ಬಳ್ಳಾಡಿ ಸುನಂದ ಪೂಜಾರ್ತಿಗೆ ಪಾಡ್ದನ ಪ್ರಶಸ್ತಿ ಪ್ರದಾನ

ಉಡುಪಿ, ಎ.18: ನಮ್ಮ ಹಿರಿಯರು ಕೃಷಿಯ ದಿನಗಳ ದುಃಖ ದುಮ್ಮಾನ ಗಳನ್ನು ಕಳೆಯಲು ಮತ್ತು ಕೃಷಿ ಬದುಕನ್ನು ಸಂಭ್ರಮಿಸುವ ಸಮಯದಲ್ಲಿ ತುಳು ಪಾಡ್ದನಗಳನ್ನು ಹಾಡುತ್ತಿದ್ದರು. ತುಳು ಸಾಂಪ್ರದಾಯಿಕ ಬದುಕನ್ನು ಬಿಂಬಿಸುವ ಪಾಡ್ದನ, ಪಾರಿ, ಸಂಧಿಗಳನ್ನು ಬೇರೆ ಬೇರೆ ಸಂದರ್ಭಗಳಲ್ಲಿ ತುಳುವರು ಮೌಖಿಕವಾಗಿ ಪ್ರಚುರಪಡಿಸುತ್ತಿದ್ದರು ಎಂದು ತುಳು ಜಾನಪದ ವಿದ್ವಾಂಸ ಡಾ.ವೈ.ಎನ್.ಶೆಟ್ಟಿ ತಿಳಿಸಿದ್ದಾರೆ.
ಉಡುಪಿ ನಗರದ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ ಸಂಸ್ಥೆಯಲ್ಲಿ ಕೊಲ್ಲು ಕೃಷ್ಣ ಶೆಟ್ಟಿ ಫೌಂಡೇಶನ್ ದೆಂದೂರು ವತಿಯಿಂದ ಇತ್ತೀಚೆಗೆ ನಡೆದ ದೆಂದೂರು ಕೊಲ್ಲು ಕೆ.ಶೆಟ್ಟಿ ಸ್ಮಾರಕ ಪಾಡ್ದನ ಪ್ರಶಸ್ತಿಯನ್ನು ಹಿರಿಯ ಪಾಡ್ದನ ಕಲಾವಿದೆ ಬಳ್ಳಾಡಿ ಸುನಂದ ಪೂಜಾರ್ತಿ ಅವರಿಗೆ ವಿತರಿಸಿ ಅವರು ಮಾತನಾಡುತಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಶಂಕರಪುರ ಸಾಯಿಬಾಬಾ ಮಂದಿರದ ಸಾಯಿ ಈಶ್ವರ್ ಗುರೂಜಿ ಮಾತನಾಡಿ, ತುಳುವರು ಆಚರಿಸಿಕೊಂಡು ಬರುತ್ತಿದ್ದ ಅನೇಕ ಆಚರಣೆಗಳನ್ನು ಯುವಜನಾಂಗ ಮರೆತು ಬಿಟ್ಟಿದ್ದು, ಬೆರಳೆ ಣಿಕೆಯ ಜಾನಪದ ಪಾಡ್ದನ ಕಲಾವಿದರನ್ನು ಗುರುತಿಸಿ ಗೌರವಿಸುವ ಕೆಲಸ ಸುತ್ತ್ಯರ್ಹವೆನಿಸಿದೆ ಎಂದರು.
ಶಿರ್ವ ಸಂತಮೇರಿ ಮಹಾವಿದ್ಯಾಲಯದ ಹಿರಿಯ ಉಪನ್ಯಾಸಕ ಡಾ.ವಿಠಲ ನಾಯಕ್, ಮಂಗಳೂರು ಕೆಎಂಎಫ್ ನಿರ್ದೇಶಕಿ ಸ್ಮಿತಾ ಆರ್.ಶೆಟ್ಟಿ ಸೂಡ, ಯುವ ಉದ್ಯಮಿ ಧೀರಜ್ ಶೆಟ್ಟಿ ಕುತ್ಯಾರು ಮುಖ್ಯ ಅತಿಥಿಗಳಾಗಿದ್ದರು. ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ ಸಂಸ್ಥೆಯ ಶಾಖಾ ಮುಖ್ಯಸ್ಥ ಹಫೀಜ್ ರೆಹಮಾನ್, ಪಿಆರ್ಒ ರಾಘವೇಂದ್ರ ನಾಯಕ್, ಕೊಲ್ಲು ಕೃಷ್ಣ ಶೆಟ್ಟಿ ಫೌಂಡೇಶನ್ ಗೌರವಾಧ್ಯಕ್ಷ ಚೇತನ್ ಕುಮಾರ್ ಶೆಟ್ಟಿ, ಸಂಚಾಲಕ ಗುಣವತಿ ದಯಾನಂದ ಶೆಟ್ಟಿ, ಸಲಹೆಗಾರರಾದ ಲಲಿತ ಆರ್. ಶೆಟ್ಟಿ ದೆಂದೂರು, ಬೆಳ್ಳೆ ಮೂಡುಮನೆ ದಯಾನಂದ ಶೆಟ್ಟಿ ಉಪಸ್ಥಿತರಿದ್ದರು.
ಕೊಲ್ಲು ಕೃಷ್ಣ ಶೆಟ್ಟಿ ಫೌಂಡೇಶನ್ ಮುಖ್ಯಸ್ಥ ದಯಾನಂದ ಕೆ.ಶೆಟ್ಟಿ ದೆಂದೂರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಸಂಗೀತಾ ವಸಂತ್ ಕಾರ್ಯಕ್ರಮ ನಿರೂಪಿಸಿದರು. ಇಶಾನಿ ಶೆಟ್ಟಿ ವಂದಿಸಿದರು.