ಅಜಿತ್ ಪವಾರ್ ಬಿಜೆಪಿ ಸೇರ್ಪಡೆಯಾದರೆ ನಾವು ಸರ್ಕಾರದ ಭಾಗವಾಗಿರುವುದಿಲ್ಲ: ಏಕನಾಥ್ ಶಿಂದೆ ಬಣ ಎಚ್ಚರಿಕೆ

ಮುಂಬೈ: ಒಂದು ವೇಳೆ ಅಜಿತ್ ಪವಾರ್ (Ajit Pawar) ಅವರು ಎನ್ಸಿಪಿ (NCP) ನಾಯಕರ ಒಂದು ಗುಂಪಿನೊಂದಿಗೆ ಬಿಜೆಪಿ (BJP) ಸೇರ್ಪಡೆಯಾದರೆ, ನಾವು ಮಹಾರಾಷ್ಟ್ರ ಸರ್ಕಾರದ ಭಾಗವಾಗಿರುವುದಿಲ್ಲ ಎಂದು ಏಕನಾಥ್ ಶಿಂದೆ ಶಿವ ಸೇನೆ ಬಣದ ವಕ್ತಾರ ಸಂಜಯ್ ಶಿರ್ಸತ್ ಎಚ್ಚರಿಸಿದ್ದಾರೆ ಎಂದು newindianexpress.com ವರದಿ ಮಾಡಿದೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶಿರ್ಸತ್, ಎನ್ಸಿಪಿ ನೇರವಾಗಿ ಬಿಜೆಪಿಯೊಂದಿಗೆ ಹೋಗುವುದಿಲ್ಲ ಎಂದು ನನ್ನ ಭಾವನೆ ಎಂದು ಹೇಳಿದ್ದಾರೆ. ಅವರ ಪಕ್ಷವು ಬಿಜೆಪಿಯೊಂದಿಗೆ ಮಹಾರಾಷ್ಟ್ರ ಸರ್ಕಾರದಲ್ಲಿ ಭಾಗಿಯಾಗಿದೆ.
"ಈ ಬಗ್ಗೆ ನಮ್ಮ ನೀತಿಯು ಸ್ಪಷ್ಟವಾಗಿದೆ. ಎನ್ಸಿಪಿಯು ವಿಶ್ವಾಸದ್ರೋಹವೆಸಗುವ ಪಕ್ಷವಾಗಿದೆ. ನಾವು ಅಧಿಕಾರದಲ್ಲಿದ್ದರೂ ಎನ್ಸಿಪಿಯೊಂದಿಗೆ ಇರುವುದಿಲ್ಲ. ಒಂದು ವೇಳೆ ಬಿಜೆಪಿಯು ಎನ್ಸಿಪಿಯನ್ನು ತನ್ನೊಂದಿಗೆ ಕೂಡಿಸಿಕೊಂಡರೆ ಮಹಾರಾಷ್ಟ್ರ ಅದನ್ನು ಇಷ್ಟಪಡುವುದಿಲ್ಲ. ಜನರು ಕಾಂಗ್ರೆಸ್ ಮತ್ತು ಎನ್ಸಿಪಿಯೊಂದಿಗೆ ಹೋಗುವುದನ್ನು ಇಷ್ಟಪಡುವುದಿಲ್ಲವಾದ್ದರಿಂದ ನಾವು ಮತ್ತೆ ಉದ್ದವ್ ಠಾಕ್ರೆ ನೇತೃತ್ವದ ಶಿವ ಸೇನೆಗೆ ಮರಳುತ್ತೇವೆ" ಎಂದು ಶಿರ್ಸತ್ ತಿಳಿಸಿದ್ದಾರೆ.
ಈ ಬಗ್ಗೆ ಅಜಿತ್ ಪವಾರ್ ಏನು ಹೇಳದೆ ಇರುವುದರಿಂದ ಅವರಿಗೆ ಎನ್ಸಿಪಿಯಲ್ಲಿ ಇರುವುದು ಇಷ್ಟವಿಲ್ಲ ಎಂದು ಅರ್ಥ ಎಂದೂ ಶಿರ್ಸತ್ ಅಭಿಪ್ರಾಯ ಪಟ್ಟಿದ್ದಾರೆ.







