2002ರ ಮಲಂಕರ ವರ್ಗೀಸ್ ಹತ್ಯೆ ಪ್ರಕರಣ: ಎಲ್ಲ 19 ಆರೋಪಿಗಳು ಖುಲಾಸೆ
ಕೊಚ್ಚಿ, ಎ. 24: ಜಾಕೋಬೈಟ್ ಹಾಗೂ ಆರ್ಥೋಡಾಕ್ಸ್ ಮಲಂಕರ ಚರ್ಚ್ ಗಳ ನಡುವಿನ ವೈಷಮ್ಯಕ್ಕೆ ಸಂಬಂಧಿಸಿ 2002ರ ಮಲಂಕರ ವರ್ಗೀಸ್ ಅವರ ಹತ್ಯೆ ಪ್ರಕರಣದ ಪ್ರಧಾನ ಆರೋಪಿ ಪಾದ್ರಿ ಸೇರಿದಂತೆ ಎಲ್ಲ 19 ಮಂದಿ ಆರೋಪಿಗಳನ್ನು ಸಿಬಿಐ ನ್ಯಾಯಾಲಯ ಸೋಮವಾರ ಖುಲಾಸೆಗೊಳಿಸಿದೆ.
ಜಾಕೋಬೈಟ್ ಬಣದ ಪಾದ್ರಿ ಸೇರಿದಂತೆ 19 ಮಂದಿ ಆರೋಪಿಗಳ ವಿರುದ್ಧ ಯಾವುದೇ ದೃಢ ಪುರಾವೆಗಳನ್ನು ಪ್ರಸ್ತುತಪಡಿಸಲು ಪ್ರಾಸಿಕ್ಯೂಷನ್ ವಿಫಲವಾದ ಬಳಿಕ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಲು ಸಿಬಿಐ ನ್ಯಾಯಾಲಯದ ನ್ಯಾಯಾಧೀಶ ಅನಿಲ್ ಕೆ. ಬಾಸ್ಕರ್ ಅವರು ನಿರ್ಧರಿಸಿದರು.
ಪ್ರಕರಣದಿಂದ ಖುಲಾಸೆಗೊಂಡವರು ಫಾ. ವರ್ಗೀಸ್ ತೆಕ್ಕಕ್ಕೆರ, ಜಾಯ್ ವರ್ಗೀಸ್ ಆಲಿಯಾಸ್ ಕೆ. ಮ್ಯಾಥ್ಯೂ, ಅಬ್ರಹಾಂ ಪೌಲೋಸ್, ಎ.ವಿ. ತಂಬಿ, ಅಬ್ದುಲ್ ವಹಾಬ್ ಎಂ.ಎಂ., ಸಜಿನ್ ಸಜಿಮೋನ್, ವಿ.ಎನ್. ಪ್ರತೇಶ್, ಪಿ.ಜಿ. ಪ್ರಸಾದ್, ಪಿ.ಪಿ. ಟೋನಿ, ಜೈಸನ್ ಕೆ.ಜೆ., ಜಯರಾಜ್ ವಿ.ಎನ್, ಶ್ರೀವಲ್ಸನ್ ಪಿ.ಜೆ., ಪಿ.ಡಿ. ರಾಯ್, ಅನಿಲ್ ಡೇವಿಸ್, ಕೆ.ಆರ್ ಆನಂದ್, ಪಿ.ಪಿ. ಅಂತು, ಶಿವನ್ ಎ.ಎರ್. ಹಾಗೂ ಜೋಸ್ಮೋನ್ ಸಿ.ವಿ. ಘಟನೆಯ 20 ವರ್ಷಗಳ ಬಳಿಕ ನ್ಯಾಯಾಲಯದ ತೀರ್ಪು ಹೊರಬಿದ್ದಿದೆ.
ವಿಚಾರಣೆ ಸಂದರ್ಭ ಆರೋಪಿಗಳಾಗಿದ್ದ ಜಯರಾಜ್ ವಿ.ಎನ್, ಅನಿಲ್ ಡೇವಿಸ್ ಹಾಗೂ ಪಿ.ಪಿ. ಅಂತು ಮೃತಪಟ್ಟಿದ್ದಾರೆ. ಈ ತೀರ್ಪಿನಿಂದ 2007ರಲ್ಲಿ ತನಿಖೆ ಕೈಗೆತ್ತಿಕೊಂಡ ಸಿಬಿಐಗೆ ತೀವ್ರ ಹಿನ್ನಡೆ ಉಂಟಾಗಿದೆ. ಈ ಪ್ರಕರಣ ಮಲಂಕರ ಆರ್ಥೋಡಾಕ್ಸ್ ಬಣದ ನಾಯಕ ವರ್ಗೀಸ್ ಅವರನ್ನು ತಂಡವೊಂದು ಎರ್ನಾಕುಳಂ ಜಿಲ್ಲೆಯ ಪೆರುಂಬಾವೂರು ಸಮೀಪ ಎಂ.ಸಿ. ರಸ್ತೆಯಲ್ಲಿರುವ ಕಾರಿನ ವರ್ಕ್ಶಾಪ್ ಹೊರಗೆ 2002 ಡಿಸೆಂಬರ್ 5ರಂದು ಹತ್ಯೆಗೈದ ಘಟನೆಗೆ ಸಂಬಂಧಿಸಿದೆ.
ಜಾಕೋಬೈಟ್ ಹಾಗೂ ಆರ್ಥೋಡಾಕ್ಸ್ ಬಣಗಳ ನಡುವಿನ ದ್ವೇಷದ ಹಿನ್ನೆಲೆಯಲ್ಲಿ ವರ್ಗೀಸ್ ಅವರನ್ನು ಹತ್ಯೆಗೈಯಲು ತಂಡವೊಂದಕ್ಕೆ ಗುತ್ತಿಗೆ ನೀಡಲಾಗಿತ್ತು. ಈ ಪ್ರಕರಣವನ್ನು ಮೊದಲು ಕೇರಳ ಪೊಲೀಸರು ತನಿಖೆ ನಡೆಸಿದ್ದರು.
ಅನಂತರ 2007ರಲ್ಲಿ ಸಿಬಿಐ ಚೆನ್ನೈ ಪ್ರಕರಣವನ್ನು ಕೈಗೆತ್ತಿಕೊಳ್ಳುವ ಮುನ್ನ ಕೈಮ್ ಬ್ರಾಂಚ್ಗೆ ವರ್ಗಾವಣೆ ಮಾಡಲಾಗಿತ್ತು. ಸಿಬಿಐ ಪರ ವಕೀಲರಾಗಿ ಬಿಜು ಬಾಬು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಆರೋಪಿಗಳ ಪರವಾಗಿ ವಕೀಲರಾದ ಬಿ. ರಾಮನ್ ಪಿಳ್ಳೆ, ಥಾಮಸ್ ಅಬ್ರಹಾಂ ನಿಲಖಪಿಲ್ಲಿ, ಎಂ. ಸುನೀಲ್ ಕುಮಾರ್, ವಿ.ಟಿ. ರಘುನಾಥ್ ಹಾಗೂ ಐಸಾಕ್ ಥಾಮಸ್ ವಾದಿಸಿದ್ದರು.