ಮಂಗಳೂರು: ಎಂಸಿಸಿ ಬ್ಯಾಂಕ್ ಐದು ಜಿಲ್ಲೆಗಳಿಗೆ ವಿಸ್ತರಣೆ; ರೂ.12.20 ಕೋಟಿ ಲಾಭ ಗಳಿಕೆ

ಮಂಗಳೂರು,ಎ.12; ಕರ್ನಾಟಕದ ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ 111 ವರ್ಷಗಳ ಇತಿಹಾಸವಿರುವ ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಂಸಿಸಿ ಬ್ಯಾಂಕ್ ಲಿಮಿಟೆಡ್ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿಲ್ಲ. ತನ್ನ ಕಾರ್ಯ ಕ್ಷೇತ್ರವನ್ನು ಐದು ಜಿಲ್ಲೆಗಳಿಗೆ ವಿಸ್ತರಿಸಿ ಮಹತ್ವದ ಸಾಧನೆಯನ್ನು ಮಾಡಿದೆ. ಶೀಘ್ರದಲ್ಲೇ ಈ ಜಿಲ್ಲೆಗಳಲ್ಲಿ ಬ್ಯಾಂಕಿನ ಶಾಖೆಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಬ್ಯಾಂಕ್ ಅಧ್ಯಕ್ಷರಾದ ಅನಿಲ್ ಲೋಬೊ ತಿಳಿಸಿದ್ದಾರೆ.
ವಿತ್ತೀಯ ವರ್ಷದಲ್ಲಿ 12.20 ಕೋಟಿ ರೂಪಾಯಿ ಲಾಭ ಗಳಿಸಿದ್ದು ಇತ್ತೀಚಿನ ವರ್ಷಗಳಲ್ಲಿ ಪ್ರಪ್ರಥಮ ಬಾರಿಗೆ 1.37 ಎನ್ ಪಿಎ ದಾಖಲಿಸಿದೆ ಎಂದು ಅವರು ಹೇಳಿದ್ದಾರೆ.
ಬುಧವಾರ ಬ್ಯಾಂಕಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಡಳಿತ ಮಂಡಳಿ, ಆಧಿಕಾರಿ ವರ್ಗ ಮತ್ತು ಸಿಬ್ಬಂದಿಯ ಶ್ರಮದಿಂದ ಈ ಸಾಧನೆ ಸಾಧ್ಯವಾಗಿದೆ. ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಹೀಗೆ ಐದು ಜಿಲ್ಲೆಗಳಿಗೆ ವಿಸ್ತರಿಸಿದೆ. ಶೀಘ್ರದಲ್ಲೇ ಈ ಜಿಲ್ಲೆಗಳಲ್ಲಿ ಬ್ಯಾಂಕಿನ ಶಾಖೆಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗುವುದು ಎಂದರು.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 16 ಶಾಖೆಗಳನ್ನು ಬ್ಯಾಂಕ್ ಹೊಂದಿದ್ದು ವಿತ್ತೀಯ ವರ್ಷದಲ್ಲಿ ಗಣನೀಯ ಪ್ರಮಾಣದಲ್ಲಿ ವ್ಯವಹಾರದಲ್ಲಿ ಪ್ರಗತಿಯನ್ನು ದಾಖಲಿಸಿದ್ದು, ಬ್ಯಾಂಕಿನ ನಿವ್ವಳ ಮೌಲ್ಯ 46 ಕೋಟಿಯಿಂದ 59 ಕೋಟಿಗೆ ತಲುಪಿದ್ದು ಬ್ಯಾಂಕಿನ ಆರ್ಥಿಕ ವ್ಯವಹಾರ ರೂ. 933.21 ಕೋಟಿ ತಲುಪಿದೆ. ಬ್ಯಾಂಕಿನ ಇತಿಹಾಸದಲ್ಲೇ ವಿತ್ತೀಯ ವರ್ಷದಲ್ಲಿ ಮೊದಲ ಬಾರಿಗೆ ಸ್ಥಾಪಕರ ದಿನವನ್ನು ಆಚರಿಸುವ ಜೊತೆಗೆ, ನವೀಕೃತ ಸಭಾಭವನಕ್ಕೆ ಸ್ಥಾಪಕರ ಹೆಸರು ಇಡಲಾಗಿದೆ. 16 ಶಾಖೆಗಳಲ್ಲಿ ಗ್ರಾಹಕರ ಸಮಾವೇಶಗಳನ್ನು ಏರ್ಪಡಿಸಿ, ಬ್ಯಾಂಕಿನ ಸೇವೆಯ ಬಗ್ಗೆ ಗ್ರಾಹಕರ ಸಲಹೆ, ಸೂಚನೆಗಳನ್ನು ಸ್ವೀಕರಿಸಿ, ಶಾಖಾವಾರು ಅನುಷ್ಠಾನಗೊಳಿಸಲಾಗಿದೆ. ಇದರಿಂದ ಬ್ಯಾಂಕಿನಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ ಎಂದರು.
ಬ್ಯಾಂಕಿನ ಶತಮಾನ ಮತ್ತು ದಶಮಾನ ಕಾರ್ಯಕ್ರಮವನ್ನು ಸಮಾಜದ ಆಶಕ್ತ ವರ್ಗದ ಜನರ ಚಿಕಿತ್ಸೆ, ವಸತಿ ನಿವೇಶನ ದುರಸ್ತಿಗೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ಹೆಣ್ಮಕ್ಕಳ ವಿವಾಹಕ್ಕೆ ನೆರವು ನೀಡುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಗಿದೆ. ಸಾಕಷ್ಟು ಅನಿವಾಸಿ ಭಾರತೀಯರು ಬ್ಯಾಂಕಿನಲ್ಲಿ ವ್ಯವಹಾರ ಮತ್ತು ಹೂಡಿಕೆಯನ್ನು ಮಾಡಿ ಬೆಂಬಲಿಸುತ್ತಿದ್ದಾರೆ ಎಂದವರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ಜೆರಾಲ್ಡ್ ಜೂಡ್ ಡಿ'ಸಿಲ್ವ, ಮಹಾ ಪ್ರಬಂಧರಾದ ಸುನಿಲ್ ಮಿನೇಜಸ್, ಸದಸ್ಯರಾದ ಆಂಡ್ರೂ ಡಿ'ಸೋಜ, ಡಾ.ಜೆರಾಲ್ಡ್ ಪಿಂಟೊ, ಅನಿಲ್ ಪತ್ರಾವೋ, ಜೆ.ಪಿ.ರೊಡ್ರಿಗಸ್, ಡೇವಿಡ್ ಡಿ'ಸೋಜ, ಎಲ್ರೋಯ್ ಕಿರಣ್ ಕ್ರಾಸ್ಟೋ, ಹೆರಾಲ್ಡ್ ಮೊಂತರೊ, ರೋಶನ್ ಡಿ'ಸೋಜ, ಮಾರ್ಸೆಲ್ ಡಿ'ಸೋಜ, ಸಿ.ಜಿ.ಪಿಂಟೋ, ಸುಶಾಂತ್ ಸಲ್ದಾನ, ಐರಿನ್ ರೆಬೆಲ್ಲೋ, ಡಾ.ಫ್ರೀಡಾ ಡಿಸೋಜ, ಆಲ್ವಿನ್ ಪಿ.ಮೊ.ಮೊಂತೆರೋ, ಫೆಲಿಕ್ಸ್ ಡಿ'ಕ್ರೂಜ್ ಮತ್ತು ಶರ್ಮಿಳಾ ಮಿನೇಜಸ್ ಉಪಸ್ಥಿತರಿದ್ದರು.







