ಹಾಗಾದರೆ ಅವರನ್ನು ಯಾರೂ ಕೊಲ್ಲಲಿಲ್ಲ?: ನರೋಡಾಗಾಮ್ ಆರೋಪಿಗಳ ಖುಲಾಸೆ ಬಗ್ಗೆ ಪ್ರತ್ಯಕ್ಷದರ್ಶಿ ಪ್ರಶ್ನೆ
ಹೊಸದಿಲ್ಲಿ: ‘ಪ್ರಾಮಾಣಿಕವಾಗಿ ಹೇಳಬೇಕೆಂದರೆ ನನಗೆ ಮಾತುಗಳೇ ಹೊರಡುತ್ತಿಲ್ಲ. ಅಂದು ನರೋಡಾ ಗಾಮ್ನಲ್ಲಿ 11 ಜನರು ಕೊಲ್ಲಲ್ಪಟ್ಟಿದ್ದರು. ಗುಂಪು 10ರ ಹರೆಯದ ಬಾಲಕಿ ಸೇರಿದಂತೆ ಅವರಲ್ಲಿ ಐವರನ್ನು ನನ್ನ ಕಣ್ಣುಗಳ ಎದುರೇ ಕೊಚ್ಚಿ ಕೊಂದಿತ್ತು. ಅದನ್ನು ಮಾಡಿದವರ ಮುಖಗಳು, ಅವರು ಧರಿಸಿದ್ದ ಬಟ್ಟೆಗಳು, ಅವರು ಹಿಡಿದುಕೊಂಡಿದ್ದ ಶಸ್ತ್ರಗಳು ಇವೆಲ್ಲವೂ ಈಗಲೂ ನನಗೆ ನೆನಪಿದೆ. ಆದರೆ ನ್ಯಾಯಾಲಯದ ಪ್ರಕಾರ ಅಂದು ಏನೂ ನಡೆದಿರಲಿಲ್ಲ, ಅವರನ್ನು ಯಾರೂ ಕೊಂದಿರಲಿಲ್ಲ, ಯಾರೂ ನಮ್ಮ ಮನೆಗಳನ್ನು ಸುಟ್ಟು ಹಾಕಿರಲಿಲ್ಲ. ಪ್ರಕರಣದಲ್ಲಿ ನಾನು ಪ್ರಾಸಿಕ್ಯೂಷನ್ ಸಾಕ್ಷಿಯಾಗಿದ್ದರಿಂದ ಹಲವಾರು ಬೆದರಿಕೆಗಳನ್ನು ನಾನು ಎದುರಿಸಿದ್ದೆ. ಪ್ರಕರಣದಿಂದ ಹಿಂದೆ ಸರಿಯುವಂತೆ, ಇಲ್ಲದಿದ್ದರೆ ನನ್ನನ್ನು ಕೊಲ್ಲಲಾಗುವುದಾಗಿ ಹಲವಾರು ಕರೆಗಳು ನನಗೆ ಬಂದಿದ್ದವು. ಆದರೆ ಈ 13 ವರ್ಷಗಳಲ್ಲಿ ಪ್ರಕರಣದಲ್ಲಿ ಒಂದೇ ಒಂದು ವಿಚಾರಣೆಯನ್ನು ನಾನು ತಪ್ಪಿಸಿಕೊಂಡಿರಲಿಲ್ಲ’ ಗುಜರಾತ್ ದಂಗೆಗಳಲ್ಲಿ ಬದುಕುಳಿದಿರುವ, ನರೋಡಾಗಾಮ್ ನರಮೇಧದ ಪ್ರತ್ಯಕ್ಷದರ್ಶಿಯಾಗಿದ್ದ ಇಮ್ತಿಯಾಝ್ ಕುರೇಶಿ ಅವರು ಹೇಳಿದ್ದಾರೆ. ಕುರೇಶಿ ಆಗ 30ರ ಹರೆಯದವರಾಗಿದ್ದರು.
