ಚುನಾವಣೆ ಘೋಷಣೆಗೂ ಮುನ್ನ ಯಾವುದೇ ವಸ್ತುಗಳನ್ನು ವಶಪಡಿಸಿಕೊಳ್ಳುವಂತಿಲ್ಲ: ಹೈಕೋರ್ಟ್

ಬೆಂಗಳೂರು, ಎ.12: ಚುನಾವಣಾ ಅಧಿಕಾರಿಗಳಿಗೆ ಚುನಾವಣೆ ಘೋಷಣೆ ಬಳಿಕವಷ್ಟೇ ಶೋಧನೆ ಮಾಡುವ ಅಧಿಕಾರವಿರುತ್ತದೆ. ಅದಕ್ಕೂ ಮುನ್ನ ಶೋಧನೆ ಹಾಗೂ ವಸ್ತುಗಳ ಜಪ್ತಿ ಅಧಿಕಾರ ಇಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ. ಅಲ್ಲದೆ, ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತನ ಕಡೆಯಿಂದ ವಶಪಡಿಸಿಕೊಂಡಿದ್ದ ಅಕ್ಕಿಯ ಚೀಲಗಳನ್ನು ವಾಪಸ್ ನೀಡಬೇಕು ಎಂದು ಚುನಾವಣಾಧಿಕಾರಿಗಳಿಗೆ ಹೈಕೋರ್ಟ್ ಸೂಚನೆ ನೀಡಿದೆ.
ಶಿವಾಜಿನಗರದ ಇಷ್ತಿಯಾಕ್ ಅಹಮದ್ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ನ್ಯಾಯಪೀಠವು ಚುನಾವಣೆ ಘೋಷಣೆಗೂ ಮುನ್ನ ರಿಟನಿರ್ಂಗ್ ಅಧಿಕಾರಿ ಅಥವಾ ಚುನಾವಣಾ ಅಧಿಕಾರಿಗಳು ಶೋಧ ನಡೆಸುವ ಹಾಗೂ ವಸ್ತುಗಳನ್ನು ಜಪ್ತಿ ಮಾಡುವ ಅಧಿಕಾರ ಹೊಂದಿಲ್ಲ ಎಂದು ತೀರ್ಪು ನೀಡಿದೆ. ಯಾಕೆಂದರೆ ಅಧಿಕಾರಿಗಳನ್ನು ಚುನಾವಣೆ ನಡೆಸುವುದಕ್ಕಾಗಿಯೇ ನೇಮಕ ಮಾಡಲಾಗಿರುತ್ತದೆ. ಹೀಗಾಗಿ, ಚುನಾವಣೆಗೂ ಮುನ್ನ ಅವರು ಅಧಿಕಾರವನ್ನು ಬಳಸಲು ಆಗಲ್ಲ ಎಂದು ನ್ಯಾಯಪೀಠವು ತಿಳಿಸಿದೆ.
ಚುನಾವಣೆ ಘೋಷಣೆ ಬಳಿಕವಷ್ಟೇ ಸಂಪೂರ್ಣ ಚುನಾವಣೆ ಪ್ರಕ್ರಿಯೆ ಪ್ರಾರಂಭ ಆಗುತ್ತದೆ. ಸಾಮಾನ್ಯ ಸಂದರ್ಭಗಳಲ್ಲಿ ಅಗತ್ಯ ವಸ್ತುಗಳ ಕಾಯಿದೆ 1955ರ ಅಡಿಯಲ್ಲಿ ಅಧಿಕಾರಿಗಳು ವಸ್ತುಗಳನ್ನು ವಶಪಡಿಸಿಕೊಳ್ಳುತ್ತಾರೆ. ಆದರೆ, ಚುನಾವಣಾ ಅಧಿಕಾರಿಗಳು ಮತ್ತು ಪೊಲೀಸ್ ಇನ್ಸ್ ಪೆಕ್ಟರ್ ಅವರಿಗೆ ಶೋಧ ನಡೆಸುವ ಅಧಿಕಾರವನ್ನು ನೀಡಲಾಗಿರಲ್ಲ. ಅದಲ್ಲದೇ ಅವರ ಕ್ರಮ ಕೂಡ ಕಾನೂನುಬಾಹಿರವಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
25 ಕೆಜಿಯ ಅಕ್ಕಿ ಮೂಟೆಗಳು: 2023ರ ಮಾ.19ರಂದು ಶಿವಾಜಿನಗರದ ತಮ್ಮ ನಿವಾಸದಲ್ಲಿದ್ದ 25 ಕೆಜಿಯ 530 ಅಕ್ಕಿ ಮೂಟೆಗಳನ್ನು ಶಿವಾಜಿನಗರದ ರಿಟನಿರ್ಂಗ್ ಅಧಿಕಾರಿ ವಶಪಡಿಸಿಕೊಂಡ ಕಾರಣಕ್ಕೆ ಇಷ್ತಿಯಾಕ್ ಅಹಮದ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ನೋಟಿಸ್ ನೀಡಿದ್ದರು ಕೂಡ ಅಕ್ಕಿ ಮೂಟೆಗಳನ್ನು ರಿಟನಿರ್ಂಗ್ ಅಧಿಕಾರಿ ಅಹಮದ್ ಅವರಿಗೆ ವಾಪಸ್ ನೀಡಿದ್ದಿಲ್ಲ.
