ಕ್ಷೇತ್ರಲ್ಲಿದ್ದ ಗುತ್ತಿಗೆದಾರರನ್ನು ಸಿ.ಟಿ.ರವಿ ಊರು ಬಿಟ್ಟು ಓಡಿಸಿದ್ದಾರೆ: ಕಾಂಗ್ರೆಸ್ ಅಭ್ಯರ್ಥಿ ಎಚ್.ಡಿ.ತಮ್ಮಯ್ಯ

ಚಿಕ್ಕಮಗಳೂರು, ಎ.20: ಕ್ಷೇತ್ರದಲ್ಲಿ ಕಳೆದ 19 ವರ್ಷಗಳಿಂದ ಪ್ರಜಾಪ್ರಭುತ್ವದ ಕಗ್ಗೊಲೆ ಆಗಿತ್ತು. ಶಾಸಕ ಸಿ.ಟಿ.ರವಿ ಅವರು ಕ್ಷೇತ್ರಲ್ಲಿದ್ದ ಗುತ್ತಿಗೆದಾರರನ್ನು ಊರು ಬಿಟ್ಟು ಓಡಿಸಿದ್ದಾರೆ. ತಮ್ಮ ಭಾಮೈದನ ಮೂಲಕ ಎಲ್ಲ ಸರಕಾರಿ ಕಾಮಗಾರಿಗಳನ್ನು ಮಾಡಿಸಿದ್ದಾರೆ. ಸರಕಾರಿ ಅಧಿಕಾರಿಗಳು ಶಾಸಕರ ಬಳಿ ಹೋಗದೇ ಸಿ.ಟಿ.ರವಿ ಭಾಮೈದನ ಮನೆಗೆ ಹೋಗುತ್ತಿದ್ದರು ಎಂದರೇ ಸಿ.ಟಿ.ರವಿ ಕ್ಷೇತ್ರದಲ್ಲಿ ಎಂತಹ ದುರಾಡಳಿತ ನಡೆಸಿದ್ದಾರೆ ಎಂಬುದಕ್ಕೆ ಸಾಕ್ಷಿ ಬೇಕಾ ಎಂದು ಕಾಂಗ್ರೆಸ್ ಅಭ್ಯರ್ಥಿ ಎಚ್.ಡಿ.ತಮ್ಮಯ್ಯ ಸಿ.ಟಿ.ರವಿ ವಿರುದ್ಧ ವಾಗ್ದಾಳಿ ನಡೆಸಿದರು.
ಗುರುವಾರ ನಗರದಲ್ಲಿ ನಾಮಪತ್ರ ಸಲ್ಲಿಕೆಗೂ ಮುನ್ನ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ 20 ವರ್ಷಗಳಿಂದ ಶಾಸಕ ಸಿ.ಟಿ.ರವಿ ಹಾಗೂ ಅವರ ಹಿಂದಿರುವ ಕಾಣಾದ ಕೈಗಳು ಭ್ರಷ್ಟಾಚಾರ ನಡೆಸುತ್ತಿದ್ದರು. ದುರಾಡಳಿತಕ್ಕಾಗಿ ಆಡಳಿತ ವ್ಯವಸ್ಥೆಯನ್ನೇ ದುರುಪಯೋಗ ಪಡಿಸಿಕೊಂಡಿದ್ದರು. ಶಾಸಕ ಸಿ.ಟಿ.ರವಿ 20 ವರ್ಷಗಳ ಅವಧಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸಿದ್ದಾರೆ. ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲೂ ಭ್ರಷ್ಟಾಚಾರ ನಡೆಯುತ್ತಿರುವುದನ್ನು ಮತದಾರರ ಗಮನಕ್ಕೆ ತರುತ್ತೇನೆ. ಶಾಸಕರು ಪ್ರಾಮಾಣಿಕ ಎಂಬಂತೆ ನಡೆದುಕೊಳ್ಳುತ್ತಿರುವ ಮುಖವಾಡವನ್ನು ತೆಗೆಸುವ ಕೆಲಸ ಮಾಡುತ್ತೇನೆ. ಮರಿಬೇಡ, ಮೆರೆಯಬೇಡ, ಮುರಿಯಬೇಡ ಎಂದು ಗುರುಗಳೊಬ್ಬರು ಶಾಸಕರಿಗೆ ಹೇಳಿದ್ದ ಮಾತುಗಳನ್ನು ಗಣನೆಗೆ ತೆಗೆದುಕೊಂಡಿಲ್ಲ. ಕ್ಷೇತ್ರದಲ್ಲಿ 500ಗುತ್ತಿಗೆದಾರರ ಕುಟುಂಬ ಊರು ಬಿಟ್ಟಿದ್ದಾರೆ. ಸಿ.ಟಿ.ರವಿ ಬಡ ಗುತ್ತಿಗೆದಾರರ ಮನೆ ಮುರಿದಿದ್ದಾರೆ.