(Photo: The Quint)
ಗೋಧ್ರಾದಲ್ಲಿ ಸಾಬರಮತಿ ಎಕ್ಸ್ಪ್ರೆಸ್ ರೈಲಿನ ಬೋಗಿಯು ಬೆಂಕಿಗೆ ಆಹುತಿಯಾದ ಬಳಿಕ 2002, ಫೆ.28ರಂದು ಗುಜರಾತನಾದ್ಯಂತ ಕೋಮುಗಲಭೆಗಳು ಭುಗಿಲೆದ್ದಿದ್ದವು. ರಾಜ್ಯ ಸರಕಾರದ ಅಧಿಕೃತ ಅಂಕಿಅಂಶಗಳಂತೆ 790 ಮುಸ್ಲಿಮರು ಮತ್ತು 254 ಹಿಂದುಗಳು ಸೇರಿದಂತೆ 1,044 ಜನರು ಹಿಂಸಾಚಾರಗಳಲ್ಲಿ ಕೊಲ್ಲಲ್ಪಟ್ಟಿದ್ದರು. ಈ ಪೈಕಿ 11 ಸಾವುಗಳು ಅಹ್ಮದಾಬಾದ್ನ ನರೋಡಾ ಗಾಮ್ ಬಡಾವಣೆಯಿಂದ ವರದಿಯಾಗಿದ್ದವು.
ಗಲಭೆಗಳ ಬಳಿಕ ತ್ವರಿತ ದೈನಂದಿನ ವಿಚಾರಣೆಗಾಗಿ ಆದೇಶಿಸಲಾಗಿದ್ದ ಗುಜರಾತಿನಲ್ಲಿಯ ಒಂಭತ್ತು ಪ್ರಕರಣಗಳಲ್ಲಿ ನರೋಡಾ ಗಾಮ್ ಪ್ರಕರಣವು ಒಂದಾಗಿತ್ತು. ಸರ್ವೋಚ್ಚ ನ್ಯಾಯಾಲಯದ ಮೇಲ್ವಿಚಾರಣೆಯಡಿ ಈ ಪ್ರಕರಣಗಳ ವಿಚಾರಣೆಯನ್ನು ನಿಯೋಜಿತ ನ್ಯಾಯಾಲಯಗಳಿಗೆ ಒಪ್ಪಿಸಲಾಗಿತ್ತು.
ಪ್ರಕರಣ ದಾಖಲಾದ 13 ವರ್ಷಗಳ ನಂತರ ಮತ್ತು ಘಟನೆ ನಡೆದು 21 ವರ್ಷಗಳಾದ ಬಳಿಕ ಎಪ್ರಿಲ್ 20ರಂದು ಅಹ್ಮದಾಬಾದ್ನ ವಿಶೇಷ ನ್ಯಾಯಾಲಯವು ಮಾಜಿ ಬಿಜೆಪಿ ಶಾಸಕಿ ಮಾಯಾ ಕೊಡ್ನಾನಿ ಮತ್ತು ಮಾಜಿ ಬಜರಂಗ ದಳ ನಾಯಕ ಬಾಬು ಬಜರಂಗಿ ಸೇರಿದಂತೆ ನರೋಡಾ ಗಾಮ್ ಪ್ರಕರಣದ ಎಲ್ಲ 69 ಆರೋಪಿಗಳನ್ನು ಖುಲಾಸೆಗೊಳಿಸಿದೆ.
ಪ್ರಕರಣದಲ್ಲಿಯ ಒಟ್ಟು 86 ಆರೋಪಿಗಳ ಪೈಕಿ 17 ಜನರು ವಿಚಾರಣೆಯ ಅವಧಿಯಲ್ಲಿ ಮೃತಪಟ್ಟಿದ್ದರು. ಸುಮಾರು 182 ಪ್ರಾಸಿಕ್ಯೂಷನ್ ಸಾಕ್ಷಿಗಳ ವಿಚಾರಣೆಯನ್ನು ನಡೆಸಲಾಗಿತ್ತು.
