ಅಂಬೇಡ್ಕರ್ರ ಚಿಂತನೆ ಮಾರ್ಗದಲ್ಲಿ ಸಾಗಿದಾಗ ಸಮಾಜದ ಉದ್ದಾರ: ಪ್ರೊ. ಫಣಿರಾಜ್

ಉಡುಪಿ: ಅಂಬೇಡ್ಕರ್ ಸಹಿಸಿದ ಕಷ್ಟಗಳಿಂದಾಗಿ, ಅವರ ಶ್ರಮ ತ್ಯಾಗದ ಫಲಗಳಿಂದಾಗಿ ಇವತ್ತು ನಾವುಗಳು ಇಂತಹ ಉತ್ತಮ ಸ್ಥಿತಿಯಲ್ಲಿ ಇದ್ದೇವೆ. ಅವರ ಸಾಮಾಜಿಕ ಚಿಂತನೆಗಳನ್ನು ಅರಿತು ಆ ಮಾರ್ಗದಲ್ಲಿ ನಡೆದಾಗ ಮಾತ್ರ ಸಮಾಜದ ಉದ್ದಾರ ಸಾಧ್ಯ ಎಂದು ಹಿರಿಯ ಚಿಂತಕ ಪ್ರೊ.ಫಣಿರಾಜ್ ಮಣಿಪಾಲ ತಿಳಿಸಿದ್ದಾರೆ.
ನೇಜಾರಿನ ಸ್ಪಂದನ ದಿವ್ಯಾಂಗರ ಸಂರಕ್ಷಣ ಮತ್ತು ತರಬೇತಿ ಕೇಂದ್ರದಲ್ಲಿ ದಯಾನಂದ್ ಕಪ್ಪೆಟ್ಟು ಅಧ್ಯಕ್ಷತೆಯಲ್ಲಿ ಅಂಬೇಡ್ಕರ್ ಅಭಿಮಾನಿ ಬಳಗ ಉಡುಪಿ ಶುಕ್ರವಾರ ಆಯೋಜಿಸಿದ 132ನೇ ವರ್ಷದ ಅಂಬೇಡ್ಕರ್ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ದಲಿತ ನಾಯಕರಾದ ಹರಿಶ್ಚಂದ್ರ ಬಿರ್ತಿ, ಚೇತನ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಉಮೇಶ್ ನಾಕೂರು, ಖಜಾಂಚಿ ವಿವೇಕಾನಂದ ಕಾಮತ್, ದಲಿತ ಚಿಂತಕ ಶ್ಯಾಮರಾಜ್ ಭಿರ್ತಿ, ಮೂಡುಬೆಟ್ಟು ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯಿನಿ ಸುಲೋಚನಾ ಟೀಚರ್, ದಲಿತ ಯುವ ನಾಯಕ ಜಗದೀಶ್ ಗಂಗೊಳ್ಳಿ, ಸಾದಿಕ್ ಸಾಹೇಬ್ ಮಧ್ವನಗರ ಹಾಗೂ ಗುಜ್ಜರಬೆಟ್ಟು, ಕೆಮ್ಮಣ್ಣು, ಮೂಡುಬೆಟ್ಟು, ಕಪ್ಪೆಟ್ಟು, ಪುತ್ತೂರು ಹಾಗೂ ಗಂಗೊಳ್ಳಿಯಿಂದಆಗಮಿಸಿದ ಅಂಬೇಡ್ಕರ್ ಅಭಿಮಾನಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಚೈತನ್ಯ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷರಾದ ಉಮೇಶ್ ನಾಕೂರು ಇವರನ್ನು ಸನ್ಮಾನಿಸಲಾ ಯಿತು. ಚೈತನ್ಯ ಚಾರಿ ಟೇಬಲ್ ಟ್ರಸ್ಟ್ ವತಿಯಿಂದ ಸಮಾಜ ಸೇವಕರಾದ ದಯಾನಂದ ಕಪ್ಪೆಟ್ಟು ಹಾಗೂ ವಿವೇಕಾನಂದ ಕಾಮತ್ ಇವರನ್ನು ಗೌರವಿಸಲಾಯಿತು.
ರಾಜೇಶ್ ಕೆಮ್ಮಣ್ಣು ಸ್ವಾಗತಿಸಿ ದಿನೇಶ್ ಮೂಡುಬೆಟ್ಟು ವಂದಿಸಿದರು. ಸುಮಿತ್ ಮಲ್ಪೆ ಕಾರ್ಯಕ್ರಮ ನಿರೂಪಿಸಿದರು.