ಕ್ಷೇತ್ರದಲ್ಲಿ ಭಯ ಮುಕ್ತ ವಾತಾವರಣ ನಿರ್ಮಾಣ ಮಾಡುವುದರ ಜೊತೆಗೆ ಜನಪರ, ಬಡವರ ಬಂಧು, ದೀನ ದಲಿತರ ಸಹೋದರನಾಗಿ ಕೆಲಸ ಮಾಡಲು ಬದ್ದನಾಗಿದ್ದೇನೆ. ನನ್ನ ಯೋಜನೆಗಳಿಗೆ ಮತದಾರರು ಸಹಕಾರ ನೀಡಬೇಕು ಎಂದ ಅವರು, ಸಿ.ಟಿ.ರವಿ ಅವರಿಗೆ ಸೋಲಿ ಭೀತಿ ಆವರಿಸಿದೆ. ಚುನಾವಣೆ ಗೆಲ್ಲಲು ಮತದಾರರಿಗೆ ಸೀರೆ, ಹಣ ಹಂಚುತ್ತಿದ್ದಾರೆ. ರಾಜಮಾರ್ಗ, ರಾಮಮಾರ್ಗ ಬಿಟ್ಟು ವಾಮಮಾರ್ಗದ ಮೂಲಕ ಚುನಾವಣೆ ಎದುರಿಸುತ್ತಿದ್ದಾರೆ. ಅವರು ನಿಜವಾಗಿಯೂ ಕ್ಷೇತ್ರದಲ್ಲಿ ಜನಪರ ಕೆಲಸ ಮಾಡಿದ್ದರೇ ವಾಮಮಾರ್ಗ ತುಳಿದಿರುವುದು ಏಕೆ?, ವಾಮಮಾರ್ಗದ ಮೂಲಕ ಚುನಾವಣೆ ನಡೆಸಲ್ಲ ಎಂದು ನಾನು ದೇವರ ಮೇಲೆ ಆಣೆ ಮಾಡಿ ಚುನಾವಣೆ ಎದುರಿಸುತ್ತೇನೆ, ಸಿ.ಟಿ.ರವಿ ಕೂಡ ಆಣೆಮಾಡಲೀ, ಆಗ ಯಾರು ಗೆಲ್ಲುತ್ತಾರೆಂದು ನೋಡೋಣ ಎಂದು ಇದೇ ವೇಳೆ ಸವಾಲು ಹಾಕಿದರು.
ಮಾಜಿ ವಿಧಾನ ಪರಿಷತ್ ಸದಸ್ಯೆ ಗಾಯಿತ್ರಿಶಾಂತೇಗೌಡ ಮಾತನಾಡಿ, ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಎಚ್.ಡಿ ತಮ್ಮಯ್ಯ ನಾಮಪತ್ರ ಸಲ್ಲಿಸಿದ್ದು, ಪಕ್ಷದ ವರಿಷ್ಠರ ತೀರ್ಮಾನಕ್ಕೆ ಬದ್ಧರಾಗಿ ಜಿಲ್ಲಾ ಮುಖಂಡರು ಒಗ್ಗಟಿನಿಂದ ಈ ಚುನಾವಣೆಯಲ್ಲಿ ಕೆಲಸ ಮಾಡುವ ಮೂಲಕ ಅಭ್ಯರ್ಥಿ ಗೆಲುವಿಗೆ ಸಹಕರಿಸಬೇಕೆಂದು ವಿನಂತಿಸಿದರು.
ಬಿ.ಜೆ.ಪಿಯ ಭ್ರಷ್ಠಾಚಾರವನ್ನು ತೊಲಗಿಸಲು ಎಚ್.ಡಿ.ತಮ್ಮಯ್ಯನವರ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಅಪಾರವಾದ ಜನಸಾಗರ ತೀರ್ಮಾನ ಮಾಡಿದಂತೆ ಕಾಣುತ್ತಿದೆ. ಜನರ ನಿರೀಕ್ಷೆಯಂತೆ ಪಕ್ಷದ ಗೆಲುವು ನಿಶ್ಚಿತ. ಎಂ.ಎಲ್.ಸಿ ಚುನಾವಣೆಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ನ್ಯಾಯಾಲಯ ನನ್ನ ಪರವಾಗಿ ತೀರ್ಪು ನೀಡಿರುವುದು ಸಂತಸ ತಂದಿದೆ. ಎಮ್ಮೆಲ್ಸಿ ಚುನಾವಣೆಯಲ್ಲಿ ಆರು ಜನ ನಾಮಿನಿ ಸದಸ್ಯರು ನಿಯಮ ಉಲ್ಲಂಘಿಸಿ ಮತ ಹಾಕಿದ್ದರಿಂದ ಬಿ.ಜೆ.ಪಿ ಅಭ್ಯರ್ಥಿ ಗೆಲ್ಲಲು ಕಾರಣವಾಯಿತು. ವಿಚಾರಣೆ ನಡೆಸಿದ ನ್ಯಾಯಾಲಯ ಗುರುವಾರ ಎಂ.ಕೆ.ಪ್ರಾಣೇಶ್ ಅವರ ಅರ್ಜಿಯನ್ನು ವಜಾ ಮಾಡಿದೆ. ನಾನು ಎಂ.ಎಲ್.ಸಿ ಆಗಿ ಮುಂದುವರಿಯಲು ತಜ್ಞ ವಕೀಲರಿಂದ ಮಾಹಿತಿ ಪಡೆದು ಅಂತಿಮ ತೀರ್ಮಾನ ಕೈಗೊಳ್ಳುತ್ತೇನೆ ಎಂದರು.
ಮುಖಂಡರಾದ ಬಿ.ಎಚ್.ಹರೀಶ್, ಡಾ.ಡಿ.ಎಲ್ ವಿಜಯ್ಕುಮಾರ್, ಎ.ಐ.ಸಿ.ಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್, ಕೆ.ಪಿ.ಸಿ.ಸಿ ವಕ್ತಾರ ಎಚ್.ಎಚ್.ದೇವರಾಜ್, ಎ.ಎನ್.ಮಹೇಶ್, ಕೆ.ಮಹಮದ್, ಜೆ.ಬಿ.ಮಹೇಶ್, ಸಿ.ಎನ್.ಅಕ್ಮಲ್, ಸೈಯದ್ ಹನೀಫ್, ನಯಾಝ್ ಅಹಮದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ರೂಬಿನ್ ಮೊಸಸ್, ರವೀಶ್ ಬಸಪ್ಪ ಮತ್ತಿತರರು ಉಪಸ್ಥಿತರಿದ್ದರು.







