ಮೀನುಗಾರಿಕಾ ಬಂದರು ಕಾಮಗಾರಿ ವಿಳಂಬ ಆರೋಪ: ಮರವಂತೆ ಮೀನುಗಾರರಿಂದ ಮತದಾನ ಬಹಿಷ್ಕಾರದ ಎಚ್ಚರಿಕೆ

ಬೈಂದೂರು, ಎ.20: ಬೈಂದೂರು ವಿಧಾನಸಭಾ ಕ್ಷೇತ್ರದ ಮರವಂತೆ ಮೀನುಗಾರಿಕಾ ಬಂದರಿನ ಎರಡನೇ ಹಂತದ 85 ಕೋಟಿ ರೂ. ವೆಚ್ಚದ ಕಾಮಗಾರಿ ಘೋಷಣೆಯಾಗಿ ಟೆಂಡರ್ ಆದರೂ ಈವರೆಗೆ ಕಾಮಗಾರಿ ನಡೆದಿಲ್ಲ. ಈ ಬಗ್ಗೆ ಸರಕಾರ ಹಾಗೂ ಸಂಬಂಧಪಟ್ಟ ಇಲಾಖೆ ಗಮನ ಸೆಳೆದರೂ ಯಾವುದೇ ಸ್ಪಂದನೆ ದೊರೆತಿಲ್ಲ. ಆದುದರಿಂದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲು ನಿರ್ಧರಿಸಲಾಗಿದೆ ಎಂದು ಮೀನುಗಾರಿಕಾ ಸೇವಾ ಸಮಿತಿ ಅಧ್ಯಕ್ಷ ವಾಸುದೇವ ಖಾರ್ವಿ ಎಚ್ಚರಿಕೆ ನೀಡಿದ್ದಾರೆ.
ಮರವಂತೆ ಮೀನುಗಾರಿಕಾ ಹೊರ ಬಂದರು ಸಮೀಪದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿನ ಸುಮಾರು 2-3 ಸಾವಿರ ಕುಟುಂಬಗಳ 10 ಸಾವಿರ ಮಂದಿ ಮೀನುಗಾರಿಕೆ ನಂಬಿಕೊಂಡಿದ್ದೇವೆ. ಮರವಂತೆ ಹೊರಬಂದರು ಮೊದಲ ಹಂತದ ಕಾಮಗಾರಿ ಅಪೂರ್ಣಗೊಂಡಿದ್ದು, ಅದನ್ನು ಪೂರ್ಣಗೊಳಿಸುವ ಸಲುವಾಗಿ ಸರಕಾರ 85 ಕೋಟಿ ರೂ. ನೀಡಿ ಮಂಜೂರಾತಿಗೊಳಿಸಿತ್ತು. ಅದರಂತೆ ಮೀನುಗಾರಿಕಾ ಇಲಾಖೆಯು 2020ರ ಎ.24ರಂದು ಟೆಂಡರ್ ಕರೆದು ಆ ಬಳಿಕ ಕಳೆದ ನವೆಂಬರ್ನಲ್ಲಿ ಮುಖ್ಯ ಮಂತ್ರಿಗಳು ಬಂದು ಕಾಮಗಾರಿಗೆ ಶಿಲನ್ಯಾಸ ನೆರವೇರಿಸಿದ್ದರು. ಆದರೆ ಈವರೆಗೂ ಕಾಮಗಾರಿ ಮಾತ್ರ ಆರಂಭಗೊಂಡಿಲ್ಲ ಎಂದರು.
ನಮ್ಮ ಮನವಿಗಳಿಗೆ ಸ್ಪಂದಿಸದ ಜನಪ್ರತಿನಿಧಿಗಳನ್ನು ಆರಿಸಿ ಕಳುಹಿಸುವುದರಲ್ಲಿ ಅರ್ಥವಿಲ್ಲ. ಹೀಗಾಗಿ ಮರವಂತೆಯ ಎಲ್ಲಾ ಮೀನುಗಾರರು ಈ ಬಾರಿಯ ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದೇವೆ ಎಂದು ಅವರು ತಿಳಿಸಿದರು.
