ಅಪಘಾತ ರಹಿತ ಚಾಲನಾ ಸೇವೆ: ಕೆಎಸ್ಸಾರ್ಟಿಸಿ ಚಾಲಕರಿಗೆ ಸನ್ಮಾನ

ಬೆಂಗಳೂರು, ಎ.24: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ 33 ವರ್ಷಗಳ ಕಾಲ ಅಪಘಾತ ರಹಿತ ಚಾಲನಾ ಸೇವೆ ಸಲ್ಲಿಸಿ, ರಾಜ್ಯ ರಸ್ತೆ ಸಾರಿಗೆ ನಿಗಮಗಳ ಒಕ್ಕೂಟ ಪ್ರಧಾನ ಮಾಡುವ ‘ಹೀರೋಸ್ ಆನ್ ದ ರೋಡ್ ಪ್ರಶಸ್ತಿ’ ಪಡೆದ ಎಜಾಜ್ ಅಹಮ್ಮದ್ ಶರೀಫ್ ಬಿಲ್ಲೆ ಹಾಗೂ ಇಶಾಕ್ ಶರೀಫ್ ಬಿಲ್ಲೆ ಅವರನ್ನು ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ತಲಾ 5ಸಾವಿರ ರೂ.ನಗದು ಪುರಸ್ಕಾರ ನೀಡಿ ಸನ್ಮಾನಿಸಿದರು.
ಈ ವೇಳೆ ಮಾತನಾಡಿದ ಅವರು, ಈ ಚಾಲಕರು ಈಗಾಗಲೇ ನಿಗಮದಿಂದ ಬೆಳ್ಳಿ ಮತ್ತು ಚಿನ್ನದ ಪದಕ ಪಡೆದಿರುವುದನ್ನು ಸ್ಮರಿಸಿದರು. ಹಾಗೂ ಚಾಲನಾ ವೃತ್ತಿಯು ಅತ್ಯಂತ ಕಷ್ಟ ಮತ್ತು ಜವಾಬ್ದಾರಿಯಿಂದ ಕೂಡಿದ್ದು, ಅಪಘಾತಗಳನ್ನು ತಡೆಗಟ್ಟುವುದು ಸವಾಲೇ ಸರಿ. ತಮ್ಮದಲ್ಲದ ತಪ್ಪಿನಿಂದಲೂ ಹಲವು ಬಾರಿ ಅಪಘಾತ ಉಂಟಾಗುತ್ತದೆ. ಚಾಲಕರು ಹೆಚ್ಚು ಸಂಯಮ ಮತ್ತು ತಾಳ್ಮೆಯನ್ನು ಹೊಂದಿದ್ದರೆ ಮಾತ್ರ ಈ ರೀತಿಯ ಸಾಧನೆ ಮಾಡಲು ಸಾಧ್ಯ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ತೆಲಂಗಾಣ ಮಾಸ್ಟರ್ಸ್ ವೇಟ್ ಲಿಫ್ಟಿಂಗ್ ಅಸೋಸಿಯೇಷನ್ ಆಯೋಜಿಸಿದ್ದ 2023ನೇ ಸಾಲಿನ ಸೌತ್ ಇಂಡಿಯನ್ ಮಾಸ್ಟರ್ಸ್ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ನಲ್ಲಿ ಪ್ರಥಮ ಸ್ಥಾನಗಳಿಸಿ, ಚಿನ್ನದ ಪದಕ ಗೆದ್ದಿರುವ ಮುದ್ರಣಾಲಯದ ಕಿರಿಯ ಸಹಾಯಕಿ ಖುದ್ಸಿಯ ನಜೀರ್ ಅವರನ್ನು ಅಭಿನಂದಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ನಿಗಮದ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರ ಹಾಗೂ ಹಿರಿಯ ಅಧಿಕಾರಿಗಳು, ಚಾಲಕರ ಕುಟುಂಬದವರು ಹಾಜರಿದ್ದರು.