ಬಳ್ಳಾರಿ ನಗರ ಕ್ಷೇತ್ರ: ಕಾಂಗ್ರೆಸ್ ಮತಗಳನ್ನೇ ಕಸಿಯಲಿದೆಯೆ ಅರುಣಾ ಲಕ್ಷ್ಮೀ ಸ್ಪರ್ಧೆ?

ರೆಡ್ಡಿ ಫ್ಯಾಮಿಲಿಯೊಳಗೆ ಭಾವ-ನಾದಿನಿ ಕದನವೆಂಬುದು ತೋರಿಕೆ ಮಾತ್ರವೆ? | ನೇರವಾಗಿ ಕಾಂಗ್ರೆಸ್ ಮತಗಳನ್ನೇ ಕಸಿಯಲಿದೆಯೆ ಅರುಣಾ ಲಕ್ಷ್ಮೀ ಸ್ಪರ್ಧೆ? | ಭದ್ರಕೋಟೆಯನ್ನು ಮತ್ತೊಮ್ಮೆ ವಶಕ್ಕೆ ತೆಗೆದುಕೊಳ್ಳಲು ಕೈ ತಂತ್ರವೇನು? | ಬಳ್ಳಾರಿ ನಗರ ಕ್ಷೇತ್ರದ ಹಣಾಹಣಿಯಲ್ಲಿ ಕಡೆಗೂ ಯಾರ ಪಾಲಾಗಲಿದೆ ಜಯ?

ರಾಜ್ಯ ರಾಜಕಾರಣದಲ್ಲಿ ಗಮನ ಸೆಳೆಯುವ ಕ್ಷೇತ್ರಗಳಲ್ಲಿ ಬಳ್ಳಾರಿ ನಗರವೂ ಒಂದು. 2008ರ ಪುನರ್ವಿಂಗಡಣೆ ಬಳಿಕ ಈ ಕ್ಷೇತ್ರ ಅಸ್ತಿತ್ವಕ್ಕೆ ಬಂತು. ಬಳ್ಳಾರಿ ಮಹಾನಗರ ಪಾಲಿಕೆಯ 28 ವಾರ್ಡ್ ಗಳನ್ನು ಒಳಗೊಂಡಿರುವ ಕ್ಷೇತ್ರ ಇದಾಗಿದೆ.
ಕಾಂಗ್ರೆಸ್ ಪರಿಶಿಷ್ಟಜಾತಿ, ಮುಸ್ಲಿಮ್, ಕುರುಬ ಸಮುದಾಯದ ಮತಗಳನ್ನು ಹೆಚ್ಚಾಗಿ ನಂಬಿಕೊಂಡಿದೆ. ಬಿಜೆಪಿ ಲಿಂಗಾಯತ, ಬ್ರಾಹ್ಮಣ, ಬಲಿಜ, ಪರಿಶಿಷ್ಟಪಂಗಡ ಹಾಗೂ ಇತರ ಹಿಂದುಳಿದ ವರ್ಗಗಳ ಮೇಲೆ ಕಣ್ಣಿಟ್ಟಿದೆ. ಹೊಸ ಪಕ್ಷ ಸ್ಥಾಪಿಸಿ ಪತ್ನಿಯನ್ನು ಅಖಾಡಕ್ಕೆ ಇಳಿಸಿರುವ ಜನಾರ್ದನ ರೆಡ್ಡಿ, ಎಸ್ಸಿಎಸ್ಟಿ, ಮುಸ್ಲಿಮ್, ಕುರುಬ ಮತಗಳನ್ನು ಬಾಚಿಕೊಳ್ಳುವ ತಂತ್ರ ರೂಪಿಸಿದ್ದಾರೆ.
► ಕಾಂಗ್ರೆಸ್ ಕೋಟೆಯಲ್ಲಿ ಬಿಜೆಪಿ
ಪುನರ್ವಿಂಗಡಣೆಗೆ ಮೊದಲು ಬೇರೆ ಎರಡು ಕ್ಷೇತ್ರಗಳಲ್ಲಿ ಸೇರಿಕೊಂಡಿದ್ದ ಕಾಲದಿಂದಲೂ ಇಲ್ಲಿ ಕಾಂಗ್ರೆಸ್ ಹಿಡಿತವೇ ಇತ್ತು. ಕಳೆದ ಆರೂವರೆ ದಶಕ ಗಳಲ್ಲಿ ನಡೆದ 14 ಚುನಾವಣೆಗಳಲ್ಲಿ 6 ಬಾರಿ ಕಾಂಗ್ರೆಸ್, 3 ಬಾರಿ ಬಿಜೆಪಿ, 2 ಬಾರಿ ಪಕ್ಷೇತರ ಅಭ್ಯರ್ಥಿ ಗೆದ್ದಿದ್ದಾರೆ. ಹಾಲಿ ಸಾರಿಗೆ ಸಚಿವ ಬಿ.ಶ್ರೀರಾಮುಲು ಈ ಕೇತ್ರದಲ್ಲಿ ಕಮಲ ಅರಳಲು ಕಾರಣರಾದರು.
