ಸಚಿವ ಅಶ್ವತ್ಥನಾರಾಯಣ ನಾಮಪತ್ರ ಸಲ್ಲಿಕೆ: ಠೇವಣಿ ಹಣ ದೇಣಿಗೆಯಾಗಿ ನೀಡಿದ ಕ್ಷೇತ್ರದ ಬ್ರಾಹ್ಮಣ ಸಂಘಟನೆಗಳು

ಬೆಂಗಳೂರು, ಎ. 17: ಬೆಂಗಳೂರಿನ ಮಲ್ಲೇಶ್ವರ ಕ್ಷೇತ್ರದ ಹಾಲಿ ಶಾಸಕ ಮತ್ತು ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಬಿಜೆಪಿ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಚಿವ ಅಶ್ವತ್ಥನಾರಾಯಣ ಅವರ ಪತ್ನಿ ಶ್ರುತಿ, ಮಲ್ಲೇಶ್ವರ ಮಂಡಲ ಬಿಜೆಪಿ ಅಧ್ಯಕ್ಷೆ ಕಾವೇರಿ ಕೇದಾರನಾಥ ಸೇರಿದಂತೆ ಇತರರು ಇದ್ದರು. ಇದರ ಅಂಗವಾಗಿ ಮಲ್ಲೇಶ್ವರನ ಸರ್ಕಲ್ ಮಾರಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಕಾರ್ಯಕರ್ತರೊಂದಿಗೆ ಹೊರಟ ಅವರು, 18ನೆ ಅಡ್ಡರಸ್ತೆಯಲ್ಲಿರುವ ಗೋಕಾಕ್ ಚಳವಳಿ ಸ್ಮರಣಾರ್ಥ ಉದ್ಯಾನ, 18ನೆ ಅಡ್ಡರಸ್ತೆ ಮೂಲಕ ಚುನಾವಣಾಧಿಕಾರಿಗಳ ಕಚೇರಿ ಇರುವ ಜಲಮಂಡಳಿ ಕಚೇರಿಗೆ ಪಾದಯಾತ್ರೆ ಮೂಲಕ ಸಾಗಿದರು.
ಈ ಸಂದರ್ಭದಲ್ಲಿ ಸಾಂಸ್ಕøತಿಕ ಕಲಾತಂಡಗಳು ತಮ್ಮ ಪ್ರದರ್ಶನದ ಮೂಲಕ ಮೆರುಗು ನೀಡಿ, ವರ್ಣರಂಜಿತ ವಾತಾವರಣವನ್ನು ಸೃಷ್ಟಿಸಿದ್ದವು. ಇನ್ನೊಂದೆಡೆಯಲ್ಲಿ ಬಿಜೆಪಿ ಅಂಗವಸ್ತ್ರ ಹೊದ್ದು, ಪಕ್ಷದ ಬಾವುಟ ಹಿಡಿದಿದ್ದ ಅಪಾರ ಸಂಖ್ಯೆಯ ಕಾರ್ಯಕರ್ತರು ಜಯಘೋಷಗಳನ್ನು ಮೊಳಗಿಸಿ, ಸಂಭ್ರಮದ ಕಳೆ ತಂದರು.
ಅಲ್ಲದೆ, ಮಲ್ಲೇಶ್ವರ ಕ್ಷೇತ್ರದ ವ್ಯಾಪ್ತಿಯಲ್ಲಿ ಸಕ್ರಿಯವಾಗಿರುವ ಯದುಗಿರಿ ಯತಿರಾಜ ಮಠ, ಬಡಗನಾಡು ಬ್ರಾಹ್ಮಣ ಮಹಾಸಭಾ, ಸಿರಿನಾಡು ಬ್ರಾಹ್ಮಣ ಸಭಾ, ಅಕ್ಷಯ ಬ್ರಾಹ್ಮಣ ಸಭಾ, ಮಹಾತ್ಮ ಮಹಾಮಂಡಲ, ಮಾಧ್ವ ಮಹಾಮಂಡಲ, ವಿಪ್ರತ್ರಯ ಪರಿಷತ್, ಸುಧೀಂದ್ರ ನಗರದ ಮಾಧ್ವ ಸಂಘ ಮತ್ತು ಸಂದೀಪನಿ ಗುರುಕುಲದ ಪದಾಧಿಕಾರಿಗಳು ನಾಮಪತ್ರದ ಜತೆ ಸಲ್ಲಿಸಬೇಕಾದ 10ಸಾವಿರ ರೂ.ಗಳ ಠೇವಣಿ ಮೊತ್ತವನ್ನು ಅಶ್ವತ್ಥನಾರಾಯಣರಿಗೆ ದೇಣಿಗೆಯಾಗಿ ಹಸ್ತಾಂತರಿಸಿದರು. ಇದೇ ಹಣವನ್ನು ಸಚಿವರು ನಾಮಪತ್ರದ ಜತೆ ಚುನಾವಣಾ ಅಧಿಕಾರಿಗಳಿಗೆ ಠೇವಣಿಯಾಗಿ ನೀಡಿದರು.
ಮನೆಯಲ್ಲಿ ಹೋಮ: ನಾಮಪತ್ರ ಸಲ್ಲಿಕೆಗೂ ಮೊದಲು ಸಚಿವ ಅಶ್ವತ್ಥನಾರಾಯಣ ಅವರ ಮಲ್ಲೇಶ್ವರದ ನಿವಾಸದಲ್ಲಿ ಬೆಳಗ್ಗೆ ವಿಶೇಷ ಹೋಮ ನೆರವೇರಿತು. ಕ್ಷೇತ್ರದ ವ್ಯಾಪ್ತಿಯಲ್ಲಿರುವ ಬಾಲಾಂಜನೇಯ, ಗಂಗಮ್ಮ, ಲಕ್ಷ್ಮೀನರಸಿಂಹ, ಕಾಡು ಮಲ್ಲೇಶ್ವರ, ಕೋಡಿ ಆಂಜನೇಯ ಮತ್ತು ಮಹಾಗಣಪತಿ ದೇವಸ್ಥಾನಗಳಿಗೆ ಅಭಿಮಾನಿಗಳು ಮತ್ತು ಕಾರ್ಯಕರ್ತರೊಂದಿಗೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದರು. ಎಲ್ಲ ದೇಗುಲಗಳಲ್ಲೂ ಅರ್ಚಕರು ಸಚಿವರಿಗೆ ಶಾಲು ಹೊದಿಸಿ, ಫಲ-ತಾಂಬೂಲ ನೀಡಿ, ಗೌರವಿಸಿದರು.
