ಭಾರತದಲ್ಲಿ ಪತನಗೊಳ್ಳುತ್ತಿರುವ ಪ್ರಜಾಪ್ರಭುತ್ವ: ʼಕುರುಡುತನದಿಂದ ವರ್ತಿಸುತ್ತಿರುವ ಪಾಶ್ಚಾತ್ಯ ದೇಶಗಳುʼ
‘ವಾಶಿಂಗ್ಟನ್ ಪೋಸ್ಟ್’, ‘ಫೈನಾನ್ಶಿಯಲ್ ಟೈಮ್ಸ್’ ಪತ್ರಿಕೆಗಳ ಸಂಪಾದಕೀಯ

ಹೊಸದಿಲ್ಲಿ, ಎ. 21: ಮಾನಹಾನಿ ಪ್ರಕರಣವೊಂದರಲ್ಲಿ ತನ್ನನ್ನು ದೋಷಿ ಎಂಬುದಾಗಿ ಘೋಷಿಸುವ ಕೆಳ ನ್ಯಾಯಾಲಯವೊಂದರ ತೀರ್ಪಿಗೆ ತಡೆಯಾಜ್ಞೆ ನೀಡಬೇಕು ಎಂದು ಕೋರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲ್ಲಿಸಿರುವ ಅರ್ಜಿಯನ್ನು ಗುಜರಾತ್ ನ ಸೂರತ್ ನ ಸೆಷನ್ಸ್ ನ್ಯಾಯಾಲಯವು ತಿರಸ್ಕರಿಸಿತು ಮತ್ತು ಪ್ರತ್ಯೇಕ ಪ್ರಕರಣವೊಂದರಲ್ಲಿ, 2002ರ ಗುಜರಾತ್ ಗಲಭೆಗಳಿಗೆ ಸಂಬಂಧಿಸಿದ ನರೋದಾ ಗಾಮ್ ಹತ್ಯಾಕಾಂಡ ಪ್ರಕರಣದಲ್ಲಿ ಅಹ್ಮದಾಬಾದ್ನ ವಿಶೇಷ ನ್ಯಾಯಾಲಯವೊಂದು ಎಲ್ಲಾ ಆರೋಪಿಗಳನ್ನು ದೋಷಮುಕ್ತಗೊಳಿಸಿತು. ಈ ಎರಡೂ ತೀರ್ಪುಗಳು ಗುರುವಾರ ಒಂದೇ ದಿನ ಪ್ರಕಟಗೊಂಡವು.
ಅದೇ ದಿನ ಎರಡು ವಿದೇಶಿ ಪತ್ರಿಕೆಗಳು- ಬ್ರಿಟನ್ ನ ಫೈನಾನ್ಶಿಯಲ್ ಟೈಮ್ಸ್ ಮತ್ತು ಅಮೆರಿಕದ ವಾಶಿಂಗ್ಟನ್ ಪೋಸ್ಟ್- ತಮ್ಮ ಸಂಪಾದಕೀಯಗಳಲ್ಲಿ ಭಾರತದಲ್ಲಿ ‘‘ಪತನಗೊಳ್ಳುತ್ತಿರುವ ಪ್ರಜಾಪ್ರಭುತ್ವ’’ದ ಬಗ್ಗೆ ಕಳವಳ ವ್ಯಕ್ತಪಡಿಸಿವೆ.
ಅದೇ ವೇಳೆ, ನರೇಂದ್ರ ಮೋದಿ ಸರಕಾರದ ಕೃತ್ಯಗಳ ಬಗ್ಗೆ ‘‘ವಿಷಾದನೀಯವೆನಿಸುವಷ್ಟು ಕುರುಡುತನದಿಂದ ವರ್ತಿಸುತ್ತಿರುವ’’ ಪಾಶ್ಚಾತ್ಯ ದೇಶಗಳನ್ನು ಪತ್ರಿಕೆಗಳು ತರಾಟೆಗೆ ತೆಗೆದುಕೊಂಡಿವೆ. ಪಾಶ್ಚಾತ್ಯ ದೇಶಗಳು ಮೋದಿ ಸರಕಾರವನ್ನು ಚೀನಾವನ್ನು ಎದುರಿಸಲು ಬಳಸಿಕೊಳ್ಳುತ್ತಿವೆ ಎಂದು ಸಂಪಾದಕೀಯಗಳು ಹೇಳಿವೆ.
ಮಾರ್ಚ್ ನಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಗಿನಾ ರೈಮೊಂಡೊ, ಮೋದಿಯನ್ನು ‘‘ನಂಬಲಸಾಧ್ಯ ದಾರ್ಶನಿಕ’’ ಮತ್ತು ‘‘ಅತ್ಯಂತ ಜನಪ್ರಿಯ ಜಾಗತಿಕ ನಾಯಕ’’ ಎಂಬುದಾಗಿ ಬಣ್ಣಿಸಿದ್ದರು.