ಮೀನುಗಾರ ಮುಖಂಡ ಮೋಹನ್ ಖಾರ್ವಿ ಮಾತನಾಡಿ, ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳು ಕೇವಲ ಭರವಸೆ ನೀಡುತ್ತದೆ. ಆದರೆ ಮೀನುಗಾರರ ಪರವಾಗಿ ಯಾರೂ ಕೆಲಸ ಮಾಡುತ್ತಿಲ್ಲ. ಬಿಜೆಪಿಗೆ ದೊಡ್ಡ ಶಕ್ತಿ ಕೊಡುವ ನಮ್ಮ ಸಮುದಾಯವನ್ನು ಕಡೆಗಣಿಸುತ್ತಿದೆ. ಜೂನ್ ತಿಂಗಳಲ್ಲಿ ತೂಫಾನ್ ಪ್ರಾರಂಭ ವಾಗುತ್ತದೆ. ತೂಫಾನ್ ಪ್ರಾರಂಭಗೊಂಡರೆ ಈಗಿರುವ ಬಂದರು ಕೊಚ್ಚಿ ಹೋಗಲಿದೆ. ಚುನಾವಣಾ ಹಿತದೃಷ್ಠಿಯಿಂದ ನಾವು ಮತದಾನ ಬಹಿಷ್ಕರಿಸುವುದು ತಪ್ಪು. ಆದರೆ ನಮ್ಮ ಬದುಕಿನ ಪ್ರಶ್ನೆ ಬಂದಾಗ ಚುನಾವಣೆ ಬಹಿಷ್ಕರಿಸದೇ ಬೇರೆ ದಾರಿ ನಮಗಿಲ್ಲ ಎಂದು ಹೇಳಿದರು.
ತೌಕ್ತೆ ಚಂಡಮಾರುತ ಬಂದು ಕಡಲ್ಕೊರೆತವಾದಾಗ ಸ್ವತಃ ರಾಜ್ಯದ ಮುಖ್ಯಮಂತ್ರಿಗಳು, ಗ್ರಹ ಸಚಿವರು ಈ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ನಮ್ಮ ಮನವಿಯನ್ನು ಸ್ವೀಕರಿಸಿದ್ದಾರೆ. ಇದು ಬಿಜೆಪಿಯ ಭದ್ರಕೋಟೆ. ಏನೇ ಆದರೂ ಬಿಜೆಪಿಗೆ ಮತ ಹಾಕುತ್ತೇವೆ ಎಂದು ನಂಬಿಕೊಂಡಿದ್ದಾರೆ. 2013ರಿಂದ ನಿರಂತರವಾಗಿ ಬಂದರು ಕುಸಿಯುತ್ತಿದೆ. ಇದು ಹೀಗೆಯೇ ಮುಂದುವರಿದರೆ ಇನ್ನು ಬಂದರು ಕಾಣಲಿಕ್ಕೆ ಸಿಗೋದಿಲ್ಲ. ಕ್ಷುಲ್ಲಕ ಕಾರಣಗಳನ್ನು ಮುಂದಿಟ್ಟು ಕೊಂಡು ಕಾಮಗಾರಿ ಚಾಲನೆಗೆ ಮೀನಾಮೇಶ ಎಣಿಸುತ್ತಿದ್ದಾರೆ. ಮೀನುಗಾಗರರೇ 25-30 ಲಕ್ಷ ಹಣ ಹಾಕಿ ಬಂದರೊಳಗೆ ಕೆರೆ ನಿರ್ಮಾಣ ಮಾಡಿ ಕೊಳ್ಳುತ್ತೇವೆ. ಮಾಡಿಲ್ಲವೆಂದರೆ ಬೇರೆ ಬಂದರುಗಳಿಗೆ ಹೋಗುವ ಸ್ಥಿತಿ ಇದೆ ಎಂದರು.
ಸಮಿತಿಯ ಮಾಜಿ ಅಧ್ಯಕ್ಷ ಚಂದ್ರ ಖಾರ್ವಿ, ವೆಂಕಟರಮಣ ಖಾರ್ವಿ, ಸೋಮಯ್ಯ ಖಾರ್ವಿ, ಉಪಾಧ್ಯಕ್ಷ ಶೇಖರ್ ಖಾರ್ವಿ, ಮಾರ್ಕೆಟಿಂಗ್ ಸಮಿತಿ ಅಧ್ಯಕ್ಷ ಶಂಕರ್ ಖಾರ್ವಿ, ಶ್ರೀಧರ್ ಖಾರ್ವಿ ಪತ್ರಿಕಾಗೋಷ್ಠಿಯಲ್ಲಿದ್ದರು.