ಸಂಘಪರಿವಾರದ ಹಿಡನ್ ಅಜೆಂಡಾ ಸಾರ್ವಜನಿಕಗೊಳಿಸಲು ಶಿಕ್ಷಣ ಕ್ಷೇತ್ರದಲ್ಲಿ ಕುತಂತ್ರ: ಡಾ.ಎಲ್.ಹನುಮಂತಯ್ಯ

ಬೆಂಗಳೂರು, ಎ.12: ಬಿಜೆಪಿಯು ಸಂಘಪರಿವಾರದ ಹಿಡನ್ ಅಜೆಂಡಾವನ್ನು ಸಾರ್ವಜನಿಕ ಅಜೆಂಡವನ್ನಾಗಿ ಮಾಡಲು ಶಿಕ್ಷಣ ಕ್ಷೇತ್ರವನ್ನು ಆರಿಸಿದೆ ಎಂದು ರಾಜ್ಯಸಭಾ ಸದಸ್ಯ ಡಾ.ಎಲ್. ಹನುಮಂತಯ್ಯ ಆರೋಪಿಸಿದ್ದಾರೆ.
ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ‘ಮುಕ್ತವಾಗಿ ಆಲೋಚನೆ ಮಾಡುವಂತೆ ಮಾಡಬೇಕಾದ ಶಿಕ್ಷಣ ವ್ಯವಸ್ಥೆ ಪಕ್ಷಪಾತ ಧೋರಣೆಯಿಂದ ನಮ್ಮ ಚರಿತ್ರೆ, ಭವಿಷ್ಯವನ್ನು ನೋಡಬೇಕಾದ ಪರಿಸ್ಥಿತಿ ನಿರ್ಮಾಣ ಮಾಡಲಾಗುತ್ತಿದೆ. ದೇಶದ ಶಿಕ್ಷಣ ಹಾಗೂ ಪಠ್ಯವನ್ನು ನಿಯಂತ್ರಿಸುವ ಎನ್ಸಿಆರ್ಟಿ ಸಂಸ್ಥೆ ಪಠ್ಯ ಪರಿಷ್ಕರಣೆ ಮಾಡಿದ್ದು, ಇದು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಅದರಲ್ಲೂ ರಾಜ್ಯಶಾಸ್ತ್ರ ಹಾಗೂ ಇತಿಹಾಸ ಪಠ್ಯದಲ್ಲಿ ಸತ್ಯ ಮರೆಮಾಚಲಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
12ನೇ ತರಗತಿ ರಾಜ್ಯಶಾಸ್ತ್ರ ಪಠ್ಯದಲ್ಲಿ ಸ್ವಾತಂತ್ರ್ಯ ಭಾರತದಲ್ಲಿ ಭಾರತದ ರಾಜಕೀಯ ಎಂಬ ಪಾಠವಿದ್ದು, ಅದರಲ್ಲಿ ಹಿಂದೂ ಮೂಲಭೂತವಾದಿಗಳು ಮಹಾತ್ಮಗಾಂಧಿ ಅವರನ್ನು ಹೇಗೆ ವಿರೋಧಿಸುತ್ತಿದ್ದರು, ಗಾಂಧಿ ಅವರನ್ನು ಈ ಹಿಂದೂ ಮೂಲಭೂತವಾದಿಗಳು ಕೊಂದರು ಎಂಬ ಅಂಶವನ್ನು ಸೇರಿಸಬಾರದು ಎಂಬ ತೀರ್ಮಾನ ಮಾಡಲಾಗಿದೆ. ಎನ್ಸಿಆರ್ಟಿ ಸಂಸ್ಥೆಯ ನಿರ್ದೇಶಕ ಸಿ.ಪಿ ಸೆಕ್ಲಾನಿ ಎಂಬುವವರು ಪಠ್ಯ ಪರಿಷ್ಕರಣೆ ಮಾಡಲಾಗಿದೆ ಎಂದಿದ್ದಾರೆ. ಆಯಾ ಕ್ಷೇತ್ರಗಳ ಪರಿಣಿತರಿಂದ ಈ ಪರಿಷ್ಕರಣೆ ಮಾಡಿಸಲಾಗಿದೆ ಎಂದು ಹೇಳಿದ್ದಾರೆ. ಆದರೆ ಈ ಪರಿಣಿತರು ಯಾರು ಎಂದು ಬಹಿರಂಗಪಡಿಸಿಲ್ಲ. ಈ ಪರಿಣಿತರು ಯಾರು ಎಂದು ಈ ದೇಶದ ಜನರ ಮುಂದೆ ಇಡಬೇಕು ಎಂದು ಎಲ್.ಹನುಮಂತಯ್ಯ ಒತ್ತಾಯಿಸಿದರು.