ಸಾಮಾಜಿಕ ಕಾರ್ಯಕರ್ತ ಎಂದಿದ್ದ ಇಷ್ತಿಯಾಕ್ ಅಹಮದ್: ನಾನೊಬ್ಬ ಸಾಮಾಜಿಕ ಕಾರ್ಯಕರ್ತನಾಗಿದ್ದು, ಹಬ್ಬದ ಸಂದರ್ಭಗಳಲ್ಲಿ ಅಗತ್ಯ ಇರುವವರಿಗೆ ಅಕ್ಕಿ ನೀಡಲು ಮುಂದಾಗಿದ್ದೆ. ಅದನ್ನು ಚುನಾವಣಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಅಹಮದ್ ನ್ಯಾಯಾಲಯಕ್ಕೆ ಹೇಳಿದ್ದ. ಚುನಾವಣಾ ಸಂದರ್ಭದಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸುವುದಿಲ್ಲ ಎಂದು ಬಾಂಡ್ ಸಲ್ಲಿಸುವಂತೆ ಇಷ್ತಿಯಾಕ್ ಅಹಮದ್ ಅವರಿಗೆ ಕೋರ್ಟ್ ಸೂಚಿಸಿದೆ.
ಚುನಾವಣೆ ಘೋಷಣೆಗೂ ಮುನ್ನ ಯಾವುದೇ ವಸ್ತುಗಳನ್ನು ವಶಪಡಿಸಿಕೊಳ್ಳುವಂತಿಲ್ಲ. ಆದರೆ, ಈಗ ಚುನಾವಣೆ ಘೋಷಣೆ ಆಗಿರುವುರಿಂದ ಅರ್ಜಿದಾರರು ದಾಸ್ತಾನು ಬಿಡುಗಡೆಯಾದ ಬಳಿಕ ವಿತರಣೆ ಮಾಡಬಾರದು ಎಂದು ಹೇಳಿದೆ. ಇದಕ್ಕೆ ಅರ್ಜಿದಾರರಿಗೆ ಪರಿಹಾರ ನೀಡುವಂತೆ ನ್ಯಾಯಾಲಯ ಚುನಾವಣಾ ಅಧಿಕಾರಿಗಳಿಗೆ ಸೂಚಿಸಿದೆ. ವಶಪಡಿಸಿಕೊಂಡ ಅಕ್ಕಿ ಮೂಟೆಗಳನ್ನು ಅರ್ಜಿದಾರರ ವಶಕ್ಕೆ ತಕ್ಷಣವೇ ಬಿಡುಗಡೆ ಮಾಡುವಂತೆ ಪ್ರತಿವಾದಿಗಳಿಗೆ ಆದೇಶವನ್ನು ಕೋರ್ಟ್ ನೀಡಿದ್ದು, ಷರತ್ತುಗಳನ್ನು ಪಾಲಿಸುವಂತೆ ಸೂಚಿಸಿದೆ.







