ದಿಲ್ಲಿಯಲ್ಲಿ ದರೋಡೆ ಪ್ರಕರಣ: ನಾಲ್ವರು ಪೊಲೀಸರ ಸಹಿತ ಐವರ ಬಂಧನ
ಹೊಸದಿಲ್ಲಿ: ನೈಋತ್ಯ ದಿಲ್ಲಿಯ ಸಾಗರ್ಪುರ ಪ್ರದೇಶದಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ದಿಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಆರೋಪಿಗಳನ್ನು ದಿಲ್ಲಿ ಪೊಲೀಸ್ ಸಿಬ್ಬಂದಿ ವಿಜಯ್ ಶರ್ಮಾ, ದೀಪಕ್ ಯಾದವ್, ಮಂಜೇಶ್ ರಾಣಾ ಹಾಗೂ ಅಂಕಿತ್ ಕಸಾನಾ ಮತ್ತು ರೋಹಿಣಿ ನಿವಾಸಿ ಮನೀಶ್ ರೈ ಎಂದು ಗುರುತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಬುಧವಾರ ಹಾಗೂ ಗುರುವಾರ ಮಧ್ಯರಾತ್ರಿ ರಜನೀಶ್ ಎಂಬ ವ್ಯಕ್ತಿಯ ನಿವಾಸದಲ್ಲಿ ದರೋಡೆ ನಡೆದಿದೆ. ನಾಲ್ವರು ತಮ್ಮ ಮನೆಗೆ ನುಗ್ಗಿ ಬೆದರಿಸಿ ಸುಮಾರು 10.40 ಲಕ್ಷ ರೂ. ನಗದು ದೋಚಿ ಪರಾರಿಯಾಗಿದ್ದಾರೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.
ರಜನೀಶ್ ಅವರ ಹೇಳಿಕೆಯ ಮೇರೆಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 394 ಅಡಿಯಲ್ಲಿ ದರೋಡೆ ಪ್ರಕರಣವನ್ನು ದಾಖಲಿಸಲಾಗಿದೆ ಹಾಗೂ ತನಿಖೆಯ ಸಮಯದಲ್ಲಿ ನಾಲ್ವರು ದಿಲ್ಲಿ ಪೊಲೀಸ್ ಸಿಬ್ಬಂದಿಯನ್ನು ವಶಕ್ಕೆ ಪಡೆದು ನಂತರ ಬಂಧಿಸಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿ ಪೊಲೀಸರ ವಿಚಾರಣೆಯಿಂದ ಮನೀಶ್ ರೈ, ರಜನೀಶ್ ಅವರ ಮಾಜಿ ಉದ್ಯೋಗಿ ಎಂದು ತಿಳಿದುಬಂದಿದೆ.