ನ್ಯಾಯಾಲಯದ ತೀರ್ಪು ಪ್ರಕಟಗೊಂಡ ಬಳಿಕ ಸುದ್ದಿ ಜಾಲತಾಣ ‘thequint.com’ ಕುರೇಶಿಯನ್ನು ನರೋಡಾ ಗಾಮ್ ನಲ್ಲಿಯ ಆತನ ಮನೆಯಲ್ಲಿ ಭೇಟಿಯಾಗಿ ದಂಗೆಗಳ ಕುರಿತು ಮಾತನಾಡಿತ್ತು. ಅಂದಿನ ಭಯಾನಕತೆಯನ್ನು ನೆನೆಸಿಕೊಂಡಿದ್ದ ಕುರೇಶಿ ಹೇಳಿದ್ದರ ಸಾರಾಂಶವಿಲ್ಲಿದೆ:
ಗೋಧ್ರಾ ಘಟನೆಯ ಬಳಿಕ ರಾಜ್ಯಾದ್ಯಂತ ಉದ್ವಿಗ್ನತೆ ಮನೆ ಮಾಡಿತ್ತು, ಅಹ್ಮದಾಬಾದ್ನಲ್ಲಿ ಬಂದ್ ಘೋಷಿಸಲಾಗಿತ್ತು. ನಾವು ಚಿಂತೆಗೊಳಗಾಗಿದ್ದೆವು ನಿಜ, ಆದರೆ ಭಯ ಪಡುವ ಅಗತ್ಯವಿಲ್ಲ ಎಂದು ನಮಗೆ ನಾವೇ ಹೇಳಿಕೊಂಡಿದ್ದೆವು. ಫೆ.28ರಂದು ಬೆಳಿಗ್ಗೆ ಏಕಾಏಕಿ ಪರಿಸ್ಥಿತಿಯು ನಿಯಂತ್ರಣ ಮೀರಿತ್ತು. ಗುಂಪೊಂದು ನಮ್ಮ ಬಡಾವಣೆಗೆ ಮುತ್ತಿಗೆ ಹಾಕಿತ್ತು. ಬಡಿಗೆಗಳು, ಖಡ್ಗಗಳು ಮತ್ತು ಪೆಟ್ರೋಲ್ನೊಂದಿಗೆ ಸಜ್ಜಿತರಾಗಿದ್ದ ಅವರು ನಮ್ಮ ಮನೆಗಳಿಗೆ ಬೆಂಕಿ ಹಚ್ಚಲು ಆರಂಭಿಸಿದ್ದರು. ನಾವು ಜೀವವನ್ನುಳಿಸಿಕೊಳ್ಳಲು ಮನೆಯಿದ ಓಡುವಂತಾಗಿತ್ತು. ನಾನು ಮನೆಯನ್ನು ತೊರೆದಾಗ ನನ್ನ ಪತ್ನಿ ಮತ್ತು ಇಬ್ಬರು ಮಕ್ಕಳು ನನ್ನ ಜೊತೆಯಲ್ಲಿರಲಿಲ್ಲ. ನಂತರ ಪರಿಹಾರ ಶಿಬಿರವೊಂದರಲ್ಲಿ ಅವರು ನನಗೆ ಸಿಕ್ಕಿದ್ದರು. ಅವರು ಬದುಕಿದ್ದಾರೆಯೇ ಎನ್ನುವುದು ಎರಡು ದಿನಗಳವರೆಗೂ ನನಗೆ ಗೊತ್ತಿರಲಿಲ್ಲ. ನಾವು ಮನೆಯಿಂದ ಹೊರಗೆ ಓಡುವಾಗ ಜೀವವುಳಿಸಿಕೊಳ್ಳುವ ಭರದಲ್ಲಿ ನಮ್ಮ ಬಳಿಯಿದ್ದ ಹಣ ಮತ್ತು ಆಭರಣವನ್ನು ಅಲ್ಲಿಯೇ ಬಿಟ್ಟಿದ್ದೆವು. ಧರಿಸಿದ್ದ ಬಟ್ಟೆ ಮಾತ್ರ ಆಗ ನಮ್ಮ ಆಸ್ತಿಯಾಗಿತ್ತು.
ನಾವು ಪರಿಹಾರ ಶಿಬಿರದಲ್ಲಿದ್ದಾಗ ನನ್ನ ಮಗನಿಗೆ ನಾಲ್ಕು ವರ್ಷ ಮತ್ತು ಮಗಳಿಗೆ ಆರು ವರ್ಷಗಳಾಗಿದ್ದವು. ಮಕ್ಕಳು ಆಹಾರ, ನೀರು ಮತ್ತು ಹಾಲಿಗಾಗಿ ಅಳುತ್ತಿದ್ದರು. ಶಿಬಿರವನ್ನು ಸ್ಥಾಪಿಸಿದ್ದವರು ತಮಗೆ ಸಾಧ್ಯವಿದ್ದ ಎಲ್ಲವನ್ನೂ ಮಾಡಿದ್ದರು, ಆದರೆ ಅಲ್ಲಿ ಅತಿಯಾಗಿ ಜನರು ತುಂಬಿದ್ದರು, ಸ್ಥಳಾವಕಾಶ ಮತ್ತು ಮೂಲಸೌಕರ್ಯಗಳ ಅತಿಯಾದ ಕೊರತೆಯಿತ್ತು.