ಕಾಂಗ್ರೆಸ್ನ ಭದ್ರಕೋಟೆ ಎಂದೇ ಬಿಂಬಿತವಾಗಿದ್ದ ಬಳ್ಳಾರಿಯಲ್ಲಿ 2004ರಲ್ಲಿ ಶ್ರೀರಾಮುಲು ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದರು. 2008ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಜನಾರ್ದನ ರೆಡ್ಡಿ ಸೋದರ ಜಿ.ಸೋಮಶೇಖರ ರೆಡ್ಡಿ ಗೆದ್ದರು. 2013ರಲ್ಲಿ ಸೋಮಶೇಖರ ರೆಡ್ಡಿ ಸ್ಪರ್ಧಿಸಿ ರಲಿಲ್ಲ. ಕಾಂಗ್ರೆಸ್ನ ಅನಿಲ್ಲಾಡ್ ಜಯ ಗಳಿಸಿದರು. 2018ರಲ್ಲಿ ಸೋಮಶೇಖರ ರೆಡ್ಡಿ ಮತ್ತೆ ಸ್ಪರ್ಧಿಸಿ ಜಯ ಗಳಿಸಿದರು. ಈ ಬಾರಿಯೂ ಬಿಜೆಪಿ ಅವರನ್ನೇ ಇಲ್ಲಿ ಕಣಕ್ಕಿಳಿಸಿದೆ.
► ತೋರಿಕೆಯ ಫೈಟ್?
ಬಹಿರಂಗವಾಗಿ, ಪತ್ನಿಯನ್ನು ಜನಾರ್ದನ ರೆಡ್ಡಿ ಕಣಕ್ಕಿಳಿಸಿರುವುದು ಸಹೋದರನಿಗೆ ಮಾಡಿರುವ ಚಾಲೆಂಜ್ ಎಂತಲೇ ಕಾಣಿಸಿದೆ. ಜನಾರ್ದನ ರೆಡ್ಡಿಯ ಮಾತುಗಳೂ ಅದೇ ಅರ್ಥ ಬರುವಂತಿದ್ದವು. ಆದರೆ ಇದು ತೋರಿಕೆಗಾಗಿ ಮಾತ್ರವೇ ಕುಟುಂಬದವರ ನಡುವಿನ ಕದನವಾಗಿದೆಯೆ, ಇದೂ ಒಂದು ಗೇಮ್ ಪ್ಲಾನ್ ಆಗಿದೆಯೆ ಎಂಬ ಪ್ರಶ್ನೆಗಳೂ ಎದ್ದಿವೆ.ಬಿಜೆಪಿಗೂ ಕೆಆರ್ ಪಿಪಿ ಹೊಡೆತ ಕೊಡಬೇಕೆಂ ದಿದೆಯೆ, ಅಥವಾ ಕಾಂಗ್ರೆಸ್ಗೆ ಹೊಡೆತ ಕೊಡಬೇಕೆಂಬುದೇ ಉದ್ದೇಶವೇ ಎಂಬ ಅನುಮಾನಗಳೂ ಇನ್ನೊಂ ದೆಡೆಯಲ್ಲಿ ವ್ಯಕ್ತವಾಗುತ್ತಿವೆ.

► ಜೆಡಿಎಸ್ ಮೌನ?
ಕಾಂಗ್ರೆಸ್, ಬಿಜೆಪಿ ಮತ್ತು ಹೊಸ ಕೆಆರ್ಪಿಪಿ ರಾಜಕೀಯ ಚುಟು ವಟಿಕೆಗಳು ಬಿರುಸು ಪಡೆದು ಕೊಂಡಿದ್ದರೂ, ಜೆಡಿಎಸ್ ಮಾತ್ರ ಮೌನವಾಗಿಯೇ ಇದೆ. ಪಕ್ಷದ ಜಿಲ್ಲಾಧ್ಯಕ್ಷ ಪಿ.ಎಸ್. ಸೋಮಲಿಂಗನಗೌಡ ತಾವೂ ಆಕಾಂಕ್ಷಿ ಎಂದು ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಜೆಡಿಎಸ್ ಉಪಸ್ಥಿತಿ ಮಾತ್ರ ಅಷ್ಟಾಗಿ ಕಾಣಿಸುತ್ತಿಲ್ಲ.
► ಕ್ಷೇತ್ರದ ಸಮಸ್ಯೆ ಗೌಣ?
