೆ ಮತ್ತೆ ಟಿಕೆಟ್ ನೀಡಲಾಗಿದೆ. ಜಾತ್ಯತೀತ ಜನತಾದಳದಲ್ಲಿದ್ದ ಭರತ್ ಶೆಟ್ಟಿ 2018ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಕಾಂಗ್ರೆಸ್ನ ಮೊಯ್ದಿನ್ ಬಾವಾ ಅವರನ್ನು ಸೋಲಿಸುವ ಮೂಲಕ ಮೊದಲ ಬಾರಿ ಶಾಸಕರಾಗಿ ಚುನಾಯಿತರಾಗಿದ್ದರು. ಈ ಬಾರಿಯ ಚುನಾವಣೆಯಲ್ಲೂ ಸ್ಪರ್ಧಿಸಲು ಮತ್ತೆ ಟಿಕೆಟ್ ಪಡೆದುಕೊಳ್ಳುವಲ್ಲಿ ಭರತ್ ಶೆಟ್ಟಿ ಯಶಸ್ವಿಯಾಗಿದ್ದಾರೆ.
ಬಂಟ್ವಾಳ: ಈ ಕ್ಷೇತ್ರದಲ್ಲೂ ಕೂಡ ಹಾಲಿ ಶಾಸಕ ರಾಜೇಶ್ ನಾಯಕ್ ಅವರಿಗೆ ಮತ್ತೆ ಟಿಕೆಟ್ ನೀಡಲಾಗಿದೆ. 2013ರಲ್ಲಿ ಮೊದಲ ಬಾರಿಗೆ ಟಿಕೆಟ್ ಪಡೆದುಕೊಂಡಿದ್ದ ರಾಜೇಶ್ ನಾಯಕ್ ಕಾಂಗ್ರೆಸ್ನ ರಮಾನಾಥ ರೈ ವಿರುದ್ಧ ಸೋತಿದ್ದರು. 2018ರ ಚುನಾವಣೆಯಲ್ಲಿ ಮತ್ತೆ ಟಿಕೆಟ್ ಪಡೆದುಕೊಂಡ ರಾಜೇಶ್ ನಾಯಕ್ ಅವರು ರಮಾನಾಥ ರೈ ಅವರನ್ನು ಮಣಿಸಿ ಮೊದಲ ಬಾರಿಗೆ ಶಾಸಕರಾಗಿ ಚುನಾಯಿತರಾಗಿದ್ದರು. ಈ ಬಾರಿಯ ಚುನಾವಣೆಯಲ್ಲಿ ರಮಾನಾಥ ರೈ ವಿರುದ್ಧ ಸ್ಪರ್ಧಿಸಲು ಮತ್ತೆ ಟಿಕೆಟ್ ದಕ್ಕಿಸಿಕೊಂಡಿದ್ದಾರೆ.
ಮೂಡುಬಿದಿರೆ: ಈ ಕ್ಷೇತ್ರಕ್ಕೆ ಹೊಸ ಅಭ್ಯರ್ಥಿಯನ್ನು ಪಕ್ಷ ಕಣಕ್ಕಿಳಿಸಲಾಗುತ್ತಿದೆ ಎಂಬ ಮಾತುಗಳು ಬಲವಾಗಿ ಕೇಳಿ ಬರುತ್ತಿತ್ತು. 2013ರ ಚುನಾವಣೆಯಲ್ಲಿ ಕಾಂಗ್ರೆಸ್ನ ಅಭಯಚಂದ್ರ ಜೈನ್ ವಿರುದ್ಧ ಸ್ಪರ್ಧಿಸಿದ್ದ ಉಮಾನಾಥ ಕೋಟ್ಯಾನ್ ಸೋಲುಂಡಿದ್ದರು. 2018ರ ಚುನಾವಣೆಯಲ್ಲಿ ಅಭಯಚಂದ್ರ ಜೈನ್ ಅವರನ್ನು ಸೋಲಿಸುವ ಮೂಲಕ ಮೊದಲ ಬಾರಿಗೆ ಶಾಸಕರಾಗಿದ್ದ ಉಮನಾಥ ಕೋಟ್ಯಾನ್ ವಿರುದ್ಧ ಇತ್ತೀಚಿನ ದಿನಗಳಲ್ಲಿ ಕ್ಷೇತ್ರದಾದ್ಯಂತ ಸಾಕಷ್ಟು ಆರೋಪಗಳು ಕೇಳಿ ಬಂದಿತ್ತು. ಹಾಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ವಿರುದ್ಧ ಸುದ್ದಿ, ಫೋಟೋ ಪ್ರಕಟಿಸಬಾರದು, ವೀಡಿಯೋಗಳನ್ನು ಪ್ರಸಾರ ಮಾಡಬಾರದು ಎಂದು ಉಮನಾಥ್ ಕೋಟ್ಯಾನ್ ಮಂಗಳೂರು ಜೆಎಂಎಫ್ಸಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು.
2014ರಲ್ಲಿ ಬಿಡುಗಡೆಯಾದ ‘ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ’ ಮತ್ತು 2015ರಲ್ಲಿ ತೆರೆಕಂಡ ‘ಎಕ್ಕಸಕ’ ತುಳು ಸಿನೆಮಾದಲ್ಲಿ ನಟಿಸಿದ್ದ ಉಮಾನಾಥ ಕೋಟ್ಯಾನ್ ರಾಜ್ಯ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದ ಉಮನಾಥ ಕೋಟ್ಯಾನ್ ಇದೀಗ ಮೂರನೇ ಬಾರಿಗೆ ಬಿಜೆಪಿಯಿಂದ ಟಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.







