ಜ್ಞಾನವಾಪಿ ಮಸೀದಿ ಆವರಣದಲ್ಲಿ ʻವುಝುʼಗಾಗಿ ನೀರಿನ ಟಬ್ ವ್ಯವಸ್ಥೆ ಮಾಡಲು ಅಧಿಕಾರಿಗೆ ಸೂಚಿಸಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ: ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಮುಸ್ಲಿಮರಿಗೆ ʻವುಝುʼ (ಅಂಗಸ್ನಾನ) ಮಾಡಲು ನೀರು ತುಂಬಿದ ಸಾಕಷ್ಟು ಸಂಖ್ಯೆಯ ಪ್ಲಾಸ್ಟಿಕ್ ಟಬ್ಗಳ ಏರ್ಪಾಟು ಮಾಡುವಂತೆ ವಾರಣಾಸಿ ಜಿಲ್ಲಾ ಕಲೆಕ್ಟರ್ ಅವರಿಗೆ ಸುಪ್ರೀಂ ಕೋರ್ಟ್ ಇಂದು ನಿರ್ದೇಶನ ನೀಡಿದೆ.
ಮಸೀದಿ ಸಂಕೀರ್ಣದಲ್ಲಿ ನೀರಿನ ಲಭ್ಯತೆ ಕುರಿತಂತೆ ಕಲೆಕ್ಟರ್ ಏರ್ಪಾಟು ಮಾಡಲಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ಹೇಳಿಕೆಯನ್ನು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ ಎಸ್ ನರಸಿಂಹ ಅವರ ಪೀಠ ದಾಖಲಿಸಿಕೊಂಡಿತು.
ವುಝುಗಾಗಿ ಸೂಕ್ತ ಏರ್ಪಾಟುಗಳನ್ನು ನಡಸಲು ಸಂಬಂಧಿತರ ಸಭೆ ನಡೆಸುವಂತೆ ನ್ಯಾಯಾಲಯ ಈ ಹಿಂದೆ ಕಲೆಕ್ಟರ್ ಅವರಿಗೆ ಸೂಚಿಸಿತ್ತು.
ರಮಝಾನ್ ತಿಂಗಳಿನಲ್ಲಿ ವಾರಣಾಸಿಯ ಈ ಮಸೀದಿ ಸಂಕೀರ್ಣದಲ್ಲಿ ವುಝುಗಾಗಿ ಅನುಮತಿ ಕೋರಿ ಅಂಜುಮಾನ್ ಇಂತೆಝಮಿಯಾ ಮಸೀದಿ ಸಮಿತಿ ನ್ಯಾಯಾಲಯದ ಕದ ತಟ್ಟಿತ್ತು.
ಮಸೀದಿ ಆವರಣದ ಕೆಲವೊಂದು ಭಾಗಗಳಿಗೆ ಸೀಲ್ ಮಾಡಲಾಗಿರುವುದರಿಂದ ಭಕ್ತರಿಗೆ 'ವುಝು' ಸೌಲಭ್ಯ ಮತ್ತು ವಾಶ್ರೂಂ ಸೌಲಭ್ಯ ಒದಗಿಸಬೇಕೆಂದು ತನ್ನ ಕಳೆದ ವರ್ಷದ ಮೇ 20ರ ಆದೇಶವನ್ನು ಸುಪ್ರೀಂ ಕೋರ್ಟ್ ಉಲ್ಲೇಖಿಸಿದೆ.
ಈ ನಿಟ್ಟಿನಲ್ಲಿ ಸಭೆ ನಡೆಸುವುದಾಗಿ ಆಗ ಸಾಲಿಸಿಟರ್ ಜನರಲ್ ಭರವಸೆ ನೀಡಿದ್ದರು.
ಮಸೀದಿ ಆವರಣದಲ್ಲಿ ಸಂಚಾರಿ ಶೌಚಾಲಯಗಳನ್ನು ಒದಗಿಸುವುದಾದರೂ ಚಿಂತೆಯಿಲ್ಲ ಎಂಬ ಮಸೀದಿ ಆಡಳಿತ ಸಮಿತಿಯ ಹೇಳಿಕೆಯನ್ನೂ ಕೋರ್ಟ್ ದಾಖಲಿಸಿಕೊಂಡಿದೆ.
ಶಿವಲಿಂಗವೊಂದು ಪತ್ತೆಯಾಗಿದೆ ಎಂದು ಹೇಳಲಾದ ಮಸೀದಿ ಆವರಣದ ಭಾಗವನ್ನು ಮುಂದಿನ ಆದೇಶದ ತನಕ ರಕ್ಷಿಸಬೇಕೆಂದು ಕಳೆದ ವರ್ಷದ ನವೆಂಬರ್ 11ರಂದು ಉನ್ನತ ನ್ಯಾಯಾಲಯ ಸೂಚಿಸಿತ್ತು.