ಮಾಜಿ ಸಂಸದನ ಹತ್ಯೆ ಪ್ರಕರಣ: ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಚಿಕ್ಕಪ್ಪನನ್ನು ಬಂಧಿಸಿದ ಸಿಬಿಐ

ತಿರುಪತಿ: ಮಾಜಿ ಸಂಸದ ವಿವೇಕಾನಂದ ರೆಡ್ಡಿ ಹತ್ಯೆ ಪ್ರಕರಣದಲ್ಲಿ ವೈಎಸ್ಆರ್ಸಿಪಿ ಕಡಪ ಸಂಸದ ವೈ.ಎಸ್. ಅವಿನಾಶ್ ರೆಡ್ಡಿ ಅವರ ತಂದೆ ಹಾಗೂ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ಚಿಕ್ಕಪ್ಪ ಭಾಸ್ಕರ್ ರೆಡ್ಡಿ ಅವರನ್ನು ಕೇಂದ್ರ ತನಿಖಾ ದಳ (ಸಿಬಿಐ) ರವಿವಾರ ಬೆಳಗ್ಗೆ ಬಂಧಿಸಿದೆ.
ಭಾಸ್ಕರ್ ರೆಡ್ಡಿ ಬಂಧನವು 48 ಗಂಟೆಗಳಲ್ಲಿ ಸಿಬಿಐ ನಡೆಸಿದ ಎರಡನೇ ಬಂಧನವಾಗಿದೆ.
ಕಡಪ ಸಂಸದ ವೈ.ಎಸ್. ಅವಿನಾಶ್ ರೆಡ್ಡಿ ಅವರ ಆಪ್ತ ಗಜ್ಜಲ ಉದಯ್ ಕುಮಾರ್ ರೆಡ್ಡಿ ಅವರನ್ನು ಸಿಬಿಐ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ.
ರವಿವಾರ ಮುಂಜಾನೆ ಎರಡು ವಾಹನಗಳಲ್ಲಿ ಪುಲಿವೆಂದುಲದಲ್ಲಿರುವ ಭಾಸ್ಕರ್ ರೆಡ್ಡಿ ಅವರ ನಿವಾಸಕ್ಕೆ ಆಗಮಿಸಿದ ಸಿಬಿಐ ಅಧಿಕಾರಿಗಳು ಭಾಸ್ಕರ್ ರೆಡ್ಡಿಯನ್ನು ವಶಕ್ಕೆ ಪಡೆದು ಅವರ ಕುಟುಂಬ ಸದಸ್ಯರಿಗೆ ಬಂಧನದ ಪತ್ರವನ್ನು ಹಸ್ತಾಂತರಿಸಿದರು.
ಭಾಸ್ಕರ್ ರೆಡ್ಡಿಯನ್ನು ಬಿಗಿ ಭದ್ರತೆಯ ನಡುವೆ ಕಡಪಾದಲ್ಲಿರುವ ಕೇಂದ್ರ ಕಾರಾಗೃಹದ ಆವರಣದಲ್ಲಿರುವ ಜೈಲು ಅತಿಥಿಗೃಹಕ್ಕೆ ಸ್ಥಳಾಂತರಿಸಿದ ಸಿಬಿಐ ಅಧಿಕಾರಿಗಳು ನಂತರ ಹೈದರಾಬಾದ್ಗೆ ಶಿಫ್ಟ್ ಮಾಡಿ ಅಲ್ಲಿನ ಸಿಬಿಐ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ಭಾಸ್ಕರ್ ರೆಡ್ಡಿ ಬಂಧನದ ಸುದ್ದಿ ತಿಳಿದ ಕಡಪಾ ವೈಎಸ್ಆರ್ಸಿಪಿ ಕಾರ್ಯಕರ್ತರು ಮತ್ತು ಸಂಸದರ ಅನುಯಾಯಿಗಳು ಭಾಸ್ಕರ್ ರೆಡ್ಡಿ ಅವರ ನಿವಾಸದ ಹೊರಗೆ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದರು.
ವೈ.ಎಸ್ .ವಿವೇಕಾನಂದ ರೆಡ್ಡಿ ಹತ್ಯೆ ಪ್ರಕರಣದ ತನಿಖೆಯಲ್ಲಿ ಈಗಾಗಲೇ ಹಲವು ಬಾರಿ ಸಿಬಿಐನಿಂದ ವಿಚಾರಣೆಗೆ ಒಳಗಾದ ವೈಎಸ್ ಭಾಸ್ಕರ್ ರೆಡ್ಡಿ ಬಂಧನ ಮಹತ್ವ ಪಡೆದುಕೊಂಡಿದೆ.
ವಿವೇಕಾನಂದ ರೆಡ್ಡಿ ಆಂಧ್ರಪ್ರದೇಶದ ದಿವಂಗತ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಅವರ ಸಹೋದರ ಹಾಗೂ ಹಾಲಿ ಆಂಧ್ರ ಸಿಎಂ ವೈ.ಎಸ್. ಜಗನ್ಮೋಹನ್ ರೆಡ್ಡಿ ಅವರ ಚಿಕ್ಕಪ್ಪ. ರಾಜ್ಯ ವಿಧಾನಸಭಾ ಚುನಾವಣೆಗೆ ವಾರಗಳ ಮೊದಲು ಮಾರ್ಚ್ 15, 2019 ರ ರಾತ್ರಿ ಅವರ ಸೋದರಳಿಯ ಪ್ರತಿನಿಧಿಸುವ ಕ್ಷೇತ್ರವಾದ ಪುಲಿವೆಂದುಲದಲ್ಲಿನ ಅವರ ನಿವಾಸದಲ್ಲಿ ಅವರು ಕೊಲೆಯಾಗಿದ್ದರು.
ಈ ಪ್ರಕರಣವನ್ನು ಆರಂಭದಲ್ಲಿ ರಾಜ್ಯ ಅಪರಾಧ ತನಿಖಾ ವಿಭಾಗದ ವಿಶೇಷ ತನಿಖಾ ತಂಡ (ಎಸ್ಐಟಿ) ತನಿಖೆ ನಡೆಸಿತು. ಆದರೆ ಜುಲೈ 2020 ರಲ್ಲಿ ಸಿಬಿಐಗೆ ಹಸ್ತಾಂತರಿಸಲಾಯಿತು.