ಬಳ್ಳಾರಿ ನಗರ ಕ್ಷೇತ್ರದಲ್ಲಿ ರಾಜಕಾರಣವೇ ಮುಖ್ಯ. ರಾಜಕೀಯ ಪ್ರಭಾವದ ಮುಂದೆ ಯಾವುದೇ ಸಮಸ್ಯೆಗಳು ಹೆಚ್ಚು ಚರ್ಚೆಯಾ ಗುವುದೇ ಇಲ್ಲ. ಪ್ರಭಾವವೇ ಇಲ್ಲಿ ಎಲ್ಲ ಆಟಗಳ ಸೂತ್ರ. ಹಾಗಾಗಿ ಚುನಾವಣೆಯಲ್ಲಿಯೂ ಅಂಥ ಪ್ರಭಾವವೇ ಕೆಲಸ ಮಾಡುತ್ತದೆ.
►► ಭಾವ-ನಾದಿನಿ ನಡುವೆ ಕದನವೆ?
ಸಾಂಪ್ರದಾಯಿಕವಾಗಿ ಇಲ್ಲಿ ಪೈಪೋಟಿಯಿರುವುದು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ. ಆದರೆ ಈ ಬಾರಿ, ಸೋಮಶೇಖರ ರೆಡ್ಡಿ ಯವರ ಸಹೋದರ, ಮಾಜಿ ಸಚಿವ ಜನಾರ್ದನ ರೆಡ್ಡಿಯವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಪ್ರವೇಶವಾಗಿದೆ. ಮತ್ತು ಅದರ ಅಭ್ಯರ್ಥಿಯಾಗಿ ಸ್ವತಃ ಜನಾರ್ದನ ರೆಡ್ಡಿಯವರ ಪತ್ನಿ ಅರುಣಾ ಲಕ್ಷ್ಮೀ ಈ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.
ಭಾವ-ನಾದಿನಿ ಮಧ್ಯೆ ಫೈಟ್ ನಡೆಯಲಿದೆ ಎಂಬುದು ಕುತೂಹಲ ಇನ್ನಷ್ಟು ಹೆಚ್ಚಲು ಕಾರಣವಾಗಿರುವ ವಿಚಾರ. ಆದರೆ ಇದನ್ನು ಹಲವು ಬಗೆಯಲ್ಲಿ ನೋಡಲಾಗುತ್ತಿದೆ. ಮುಖ್ಯವಾಗಿ ಜನಾರ್ದನ ರೆಡ್ಡಿಯವರು ತಮ್ಮ ಹೊಸ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿರುವುದು ಮುಸ್ಲಿಮ್ ಮತ್ತು ಎಸ್ಸಿ, ಎಸ್ಟಿ ಮತಗಳ ಮೇಲೆ ಕಣ್ಣಿಟ್ಟುಕೊಂಡು. ಹಾಗಾಗಿ ಕೆಆರ್ಪಿಪಿ ಸ್ಪರ್ಧೆಯಿಂದ ಆ ಸಮುದಾಯಗಳ ಮತಗಳು ಒಡೆಯಲಿವೆ ಹಾಗೂ ಅದರ ಪರಿಣಾಮವಾಗಿ ಕಾಂಗ್ರೆಸ್ಗೆ ಹೊಡೆತ ಬೀಳಲಿದೆ ಎಂಬುದು ಒಂದು ಲೆಕ್ಕಾಚಾರ. ಅದಕ್ಕಿಂತ ಕಾಂಗ್ರೆಸ್ಗೆ ಹೊಡೆತ ಕೊಡಬೇ ಕೆಂದೇ ಈ ಮೂಲಕ ಹೂಡಲಾಗಿರುವ ಗುಪ್ತ ತಂತ್ರ ಇದು ಎಂದೂ ಹೇಳಲಾಗುತ್ತಿದೆ. ಜನಾರ್ದನ ರೆಡ್ಡಿಯವರು ಕೆಆರ್ಪಿಪಿ ಕಟ್ಟಿದ್ದಕ್ಕೆ ಬಿಜೆಪಿ ಎಲ್ಲೂ ಎದುರಾಡಿಲ್ಲ. ಅವರ ಬಗ್ಗೆ ಯಾವುದೇ ಟೀಕೆ ಯನ್ನೂ ಬಹಿರಂಗವಾಗಿ ಮಾಡಿಲ್ಲ. ಹಾಗಾಗಿ ಅದು ಬಿಜೆಪಿಯ ಬಿಟೀಂ ಆಗಿಯೇ ಚುನಾವಣೆಯಲ್ಲಿ ಬಿಜೆಪಿಗೆ ಸಹಕಾರಿಯಾಗಲಿದೆ ಎಂಬ ವಾದಗಳಿವೆ.







