ಕುಂಭಾಶಿಯಲ್ಲಿ ಸರಣಿ ಅಪಘಾತ: ಸ್ಕೂಟರ್ ಸವಾರ ಮೃತ್ಯು

ಕುಂದಾಪುರ, ಎ.24: ಕುಂಭಾಶಿ ಶ್ರೀಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ಎದುರುಗಡೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಎ.24ರಂದು ಸಂಜೆ ವೇಳೆ ನಡೆದ ಸರಣಿ ಅಪಘಾತದಲ್ಲಿ ಓರ್ವ ಮೃತಪಟ್ಟು, ಮತ್ತೋರ್ವ ಗಂಭೀರವಾಗಿ ಗಾಯ ಗೊಂಡಿರುವ ಬಗ್ಗೆ ವರದಿಯಾಗಿದೆ.
ಮೃತರನ್ನು ಸ್ಕೂಟರ್ ಸವಾರ ತೆಕ್ಕಟ್ಟೆಯ ನಾಗರಾಜ್ ದೇವಾಡಿಗ ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಸೈಕಲ್ ಸವಾರ ಕೃಷ್ಣ ದೇವಾಡಿಗ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಥಾರ್ ಜೀಪು, ಅದೇ ದಿಕ್ಕಿನಲ್ಲಿ ಹೋಗುತ್ತಿದ್ದ ಸ್ಕೂಟರ್ ಹಾಗೂ ಸೈಕಲ್ಗೆ ಹಿಂದಿನಿಂದ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಬಳಿಕ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಸಂತೋಷ ಎಂಬವರ ಬೈಕಿಗೂ ಡಿಕ್ಕಿ ಹೊಡೆಯಿತು.
ಇದರ ಪರಿಣಾಮ ಸ್ಕೂಟರ್ ಸವಾರ ನಾಗರಾಜ ಹಾಗೂ ಸೈಕಲ್ ಸವಾರ ಕೃಷ್ಣ ದೇವಾಡಿಗ ಗಂಭೀರವಾಗಿ ಗಾಯಗೊಂಡರೆಂದು ತಿಳಿದುಬಂದಿದೆ. ಇದರಲ್ಲಿ ಗಂಭೀರವಾಗಿ ಗಾಯಗೊಂಡ ನಾಗರಾಜ್ ಸ್ಥಳದಲ್ಲಿಯೇ ಮೃತ ಪಟ್ಟರು. ತೀವ್ರವಾಗಿ ಗಾಯಗೊಂಡಿದ್ದ ಕೃಷ್ಣ ದೇವಾಡಿಗ ಅವರನ್ನು ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ಅಪಘಾತದಿಂದ ಬೈಕ್, ಸ್ಕೂಟರ್ ಹಾಗೂ ಸೈಕಲ್ ಜಖಂಗೊಂಡಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.