ರೈಮೊಂಡೊ ಅವರ ಹೇಳಿಕೆಗಳನ್ನು ಪ್ರಸ್ತಾಪಿಸುತ್ತಾ, ಕ್ಸಿ ಜಿನ್ಪಿಂಗ್ (ಚೀನಾ ಅಧ್ಯಕ್ಷ) ಬಗ್ಗೆ ಎಷ್ಟು ದೊಡ್ಡ ಧ್ವನಿಯಲ್ಲಿ ಅಮೆರಿಕ ಮಾತನಾಡುತ್ತಿದ್ದೆಯೋ, ಅಷ್ಟೇ ದೊಡ್ಡ ಧ್ವನಿಯಲ್ಲಿ ಮೋದಿಯ ‘‘ಪ್ರಜಾಪ್ರಭುತ್ವದ ಅರ್ಧಪತನ’’ದ ಬಗ್ಗೆಯೂ ಮಾತನಾಡಬೇಕು ಎಂದು ‘ವಾಶಿಂಗ್ಟನ್ ಪೋಸ್ಟ್’ ಬರೆದಿದೆ.
‘ಫೈನಾನ್ಶಿಯಲ್ ಟೈಮ್ಸ್’ ತನ್ನ ಸಂಪಾದಕೀಯದಲ್ಲಿ, ‘‘ಉದ್ಯಮಿಗಳು ಮತ್ತು ಹೂಡಿಕೆದಾರರು ಚೀನಾದಿಂದ ಹೊರಗೆ ಅಭಿವೃದ್ಧಿ ಮತ್ತು ವೈವಿಧ್ಯತೆಗಳಿಗಾಗಿ ಭಾರತದಲ್ಲಿ ಅವಕಾಶಗಳನ್ನು ನೋಡುತ್ತಿದ್ದಾರೆ. ಆದರೆ, ದುರ್ಬಲಗೊಳ್ಳುತ್ತಿರುವ ಕಾನೂನಿನ ಆಡಳಿತವು ಅವರನ್ನು ಎರಡು ಬಾರಿ ಯೋಚಿಸುವಂತೆ ಮಾಡಿದೆ’’ ಎಂದು ಬರೆದಿದೆ.
ರಾಹುಲ್ ಗಾಂಧಿಯನ್ನು ದೋಷಿ ಎಂದು ಹೇಳುವ ತೀರ್ಪಿಗೆ ತಡೆ ನೀಡಲು ಸೂರತ್ನ ನ್ಯಾಯಾಲಯವು ನಿರಾಕರಿಸಿರುವುದು ಸೇರಿದಂತೆ, ರಾಜಕೀಯ ಎದುರಾಳಿಗಳು ಮತ್ತು ಟೀಕಾಕಾರರನ್ನು ಮಣಿಸಲು ಮೋದಿ ಸರಕಾರವು ಬಳಸುತ್ತಿದೆಯೆನ್ನಲಾದ ವಿವಿಧ ತಂತ್ರಗಾರಿಕೆಗಳನ್ನು ‘ಫೈನಾನ್ಶಿಯಲ್ ಟೈಮ್ಸ್’ ಪಟ್ಟಿ ಮಾಡಿದೆ.
‘‘ಮೋದಿಯ ಬೆಂಬಲಿಗರು ಮಾಧ್ಯಮಗಳು, ನಾಗರಿಕ ಸಮಾಜ ಮತ್ತು ರಾಜಕೀಯದಲ್ಲಿ ಮುಕ್ತ ಅಭಿವ್ಯಕ್ತಿಯನ್ನು ಹತ್ತಿಕ್ಕಿದ್ದಾರೆ. ಅವರು ಮುಸ್ಲಿಮ್ ಅಲ್ಪಸಂಖ್ಯಾತರೊಂದಿಗೆ ಧಾರ್ಮಿಕ ಸಂಘರ್ಷಗಳನ್ನು ಹುಟ್ಟು ಹಾಕಿದ್ದಾರೆ’’ ಎಂದು ಅದರ ಸಂಪಾದಕೀಯ ಹೇಳಿದೆ.
ಸ್ವೀಡನ್ ನ ವಿಚಾರ ವೇದಿಕೆ ಸಂಸ್ಥೆ ‘ವೆರೈಟೀಸ್ ಆಫ್ ಡೆಮಾಕ್ರಸಿ ಇನ್ಸ್ಟಿಟ್ಯೂಟ್’ ಭಾರತವನ್ನು ‘‘ಚುನಾವಣಾ ಸರ್ವಾಧಿಕಾರ’’ ಎಂಬುದಾಗಿ ಬಣ್ಣಿಸಿದೆ ಎಂದು ‘ಫೈನಾನ್ಶಿಯಲ್ ಟೈಮ್ಸ್’ ಹೇಳಿದೆ.
