ಚುನಾವಣಾ ಆಯೋಗದ ಮೇಲೆ ನಂಬಿಕೆ ಕುಗ್ಗಿದೆ: ರಣದೀಪ್ ಸಿಂಗ್ ಸುರ್ಜೇವಾಲಾ ಬೇಸರ

ಬೆಂಗಳೂರು, ಎ.17: ಸಿಎಂ ಬೊಮ್ಮಾಯಿ ಸರಕಾರ ಟೆಂಡರ್ಗಳಲ್ಲಿ ಶೇ.40ರಷ್ಟು ಕಮಿಷನ್ ಪಡೆಯಲು ಕಾನೂನು ಬಾಹಿರ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇದೆಲ್ಲವನ್ನು ನೋಡಿಯೂ ಮೌನ ವಹಿಸಿರುವ ಚುನಾವಣಾ ಆಯೋಗದ ಮೇಲೆ ನಂಬಿಕೆ ಕುಗ್ಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಬೇಸರ ವ್ಯಕ್ತಪಡಿಸಿದ್ದಾರೆ.
ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಚುನಾವಣೆ ದಿನಾಂಕ ಘೋಷಿಸುವ ಮುನ್ನ ಅನೇಕ ಟೆಂಡರ್ಗಳನ್ನು ಸಮರ್ಪಕ ಪ್ರಕ್ರಿಯೆ ಮೂಲಕ ಹೊರಡಿಸಿಲ್ಲ. ಟೆಂಡರ್ ಅಂದಾಜು ಮೊತ್ತ, ಕಾಲಾವಧಿ ನಿಗದಿಯಾಗದೇ ಟೆಂಡರ್ ನೀಡಲಾಗಿದೆ. ಇಲಾಖೆವಾರು ಕಾಮಗಾರಿ ವೆಚ್ಚದ ಪರಿಶೀಲನೆ ಇಲ್ಲದೆ ಟೆಂಡರ್ ನೀಡಲಾಗಿದೆ. ಬೊಮ್ಮಾಯಿ ಸರಕಾರ ಕೇವಲ 40ರಷ್ಟು ಕಮಿಷನ್ ಪಡೆಯುವ ಏಕಮಾತ್ರ ಉದ್ದೇಶದಿಂದ ಈ ರೀತಿ ಅಕ್ರಮವಾಗಿ ಟೆಂಡರ್ ನೀಡಲಾಗಿದೆ ಎಂದು ಆರೋಪಿಸಿದರು.
ಶಿರಾಡಿ ಘಾಟ್ ಟೆಂಡರ್ ಗೆ 1976 ಕೋಟಿ, ದೊಡ್ಡಬಳ್ಳಾಪುರದ ಕಾಮಗಾರಿಕೆ 1682 ಕೋಟಿ, ಆಂಧ್ರ ಪ್ರದೇಶ-ಕರ್ನಾಟಕ ಗಡಿ ಭಾಗದ ರಾಯಚೂರಿನಲ್ಲಿ 1633 ಕೋಟಿ, ಹಾಸನ ನಾಲ್ಕು ಪಥ ರಸ್ತೆಗೆ 1318 ಕೋಟಿ, ವಿವಿಧ ಬೈಪಾಸ್ಗಳ ಅಭಿವೃದ್ಧಿಗೆ 1167 ಕೋಟಿ ಹೀಗೆ ದೊಡ್ಡ ಪಟ್ಟಿಗಳಿವೆ. ಒಟ್ಟು 16,516 ಕೋಟಿ ಮೊತ್ತದ ಟೆಂಡರ್ ಗಳನ್ನು ತರಾತುರಿಯಲ್ಲಿ ನೀಡಲಾಗಿದೆ ಎಂದು ಸುರ್ಜೆವಾಲಾ ಮಾಹಿತಿ ನೀಡಿದರು.
ಈ ವಿಚಾರವಾಗಿ ಕೇಂದ್ರ ಚುನಾವಣಾ ಆಯೋಗ ಸೋಮವಾರ ಸಂಜೆ ಒಂದು ಆದೇಶ ಹೊರಡಿಸಿದ್ದು, ಆಯೋಗವು ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಯಾವುದೇ ಟೆಂಡರ್ ಪ್ರಕ್ರಿಯೆ ಮುಂದುವರಿಸದಂತೆ ರಾಜ್ಯ ಸರಕಾರಕ್ಕೆ ಸೂಚನೆ ನೀಡಿದೆ. ಇನ್ನು ಈ ಟೆಂಡರ್ಗಳಿಗೆ ಚುನಾವಣೆ ಮುಗಿಯುವವರೆಗೂ ತಡೆ ನೀಡಬೇಕು. ಇನ್ನು ಈಗಾಗಲೇ ಕರೆಯಲಾಗಿರುವ ಟೆಂಡರ್ ಪ್ರಕ್ರಿಯೆ ಹಾಗೂ ಮುಂದಿನ ದಿನಗಳಲ್ಲಿ ಯಾವುದೇ ಹೊಸ ಟೆಂಡರ್ ಕರೆಯಬಾರದು ಎಂದು ಆಯೋಗ ತಿಳಿಸಿದೆ. ಅಲ್ಲದೆ ಕಾರ್ಯಾದೇಶ ನೀಡಬಾರದು ಎನ್ನಲಾಗಿದೆ ಎಂದು ಸುರ್ಜೆವಾಲಾ ತಿಳಿಸಿದರು.
ಆಯೋಗದ ಈ ಆದೇಶದಿಂದ ಬೊಮ್ಮಾಯಿ ಅವರ ಬಂಡವಾಳ ಬಯಲಾಗಿದೆ. ಅಕ್ರಮ ಟೆಂಡರ್ ಕರೆದಿರುವ ಎಲ್ಲಾ ಅಧಿಕಾರಿಗಳು, ಸಚಿವರ ವಿರುದ್ಧ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು. ಬಿಜೆಪಿ ಸರಕಾರ ಟೆಂಡರ್ ಮಾಫಿಯಾದಲ್ಲಿ 16 ಸಾವಿರ ಕೋಟಿ ರೂ.ಅಕ್ರಮ ಟೆಂಡರ್ ನೀಡಿದ್ದು, ಚುನಾವಣಾ ಆಯೋಗ ಅದಕ್ಕೆ ತಡೆ ನೀಡಿದೆ. ಇದು ಬೊಮ್ಮಾಯಿ ಸರಕಾರಕ್ಕೆ ತೀವ್ರ ಹಿನ್ನಡೆಯಾಗಿದೆ. ಬೊಮ್ಮಾಯಿ ಅವರಿಗೆ ಕಿಂಚಿತ್ತಾದರೂ ನೈತಿಕತೆ ಇದ್ದರೆ ರಾಜೀನಾಮೆ ನೀಡಬೇಕು ಎಂದು ಸುರ್ಜೆವಾಲಾ ಆಗ್ರಹಿಸಿದರು.