ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ

ಬೆಳ್ತಂಗಡಿ: ಟಿಕೇಟು ಹಂಚಿಕೆಯ ಬಳಿಕ ಅಸಮಾಧಾನಗೊಂಡ ಎಲ್ಲರ ಬಳಿ ಮಾತನಾಡುತ್ತಿದ್ದೇನೆ. ಪಕ್ಷ ಅವರೆಲ್ಲರನ್ನೂ ಗೌರವದಿಂದ ನಡೆಸಿಕೊಂಡಿದೆ, ಶಾಸಕರಾಗಿ ಮಾಡಿದೆ. ಅವರ ರಾಜಕೀಯ ಭವಿಷ್ಯವನ್ನ ಗೌರವ ಪೂರ್ವಕವಾಗಿ ಇರುವ ಹಾಗೆ ನಾನು ನೋಡಿಕೊಳ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಬುಧವಾರ ಆಗಮಿಸಿದ ಅವರು ದೇವರ ದರ್ಶನದ ಬಳಿಕ ಮಾಧ್ಯಮ ದವರನ್ನುದ್ದೇಶಿಸಿ ಮಾತನಾಡಿದರು. ಸವದಿ ಅವರಿಗೆ ನನ್ನ ಜೊತೆ ಮತ್ತು ಪಕ್ಷದ ಜೊತೆಗೆ ಭಾವನಾತ್ಮಕ ಸಂಬಂಧ ಇದೆ. ಸ್ವಲ್ಪ ಕೋಪದಲ್ಲಿ ಕೆಲ ವಿಷಯ ಹೇಳಿದ್ದಾರೆ, ಅದೆಲ್ಲವನ್ನೂ ಮಾತನಾಡಿ ಬಗೆ ಹರಿಸುತ್ತೇನೆ. ಸುಳ್ಯದ ಅಂಗಾರ ಬಹಳ ಜೆಂಟಲ್ ಮೆನ್ ರಾಜಕಾರಣಿ, ನಾನು ಅವರ ಜೊತೆಗೂ ಮಾತನಾಡ್ತೇನೆ, ಈಶ್ವರಪ್ಪ ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ, ಆದರೆ ಅವರು ರಾಜಕೀಯದಲ್ಲಿ ಇರ್ತಾರೆ. ಅವರ ಜೊತೆಗೆ ವರಿಷ್ಠರು ಈಗಾಗಲೇ ಮಾತನಾಡಿದ್ದಾರೆ. ಅವರ ಭಾವನೆಯನ್ನು ಗೌರವಿಸುತ್ತೇವೆ ಚುನಾವಣಾ ಸಂದರ್ಭದಲ್ಲಿ ಇದೆಲ್ಲ ಸಾಮಾನ್ಯ ವಿಚಾರಗಳು ಪಕ್ಷ ಎಲ್ಲವನ್ನೂ ಪರಿಹರಿಸಿಕೊಂಡು ಹೋಗುತ್ತದೆ ಎಂದರು.
ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ನಾಳೆ ಅಥವಾ ನಾಡಿದ್ದು ಬಿಡುಗಡೆ ಗೊಳಿಸಲಿದ್ದೇವೆ ಎಂದು ಅವರು ತಿಳಿಸಿದರು. ಬಿಜೆಪಿಯವರು ವಿನಯ್ ಕುಲಕರ್ಣಿಯನ್ನು ಯಾವತ್ತೂ ಟಾರ್ಗೆಟ್ ಮಾಡಿಲ್ಲ. ಅದೆಲ್ಲ ಬರೇ ಪ್ರಚಾರ ಮಾತ್ರ ಎದುರಾಳಿ ಯಾರು ಅನ್ನೋದು ನನಗೂ ಮುಖ್ಯ, ನನ್ನ ಜನ ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ.
ಎದುರಾಳಿ ಯಾರೇ ಇದ್ದರೂ ನನಗೆ ಚುನಾವಣೆ ಎದುರಿಸೋದು ಗೊತ್ತಿದೆ ಎಂದರು.
ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯಕ್ಕೆ, ಸೋಮೇಶ್ವರಕ್ಕೆ ನಾನು ಅವಾಗಾವಾಗ ಭೇಟಿ ಕೊಡುತ್ತೇನೆ. ಇದರಲ್ಲಿ ಅನ್ಯ ಇದ್ದೇಶವಿಲ್ಲ. ಇದೀಗ ಚುನಾವಣೆ ಹಿನ್ನೆಲೆಯಲ್ಲಿ ಮತ್ತೆ ಬಂದು ಮಂಜುನಾಥನ ದರ್ಶನ ಪಡೆದಿದ್ದೇನೆ. ಸಮಸ್ತ ಕನ್ನಡ ನಾಡಿನ ಸುಭೀಕ್ಷೆಗಾಗಿ ಪ್ರಾರ್ಥನೆ ಮಾಡಿದ್ದೇನೆ, ಸತ್ಯಕ್ಕೆ ಜಯವಾಗಲಿ ಎಂದರು.
ಈ ಸಂದರ್ಭ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್ ಹಾಗೂ ಮುಖಂಡರು ಉಪಸ್ಥಿತರಿದ್ದರು.