ಸುಡಾನ್ ಪರಿಸ್ಥಿತಿ ಕುರಿತು ಸೌದಿ ಅರೇಬಿಯಾ, ಯುಎಇಯೊಂದಿಗೆ ಚರ್ಚಿಸಿದ ವಿದೇಶಾಂಗ ಸಚಿವ ಎಸ್. ಜೈಶಂಕರ್

ಹೊಸದಿಲ್ಲಿ: ಹಿಂಸಾಚಾರ ಪೀಡಿತ ಸುಡಾನ್ನಲ್ಲಿನ ಪರಿಸ್ಥಿತಿಯ ಕುರಿತು ವಿದೇಶಾಂಗ ಸಚಿವ ಎಸ್. ಜೈಶಂಕರ್(S Jaishankar )ಅವರು ಸೌದಿ ಅರೇಬಿಯಾ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಯ ತಮ್ಮ ಸಹವರ್ತಿಗಳೊಂದಿಗೆ ಚರ್ಚಿಸಿದ್ದಾರೆ.
ವಿಶೇಷವಾಗಿ ಆಫ್ರಿಕನ್ ದೇಶದಲ್ಲಿ ನೆಲೆಸಿರುವ ಭಾರತೀಯರ ಮೇಲಿನ ಕಾಳಜಿಯ ದೃಷ್ಟಿಯಿಂದ ಭಾರತವು ಸುಡಾನ್ನಲ್ಲಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.
ಯುಎಇಯ ವಿದೇಶಾಂಗ ಸಚಿವ ಶೇಖ್ ಅಬ್ದುಲ್ಲಾ ಬಿನ್ ಝಾಯೆದ್ ಅಲ್ ನಹ್ಯಾನ್ ಅವರೊಂದಿಗಿನ ದೂರವಾಣಿ ಸಂಭಾಷಣೆಯಲ್ಲಿ, ಸುಡಾನ್ನಲ್ಲಿನ ಪರಿಸ್ಥಿತಿಯ ಬಗ್ಗೆ ಅವರು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು ಎಂದು ಜೈಶಂಕರ್ ಹೇಳಿದರು.
ಸುಡಾನ್ ಕಳೆದ ಆರು ದಿನಗಳಿಂದ ದೇಶದ ಸೇನೆ ಹಾಗೂ ಅರೆಸೈನಿಕ ಗುಂಪಿನ ನಡುವೆ ಮಾರಣಾಂತಿಕ ಕಾಳಗಕ್ಕೆ ಸಾಕ್ಷಿಯಾಗುತ್ತಿದ್ದು, ಸುಮಾರು 100 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಸೌದಿ ವಿದೇಶಾಂಗ ಸಚಿವ ಫೈಸಲ್ ಬಿನ್ ಫರ್ಹಾನ್ ಅವರೊಂದಿಗಿನ ದೂರವಾಣಿ ಮಾತುಕತೆಯನ್ನು ಉಲ್ಲೇಖಿಸಿದ ಜೈಶಂಕರ್, ಎರಡೂ ಕಡೆಯವರು ನಿಕಟ ಸಂಪರ್ಕದಲ್ಲಿರುತ್ತಾರೆ ಎಂದು ಹೇಳಿದರು.
ಸೋಮವಾರ ಸುಡಾನ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಭಾರತೀಯರು ತಮ್ಮ ನಿವಾಸಗಳಿಂದ ಹೊರಗೆ ಹೋಗದಂತೆ ಹಾಗೂ ಶಾಂತವಾಗಿರಲು ಸೂಚಿಸುವ ಹೊಸ ಸಲಹೆಯನ್ನು ನೀಡಿತು.