ಗಲಭೆಗಳ ಬಳಿಕ ಹಲವಾರು ಸಂಘಸಂಸ್ಥೆಗಳು ಮುಸ್ಲಿಮರಿಗಾಗಿ ಅನೇಕ ತಾತ್ಕಾಲಿಕ ಪರಿಹಾರ ಶಿಬಿರಗಳನ್ನು ಸ್ಥಾಪಿಸಿದ್ದವು. ಈ ಪೈಕಿ ಹೆಚ್ಚಿನ ಶಿಬಿರಗಳು ಕಾಯಂ ಕೊಳಗೇರಿಗಳಾಗಿ ಪರಿವರ್ತನೆಗೊಂಡಿವೆ. ಇಂದು ರಾಜ್ಯಾದ್ಯಂತ 83 ಪರಿಹಾರ ಶಿಬಿರಗಳಲ್ಲಿ 3,000ಕ್ಕೂ ಅಧಿಕ ಕುಟುಂಬಗಳು ದಿನಗಳನ್ನು ದೂಡುತ್ತಿವೆ.
ಪರಿಹಾರ ಶಿಬಿರದಿಂದ ಹೊರಬಂದಾಗ ಬದುಕು ಸುಲಭವಾಗಿರಲಿಲ್ಲ. ಗಲಭೆಗಳಲ್ಲಿ ನಮ್ಮ ಮನೆ, ನಮ್ಮ ಫ್ಲೆಕ್ಸ್ ಪ್ರಿಂಟಿಂಗ್ ಫ್ಯಾಕ್ಟರಿ ಮತ್ತು ಇತರೆಲ್ಲ ಸೊತ್ತುಗಳನ್ನು ನಾವು ಕಳೆದುಕೊಂಡಿದ್ದೆವು. ನನ್ನ ಕುಟುಂಬವು ಎಲ್ಲವನ್ನೂ ಮೊದಲಿನಿಂದ ಆರಂಭಿಸಬೇಕಿತ್ತು. ಆಗ ನಾವು ಪ್ರಾಣಿಗಳಿಗಿಂತ ಕಡೆಯಾಗಿ ಬದುಕಿದ್ದೆವು. ನಮಗೆ ಬಾಡಿಗೆ ಕೊಡಲೂ ಸಾಧ್ಯವಿರಲಿಲ್ಲ, ನಾವು ಎಂತೆಂತಹ ಸ್ಥಳಗಳಲ್ಲಿ ವಾಸವಿದ್ದೆವು ಎನ್ನುವುದನ್ನು ನೀವು ಊಹಿಸಲೂ ಸಾಧ್ಯವಿಲ್ಲ.
ಆದರೂ ನಂತರ ನನ್ನ ಕಾಲುಗಳ ಮೇಲೆ ನಿಲ್ಲಲು ನನಗೆ ಸಾಧ್ಯವಾಗಿತ್ತು. ಹಿಂದು ಉದ್ಯಮಿಯೋರ್ವರು ಫ್ಲೆಕ್ಸ್ ಫ್ರಿಂಟಿಂಗ್ ಘಟಕವನ್ನು ಸ್ಥಾಪಿಸುವ ಮೂಲಕ ನನಗೆ ನೆರವಾಗಿದ್ದರು, ಅವರ ಬಳಿ ಹಣವಿತ್ತು ಮತ್ತು ನನ್ನ ಬಳಿ ಅನುಭವವಿತ್ತು. ದೇವರ ದಯೆಯಿಂದ ಈಗ ನಮ್ಮ ವ್ಯವಹಾರ ಚೆನ್ನಾಗಿ ನಡೆಯುತ್ತಿದೆ. ನನ್ನ ಮಗಳು ಬಿಎಸ್ಸಿ ಮುಗಿಸಿ ಮದುವೆಯಾಗಿದ್ದು, ಮಗ ಈಗಷ್ಟೇ ಎಂಎಸ್ಸಿ ಮುಗಿಸಿದ್ದಾನೆ.
ಕೃಪೆ: thequint.com