ದೇವರನ್ನು ನೋಡಲೂ ಬಿಡದೆ ದಲಿತರಿಗೆ ತಾರತಮ್ಯ ಸೃಷ್ಠಿ: ಜಯನ್ ಮಲ್ಪೆ

ಮಲ್ಪೆ : ಸಾಂವಿಧಾನಿಕ ಮೌಲ್ಯಗಳಾದ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭಾತೃತ್ವಗಳನ್ನು ನಾವು ಗೌರವಿಸಿದರೂ, ಹಿಂದೂ ಧರ್ಮದಲ್ಲಿ ಮಾತ್ರ ದಲಿತರಿಗೆ ಕುಡಿಯಲೂ ನೀರು ಕೊಡದೆ, ದೇವರನ್ನೂ ನೋಡಲು ಬಿಡದೆ ತಾರತಮ್ಯ ಸೃಷ್ಠಿಸಲಾಗಿದೆ ಎಂದು ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ.
ಅಂಬೇಡ್ಕರ್ ಯುವಸೇನೆ ವತಿಯಿಂದ ಇಂದು ಮಲ್ಪೆ ಸರಸ್ವತಿ ಬಯಲು ರಂಗಮಂದಿರದಲ್ಲಿ ಆಯೋಜಿಸಲಾದ ಡಾ.ಬಾಬಾ ಸಾಹೇಬ ಅಂಬೇಡ್ಕರ್ರವರ ಜನ್ಮ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ದಲಿತರನ್ನು ವಿದ್ಯಾವಂತರಾಗುವುದನ್ನು ನಿಷೇಧಿಸಿದ, ದಲಿತರ ಭೌತಿಕ ಸುಖ ಗಳನ್ನೆಲ್ಲಾ ಸರ್ವನಾಶ ಮಾಡಿದ ಧರ್ಮದಲ್ಲಿ ದಲಿತರು ಇರಬೇಕೇ ಎಂದು ಪ್ರಶ್ನಿಸಿದ ಜಯನ್ ಮಲ್ಪೆ, ಸಹ ಮಾನವರ ಬಗ್ಗೆ ಪ್ರೇಮ, ಕನಿಕರ ತೋರಿಸದೆ, ಪ್ರಾಣಿಗಳನ್ನು ಕೊಂದರೆ ಪಾಪ ಎಂದು ತನ್ನ ಅನುಯಾಯಿಗಳಿಗೆ ತಿಳಿಸುತ್ತ, ದಲಿತರನ್ನು ಮಾತ್ರ ಕ್ರೂರವಾಗಿ ಹಿಂಸಿಸುವುದನ್ನು ನಿಜವಾಗಿಯೂ ಧರ್ಮ ಎಂದು ಹೇಳಲು ಸಾಧ್ಯ ಎಂದರು.
ಅಂಬೇಡ್ಕರ್ ಯುವಸೇನೆಯ ಜಿಲ್ಯಾಧ್ಯಕ್ಷ ಹರೀಶ್ ಸಾಲ್ಯಾನ್ ಮಾತನಾಡಿ ಅಂಬೇಡ್ಕರ್ ಶೋಷಿತ ಲೋಕದ ಧ್ವನಿಯಾಗಿ ಪ್ರತಿನಿಧಿಸಿದ್ದಾರೆ ಅವರ ತತ್ವ ಸಿದ್ಧಾಂತವನ್ನು ಇಂದು ದಲಿತ ಸಮಾಜ ಮರೆತಿರುವುದು ನಿಜಕ್ಕೂ ನೋವಾಗುತ್ತಿದೆ. ಕೇವಲ ಮೀಸಲಾತಿಯ ಲಾಭ ಪಡೆದು ಧಾರ್ಮಿಕ ಕ್ಷೇತ್ರ ಸುತ್ತುವ ಬದಲು ದಲಿತರ ಶೈಕ್ಷಣಿಕ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ವಿಶ್ವಾಸ, ಶಿಕ್ಷಕ ಶಂಕರ್, ಹಿರಿಯ ದಲಿತ ಮುಖಂಡ ಗಣೇಶ್ ನೆರ್ಗಿ, ಎನ್.ಎ. ನೇಜಾರು, ದಯಾಕರ್ ಮಲ್ಪೆ ಮಾಧವ ಕರ್ಕೇರ ಪಾಳೇಕಟ್ಟೆ ಮಾತನಾಡಿ ದರು.
ದಲಿತ ನಾಯಕರಾದ ಸಂತೋಷ ಗುಜ್ಜರಬೆಟ್ಟು, ರವಿರಾಜ್ ಲಕ್ಷೀನಗರ, ಸಂತೋಷ್ ಕಪ್ಪಟ್ಟು, ಅಶೋಕ್ ಪುತ್ತೂರು, ಪ್ರಶಾಂತ್ ಬಿ.ಎನ್., ದಿಲೀಪ್ ಕೊಡವೂರು, ಸುಕೇಶ್ ಪುತ್ತೂರು, ಅನಿಲ್ ಕದ್ಕೆ, ಸುರೇಶ್ ಚಿಟ್ಪಾಡಿ, ಈಶ್ವರ್ ಗದಗ, ನವೀನ್ ಬನ್ನಂಜೆ, ಸುಶೀಲ್ ಕೊಡವೂರು, ಪುನೀತ್ ಕದಿಕೆ, ಅರುಣ್ ಸಾಲ್ಯಾನ್, ನಿತಿನ್ ಕದ್ಕೆ, ಶಶಿಕಲಾ ತೊಟ್ಟಂ, ಸಂಧ್ಯಾಕೃಷ್ಣ ಶ್ರೀಯಾನ್, ವಿನೋದ ಜಯರಾಜ್, ಸಂಕಿ ತೊಟ್ಟಂ, ಕಲಾವತಿ ತೊಟ್ಟಂ ಉಪಸ್ಥಿತರಿದ್ದರು. ಭಗವಾನ್ ಮಲ್ಪೆ ಸ್ವಾಗತಿಸಿದರು. ಪ್ರಸಾದ್ ನೆರ್ಗಿ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.