‘ಮಾಧ್ಯಮಗಳ ಬಾಯಿ ಮುಚ್ಚಿಸಲು ಚೀನಾ, ರಶ್ಯಗಳಲ್ಲಿ ಅನುಸರಿಸುವ ಬೆದರಿಕೆ ತಂತ್ರಗಳ ಬಳಕೆ’
ಪತ್ರಿಕಾ ಸ್ವಾತಂತ್ರದ ಮೇಲೆ ನಡೆಯುತ್ತಿರುವ ದಾಳಿಗಳ ಬಗ್ಗೆ ಬರೆದಿರುವ ಪತ್ರಿಕೆಯು, 2002ರ ಗುಜರಾತ್ ಗಲಭೆಯಲ್ಲಿ ಮೋದಿ ವಹಿಸದ್ದಾರೆನ್ನಲಾದ ಪಾತ್ರದ ಬಗ್ಗೆ ಸಾಕ್ಷಚಿತ್ರವೊಂದನ್ನು ನಿರ್ಮಿಸಿರುವ ಬಿಬಿಸಿಯ ದಿಲ್ಲಿ ಮತ್ತು ಮುಂಬೈ ಕಚೇರಿಗಳಲ್ಲಿ ಆದಾಯ ತೆರಿಗೆ ಇಲಾಖೆ ನಡೆಸಿದ ಸಮೀಕ್ಷೆಗಳನ್ನು ಉಲ್ಲೇಖಿಸಿದೆ.
‘‘ಸರಕಾರವು ಮಾಧ್ಯಮ ಸಂಸ್ಥೆಗಳ ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಂಡು ಆ ಮಾಧ್ಯಮಗಳ ಮೇಲೆ ಅಸಾಧಾರಣ ಹಿಡಿತವನ್ನು ಸಾಧಿಸಿದೆ. ಹಾಗಾಗಿ, ಸರಕಾರದ ಪರ ನಿಲುವನ್ನು ತಳೆಯುವಂತೆ ಸಂಪಾದಕರ ಮೇಲೆ ಒತ್ತಡ ಹೇರಲಾಗುತ್ತಿದೆ’’ ಎಂದು ಅದು ಹೇಳಿದೆ.
ಎನ್ಸಿಇಆರ್ಟಿ ಪಠ್ಯಪುಸ್ತಕಗಳಲ್ಲಿ ಇತ್ತೀಚೆಗೆ ಮಾಡಲಾಗಿರುವ ಬದಲಾವಣೆಗಳು ‘‘ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವದ ಘನತೆಯನ್ನು ಕುಗ್ಗಿಸುವ ಬೆಳವಣಿಗೆಯಾಗಿದೆ’’ ಎಂದು ‘ದ ವಾಶಿಂಗ್ಟನ್ ಪೋಸ್ಟ್’ ಹೇಳಿದೆ.
‘‘ಆರೋಗ್ಯಕರ ಪ್ರಜಾಪ್ರಭುತ್ವವು ತನ್ನ ಸಹನೀಯವಲ್ಲದ ಘಟನೆಗಳನ್ನು ಮರೆಮಾಚದೆ ತನ್ನ ಇತಿಹಾಸವನ್ನು ಮರುಪರಿಶೀಲನೆಗೆ ಒಳಪಡಿಸಲು ಸಿದ್ಧವಾಗಿರಬೇಕು’’ ಎಂದು ಅದು ಅಭಿಪ್ರಾಯಪಟ್ಟಿದೆ.
ಬಿಬಿಸಿ ಕಚೇರಿಗಳಲ್ಲಿ ನಡೆದ ಶೋಧಗಳನ್ನೂ ವಾಶಿಂಗ್ಟನ್ ಪೋಸ್ಟ್ ಟೀಕಿಸಿದೆ. ‘‘ಸುದ್ದಿ ಮಾಧ್ಯಮಗಳ ಬಾಯಿ ಮುಚ್ಚಿಸಲು ಚೀನಾ, ರಶ್ಯ ಮತ್ತು ಇತರ ಸರ್ವಾಧಿಕಾರದ ದೇಶಗಳಲ್ಲಿ ಸಾಮಾನ್ಯವಾಗಿ ಅನುಸರಿಸಲಾಗುತ್ತಿರುವ ಬೆದರಿಕೆ ತಂತ್ರ ಇದಾಗಿದೆ’’ ಎಂದು ಅದು ಬಣ್ಣಿಸಿದೆ.







