ಕಾಂಗ್ರೆಸ್ ಸೇರಿದ ಒಂದೇ ದಿನಕ್ಕೆ ಸಚಿವ ಆನಂದ್ ಸಿಂಗ್ ಸಹೋದರಿಗೆ ಪ್ರಧಾನ ಕಾರ್ಯದರ್ಶಿ ಹುದ್ದೆ

ಬೆಂಗಳೂರು: ವಿಜಯನಗರದ ಬಿಜೆಪಿ ಟಿಕೆಟ್ ತಪ್ಪಿದ ಹಿನ್ನೆಲೆ ಅಸಮಾಧಾನಗೊಂಡು ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರಿದ ಒಂದೇ ದಿನಕ್ಕೆ ಅರಣ್ಯ ಸಚಿವ ಆನಂದ್ ಸಿಂಗ್ ಸಹೋದರಿ ರಾಣಿ ಸಂಯುಕ್ತ ಸಿಗ್ ಅವರಿಗೆ ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸ್ಥಾನ ನೀಡಲಾಗಿದೆ.
ಈ ಕುರಿತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಆದೇಶ ಹೊರಡಿಸಿದ್ದಾರೆ.
ಇನ್ನು ಉಪಾಧ್ಯಕ್ಷರಾಗಿ ಗಂಗಾಧರ ಗೌಡ, ಬಿ. ಗೋಪಾಲ್ ನೇಮಕವಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ರಾಣಿ ಸಂಯುಕ್ತ ಜತೆಗೆ ಟಿ. ನಾಗೇಶ್, ಪದ್ಮರಾಜ ರಾಮಯ್ಯ, ಶಿವಣ್ಣ ಪಟೇಲ್ ನೇಮಿಸಲಾಗಿದೆ.
ರಾಜ್ಯ ಕಾರ್ಯದರ್ಶಿಯಾಗಿ ಡಾ. ಬಿ.ಸಿ. ಮುದ್ದಗಂಗಾಧರ್ ಹಾಗೂ ಕೆ. ಅಸ್ಲಂ ಪಾಷಾ ನೇಮಕವಾಗಿದ್ದಾರೆ. ರಾಜ್ಯ ವಕ್ತಾರರಾಗಿ ನಟಿ ಭಾವನಾ ರಾಮಣ್ಣ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ರೇಣುಕಾ ಚಿದಂಬರಂ ಅವರನ್ನು ನೇಮಕ ಮಾಡಲಾಗಿದೆ.
ರಾಣಿ ಸಂಯುಕ್ತ ವಿಜಯನಗರದಲ್ಲಿ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಇಲ್ಲಿ ಸಚಿವ ಆನಂದಸಿಂಗ್ ಪುತ್ರ ಸಿದ್ದಾರ್ಥ್ ಸಿಂಗ್ ಗೆ ಬಿಜೆಪಿ ಟಿಕೆಟ್ ನೀಡಿದೆ. ಇದರಿಂದ ಅಸಮಾಧಾನಗೊಂಡಿದ್ದ ರಾಣಿ ಸಂಯುಕ್ತ ಜೈರಾಮ್ ರಮೇಶ್ ಹಾಗೂ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಸಮ್ಮುಖದಲ್ಲಿ ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ.