ಕೊಲಿಜಿಯಂ ರದ್ದತಿ ಕೋರಿರುವ ಅರ್ಜಿ: ವಿಚಾರಣಾ ದಿನಾಂಕ ಪ್ರಕಟಿಸಲಿರುವ ಸರ್ವೋಚ್ಚ ನ್ಯಾಯಾಲಯ
ಹೊಸದಿಲ್ಲಿ, ಎ.24: ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರ ನೇಮಕಾತಿಗಳಿಗಾಗಿ ಕೊಲಿಜಿಯಂ ವ್ಯವಸ್ಥೆಯನ್ನು ರದ್ದುಗೊಳಿಸುವಂತೆ ಮತ್ತು ರಾಷ್ಟ್ರೀಯ ನ್ಯಾಯಾಂಗ ನೇಮಕಾತಿಗಳ ಆಯೋಗ (ಎನ್ಜೆಎಸಿ)ದ ಪುನರುಜ್ಜೀವನ ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಗಾಗಿ ತಾನು ದಿನಾಂಕವನ್ನು ಪ್ರಕಟಿಸುವುದಾಗಿ ಸರ್ವೋಚ್ಚ ನ್ಯಾಯಾಲಯವು ಸೋಮವಾರ ತಿಳಿಸಿತು.
ಕೆಲವು ತಿಂಗಳುಗಳ ಹಿಂದೆ ಕೊಲಿಜಿಯಂ ವ್ಯವಸ್ಥೆಯ ವಿರುದ್ಧ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರ ದಾಳಿಗಳ ನಡುವೆಯೇ ಅದನ್ನು ರದ್ದುಗೊಳಿಸುವಂತೆ ಕೋರಿ ಅರ್ಜಿಯನ್ನು ಸಲ್ಲಿಸಲಾಗಿತ್ತು.
ಅರ್ಜಿಯು ಎನ್ಜೆಎಸಿಯ ಪುನರುಜ್ಜೀವನವನ್ನೂ ಕೋರಿದೆ. ಅಕ್ಟೋಬರ್,2015ರಲ್ಲಿ ಸರ್ವೋಚ್ಚ ನ್ಯಾಯಾಲಯವು ಎನ್ಜೆಎಸಿಯನ್ನು ರದ್ದುಗೊಳಿಸುವ ಮುನ್ನ ಸಾಂವಿಧಾನಿಕ ನ್ಯಾಯಾಲಯಗಳಿಗೆ ನ್ಯಾಯಾಧೀಶರ ನೇಮಕಾತಿಗಳಲ್ಲಿ ಸರಕಾರವು ನ್ಯಾಯಾಂಗದೊಂದಿಗೆ ಸಮಾನ ಪಾತ್ರವನ್ನು ಹೊಂದಿತ್ತು. 2015ರ ಸಾಂವಿಧಾನಿಕ ಪೀಠದ ತೀರ್ಪು ಎನ್ಜೆಎಸಿ ಕಾರ್ಯವಿಧಾನವನ್ನು ಪರಿಚಯಿಸಿದ್ದ 99ನೇ ಸಾಂವಿಧಾನಿಕ ತಿದ್ದುಪಡಿ ಕಾಯ್ದೆಯನ್ನು ತೊಡೆದು ಹಾಕುವ ಮೂಲಕ ಜನತೆಯ ಇಚ್ಛೆಗೆ ವಿರುದ್ಧವಾಗಿ ವರ್ತಿಸಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.