ರಾಜ್ಯದಲ್ಲಿ ಪಠ್ಯ ಪರಿಷ್ಕರಣ ಸಮಿತಿ ಅಧ್ಯಕ್ಷರನ್ನಾಗಿ ರೋಹಿತ್ ಚಕ್ರತೀರ್ಥ ಅವರನ್ನು ನೇಮಿಸಿ ಅವರು ಮಾಡಿದ ಅವಾಂತರದಿಂದ ಸರಕಾರ ಪಠ್ಯ ಪುಸ್ತಕ ವಾಪಸ್ ಪಡೆಯುವಂತಹ ಪರಿಸ್ಥಿತಿ ಬಂದಿತ್ತು. ಈಗ ಇದೇ ಅವಾಂತರವನ್ನು ರಾಷ್ಟ್ರೀಯ ಮಟ್ಟದಲ್ಲಿ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗಾಂಧಿ ಕುರಿತ ಪಠ್ಯದಲ್ಲಿ ನಾಥುರಾಮ್ ಗೋಡ್ಸೆ ಬ್ರಾಹ್ಮಣ ಎಂಬ ಅಂಶ ತೆಗೆದು ಹಾಕಿದ್ದಾರೆ. ಗೋಡ್ಸೆ ಅವರನ್ನು ಹಿಂದೂ ಮೂಲಭೂತವಾದಿ ಪತ್ರಿಕೆಯ ಸಂಪಾದಕರು ಎಂದು ಬರೆಯಲಾಗಿದೆ. ಆ ಮೂಲಕ ಆತ ಯಾವ ಗುಂಪಿಗೆ ಸೇರಿದವನು ಎಂಬ ಅಂಶ ಮರೆಮಾಚುವ ಪ್ರಯತ್ನ ನಡೆದಿದೆ. ಇನ್ನು ಇತಿಹಾಸದ ವಿಷಯದ ಪಠ್ಯದಲ್ಲಿ 16-17ನೇ ಶತಮಾನದ ಚರಿತ್ರೆಯಲ್ಲಿ ಮೊಘಲ ಸಾಮ್ರಾಜ್ಯದ ಭಾಗವನ್ನು ತೆಗೆದುಹಾಕಿದ್ದಾರೆ. ಮೋಘಲರ ಚರಿತ್ರೆ ಅಧ್ಯಯನ ಮಾಡದೇ ನಮ್ಮ ಮಕ್ಕಳು ಭಾರತೀಯ ಇತಿಹಾಸ ಓದಲು ಸಾಧ್ಯವೇ ಎಂದು ಎಲ್.ಹನುಮಂತಯ್ಯ ಪ್ರಶ್ನಿಸಿದರು.
ಮೊದಲ ಪಿಯುಸಿಯ ಪಠ್ಯದಲ್ಲಿ ಬಡತನ ಹಾಗೂ ಮೂಲಸೌಕರ್ಯ ಕುರಿತ ಪಠ್ಯವನ್ನು ತೆಗೆದುಹಾಕಲಾಗಿದೆ. ಬಡತನವನ್ನು ಹಾಗೂ ಬಡವರ ಬಗ್ಗೆ ಮಾಹಿತಿ ನೀಡದಿರುವುದು ಜನವಿರೋಧಿ ಚಿಂತನೆ. ಭಾರತದಲ್ಲಿ ಮೂಲಭೂತ ಸೌಕರ್ಯ ವಂಚಿತರಾಗಿರುವ ಕೋಟ್ಯಂತರ ಜನರಿದ್ದು, ಅವರ ಕುರಿತ ಅಂಶವನ್ನು ಪಠ್ಯದಿಂದ ತೆಗೆದಿರುವುದು ಅವರಿಗೆ ಮಾಡುವ ಅಪಮಾನ. ಆ ಮೂಲಕ ಬಿಜೆಪಿ ಹುಸಿ ಭಾರತ ನಿರ್ಮಾಣ ಮಾಡುವ ಪ್ರಯತ್ನ ಮಾಡುತ್ತಿದೆ ಎಂದು ಎಲ್.ಹನುಮಂತಯ್ಯ ಟೀಕಿಸಿದರು.
ಅದಾನಿ, ಅಂಬಾನಿಗೆ ಅಮೃತಕಾಲ: ‘ಮೋದಿ ಚುನಾವಣೆ ಎದುರಿಸುವಾಗ ಭಾರತ ಪ್ರಕಾಶಿಸುತ್ತಿದೆ ಎಂದಿದ್ದು, ಯಾವ ಕ್ಷೇತ್ರದಲ್ಲಿ ಎಂದು ಜನರು ಪ್ರಶ್ನಿಸಿದ ನಂತರ ಸುಮ್ಮನಾದರು. ಈಗ ಭಾರತ ಅಮೃತಕಾಲದಲ್ಲಿದೆ ಎಂದು ಹೇಳುತ್ತಿದ್ದಾರೆ. ಈ ಅಮೃತಕಾಲ ಮೋದಿ, ನಿರ್ಮಲಾ ಸೀತರಾಮನ್, ಅಮಿತ್ ಶಾ ಅಥವಾ ಅವರ ಫಲಾನುಭವಿ ಅದಾನಿ ಹಾಗೂ ಅಂಬಾನಿ ಅವರಿಗೆ ಬಂದಿರಬಹುದು. ಆದರೆ ಭಾರತದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಶೇ.24ರಷ್ಟು ಜನರಿಗೆ ಇನ್ನು ಅಮೃತಕಾಲ ಬಂದಿಲ್ಲ.
-ಡಾ.ಎಲ್.ಹನುಮಂತಯ್ಯ, ರಾಜ್ಯಸಭಾ ಸದಸ್ಯ







