ಕಾಮಿಡಿಯನ್ ಮುನವ್ವರ್ ಫಾರೂಕಿಗೆ ಜಾಮೀನು ಮಂಜೂರುಗೊಳಿಸಿದ ಸುಪ್ರೀಂ ಕೋರ್ಟ್
ಎಲ್ಲಾ ದೂರುಗಳು ಇಂದೋರ್ ನ್ಯಾಯಾಲಯಕ್ಕೆ ವರ್ಗಾವಣೆ
ಹೊಸದಿಲ್ಲಿ: ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ್ದಾರೆಂದು ಆರೋಪಿಸಿ ಮಧ್ಯಪ್ರದೇಶ ಪೊಲೀಸರು ದಾಖಲಿಸಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಖ್ಯಾತ ಕಾಮಿಡಿಯನ್ ಮುನವ್ವರ್ ಫಾರೂಕಿ ಅವರಿಗೆ ಸುಪ್ರೀಂ ಕೋರ್ಟ್ ಇಂದು ಜಾಮೀನು ಮಂಜೂರುಗೊಳಿಸಿದೆ.
ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಹಾಗೂ ಸಂಜಯ್ ಕರೋಲ್ ಅವರ ಪೀಠ ಮುನಾವರ್ ಅವರ ವಿರುದ್ಧ ಇರುವ ಎಲ್ಲಾ ದೂರುಗಳನ್ನು ಒಟ್ಟುಗೂಡಿಸಿ ಅವುಗಳನ್ನು ಇಂದೋರ್ ನ್ಯಾಯಾಲಯಕ್ಕೆ ವರ್ಗಾಯಿಸಿದೆ.
ಮೂರು ವಾರಗಳ ಕಾಲ ದಿಲ್ಲಿ ಪೊಲೀಸರ ವಾರಂಟ್ಗಳಿಂದಲೂ ಫಾರೂಕಿ ಅವರಿಗೆ ಸುಪ್ರೀಂ ಕೋರ್ಟ್ ರಕ್ಷಣೆ ನೀಡಿದೆ.
ಮಧ್ಯಪ್ರದೇಶ ಪೊಲೀಸರು ದಾಖಲಿಸಿದ್ದ ಪ್ರಕರಣವನ್ನು ಪ್ರಶ್ನಿಸಿ ಹಾಗೂ ತಮ್ಮ ವಿರುದ್ಧದ ಕೇಸ್ ಅನ್ನು ರದ್ದುಗೊಳಿಸುವಂತೆ ಕೋರಿ ಮುನಾವರ್ ಸುಪ್ರೀಂ ಕೋರ್ಟಿನ ಕದ ತಟ್ಟಿದ್ದರು.
ಇಂದೋರ್ ನಗರದಲ್ಲಿ ನಡೆದ ಸ್ಟ್ಯಾಂಡ್-ಅಪ್ ಶೋ ಒಂದರಲ್ಲಿ ಹಿಂದೂ ದೇವರುಗಳಿಗೆ ಅವಮಾನಿಸಿದ್ದಾರೆಂಬ ಆರೋಪದಲ್ಲಿ ಮಧ್ಯ ಪ್ರದೇಶ ಪೊಲೀಸರು ಅವರನ್ನು ಜನವರಿ 1, 2021 ರಂದು ಬಂಧಿಸಿದ್ದರು. ಹಿಂದ್ ರಕ್ಷಕ್ ಸಂಘಟನೆಯ ಅಧ್ಯಕ್ಷ ಏಕಲವ್ಯ ಸಿಂಗ್ ಗೌರ್ ಎಂಬಾತ ದಾಖಲಿಸಿದ್ದ ದೂರಿನ ಆಧಾರದಲ್ಲಿ ಈ ಪ್ರಕರಣ ದಾಖಲಾಗಿತ್ತು.
ಫಾರೂಕಿ ಅವರ ಜಾಮೀನು ಅರ್ಜಿಯನ್ನು ಆರಂಭದಲ್ಲಿ ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿದ ನಂತರ ಅವರು ಮಧ್ಯ ಪ್ರದೇಶ ಹೈಕೋರ್ಟ್ ಕದ ತಟ್ಟಿದ್ದರೂ ಹೈಕೋರ್ಟ್ ಕೂಡ ಜಾಮೀನು ನಿರಾಕರಿಸಿತ್ತು.
ಉತ್ತರ ಪ್ರದೇಶ ಪೊಲೀಸರು ದಾಖಲಿಸಿದ್ದ ಪ್ರತ್ಯೇಕ ಪ್ರಕರಣದಲ್ಲಿ ಫಾರೂಕಿ ಅವರಿಗೆ ಮಧ್ಯಂತರ ಜಾಮೀನನ್ನು ಸುಪ್ರೀಂ ಕೋರ್ಟ್ ಫೆಬ್ರವರಿ 2021 ರಲ್ಲಿ ನೀಡಿತ್ತಲ್ಲದೆ ಉತ್ತರ ಪ್ರದೇಶ ಪೊಲೀಸರ ವಾರಂಟ್ಗೂ ತಡೆ ಹೇರಿತ್ತು.
ಇಂದು ಮಧ್ಯ ಪ್ರದೇಶದಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಮಂಜೂರುಗೊಳಿಸಿದ ಸುಪ್ರೀಂ ಕೋರ್ಟ್, ಅದೇ ಸಮಯ ಕಾಮಿಡಿಯನ್ ಬಂಧನದ ವೇಳೆ ಅರ್ಣೇಶ್ ಕುಮಾರ್-ಬಿಹಾರ ಸರ್ಕಾರ ನಡುವಿನ ಪ್ರಕರಣದಲ್ಲಿ 2014 ರಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವನ್ನು ಅನುಸರಿಸಿಲ್ಲ ಹಾಗೂ ಕ್ರಿಮಿನಲ್ ದಂಡ ಸಂಹಿತೆಯ ಸೆಕ್ಷನ್ 41 ನಿಬಂಧನೆಗೆ ಬದ್ಧವಾಗಿರಲಿಲ್ಲ ಎಂದು ಹೇಳಿದೆ.