3ನೇ ಪಟ್ಟಿಗೆ ಎಷ್ಟು ಕಾಯೋದು, ಎಲ್ಲದಕ್ಕೂ ಒಂದು ಮಿತಿ ಇರುತ್ತೆ: ಬಿಜೆಪಿ ವರಿಷ್ಠರಿಗೆ ಗಡುವು ನೀಡಿದ ಶೆಟ್ಟರ್
ಹು-ಧಾ ಪಾಲಿಕೆಯ 16 ಮಂದಿ ಸದಸ್ಯರು ಸೇರಿ ಬಿಜೆಪಿ ಪದಾಧಿಕಾರಿಗಳ ರಾಜೀನಾಮೆ

ಹುಬ್ಬಳ್ಳಿ, ಎ.14: ಬಿಜೆಪಿ ಅಭ್ಯರ್ಥಿಗಳ ಮೂರನೇ ಪಟ್ಟಿಗೆ ಎಷ್ಟು ಕಾಯೋದು, ಎಲ್ಲದಕ್ಕೂ ಒಂದು ಮಿತಿ ಇರುತ್ತೆ. ನಾಳೆ(ಶನಿವಾರ) ಬೆಳಗ್ಗೆ 11 ಗಂಟೆಯ ವರೆಗೆ ಕಾಯುತ್ತೇನೆ. ಟಿಕೆಟ್ ಘೋಷಿಸದಿದ್ದರೆ ಮುಂದಿನ ನಡೆ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಬಿಜೆಪಿ ವರಿಷ್ಠರಿಗೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಗಡುವು ವಿಧಿಸಿದ್ದಾರೆ.
ಶುಕ್ರವಾರ ನಗರದಲ್ಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಟಿಕೆಟ್ ಘೋಷಣೆಗೆ ವಿಳಂಬ ಮಾಡುತ್ತಿರುವುದು ನಿಮಗೆ ಮಾತ್ರ ಮಾಡುತ್ತಿರುವ ಅಪಮಾನ ಅಲ್ಲ, ನಮಗೂ ಮಾಡುತ್ತಿರುವ ಅಪಮಾನ ಎಂದು ಬೆಂಬಲಿಗರು ಹೇಳುತ್ತಿದ್ದಾರೆ ಎಂದರು.
ಕಾಡಿ, ಬೇಡಿಕೆ ಟಿಕೆಟ್ ಪಡೆಯುವುದಿಲ್ಲ. ವರಿಷ್ಠರು ಆಹ್ವಾನ ನೀಡಿದಕ್ಕಾಗಿ ದಿಲ್ಲಿಗೆ ಹೋಗಿದ್ದೆ. ನನ್ನನ್ನು ಹೊರತುಪಡಿಸಿ ನಮ್ಮ ಕುಟುಂಬದ ಯಾರು ಸ್ಪರ್ಧೆ ಮಾಡುವುದಿಲ್ಲ. ಕಾಂಗ್ರೆಸ್ ಸೇರಿದಂತೆ ಬೇರೆ ಯಾವುದೆ ಪಕ್ಷದವರು ನನ್ನನ್ನು ಸಂಪರ್ಕಿಸಿಲ್ಲ ಎಂದು ಜಗದೀಶ್ ಶೆಟ್ಟರ್ ಹೇಳಿದರು.
ಪದಾಧಿಕಾರಿಗಳ ರಾಜೀನಾಮೆ: ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ನೀಡಲು ವಿಳಂಬ ಧೋರಣೆ ಅನುಸರಿಸುತ್ತಿರುವ ಬಿಜೆಪಿ ವರಿಷ್ಠರ ನಡೆಗೆ ಅಸಮಾಧಾನ ಹೊಂದಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 16 ಮಂದಿ ಸದಸ್ಯರು ಹಾಗೂ 42 ಮಂದಿ ಧಾರವಾಡ ಜಿಲ್ಲಾ ಬಿಜೆಪಿ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡುತ್ತಿರುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಪತ್ರ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ನನಗೆ, ಜಗದೀಶ್ ಶೆಟ್ಟರ್ ಗೆ ರಾಜಕೀಯ ನಿವೃತ್ತಿಯಾಗುವಂತೆ ವರಿಷ್ಠರ ಸೂಚನೆ: ಕೆ.ಎಸ್. ಈಶ್ವರಪ್ಪ







